Advertisement

ಬಿಜೆಪಿಯಿಂದ ಮಾತ್ರ ದೇಶಕ್ಕೆ ಉಜ್ವಲ ಭವಿಷ್ಯ ನೀಡಲು ಸಾಧ್ಯ: ಸಿಎಂ ಬೊಮ್ಮಾಯಿ 

08:07 PM Dec 31, 2022 | Team Udayavani |

ಬೆಂಗಳೂರು: ಭಾರತ ದೇಶವನ್ನು ಉಳಿಸಲು, ಬೆಳಸಲು, ಉಜ್ವಲ ಭವಿಷ್ಯ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಷಾ ಅವರೊಂದಿಗೆ ಶನಿವಾರ ಬೂತ್‌ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸದಸ್ಯರಾಗಿ ಕೆಲಸ ಮಾಡುತ್ತಿರುವುದು ನಮ್ಮೆಲ್ಲರ ಅದೃಷ್ಟ. ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಚೈನಾದ ಕಮ್ಯುನಿಸ್ಟ್‌ ಪಕ್ಷಕ್ಕಿಂತ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ ಕೇವಲ ಸಂಖ್ಯೆಯಲ್ಲಿ ಮಾತ್ರ ದೊಡ್ಡದಲ್ಲದೆ, ವಿಚಾರದಲ್ಲಿಯೂ ದೊಡ್ಡದು ಎಂದು ಹೇಳಿದರು.

ಭಾರತ ಮಾತೆಯನ್ನು ಆರಾಧ್ಯ ದೇವತೆ ಎಂದು ತಿಳಿದವರು ನಾವು. ದೇಶ ಮೊದಲು ಎಂಬ ಭಾವನೆಯಿಂದ ಸಾರ್ವಜನಿಕ ಬದುಕು ನಡೆಸುತ್ತಿದ್ದೇವೆ. ದೇಶಕ್ಕಾಗಿ ಜೀವನ ಮಾಡಲು, ತ್ಯಾಗ ಮಾಡಲೂ ಸಿದ್ಧ ಎನ್ನುವ ದೇಶಭಕ್ತರ ಪಕ್ಷ. ಕಾಂಗ್ರೆಸ್‌ ಪಕ್ಷದವರು ಕೇವಲ ಅಧಿಕಾರಕ್ಕಾಗಿ ಇರುವ ರಾಷ್ಟ್ರೀಯ ಪಕ್ಷದ ಸದಸ್ಯರು. ಇದು ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ. ನಾವು ಭಾರತ್‌ ಮಾತಾ ಕಿ ಜೈ ಅಂದರೆ ಅವರು ಸೋನಿಯಾ ಮಾತಾ ಕಿ ಜೈ ಅನ್ನುತ್ತಾರೆ. ಅವರ ನಿಷ್ಠೆ ಇಟಲಿಯ ನಾಯಕರಿಗೆ ಇದ್ದರೆ, ನಮ್ಮ ಭಕ್ತಿ ಭಾರತ ಮಾತೆಗೆ ಎಂದು ತಿಳಿಸಿದರು.
ಈ ದೇಶದ ಅಖಂಡತೆ, ಏಕತೆ, ಆಂತರಿಕ ಮತ್ತು ಬಾಹ್ಯ ಸುರಕ್ಷತೆಯ ಜೊತೆಗೆ ಈ ದೇಶದ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಬಡವರ ಚಿಂತನೆ, ಕಾರ್ಯಕ್ರಮಗಳನ್ನು ಬಿಜೆಪಿ ಮಾಡಲು ಸಾಧ್ಯ. ಒಂದು ಪಕ್ಷ ಯಶಸ್ವಿಯಾಗಲು ನೀತಿ, ಸಿದ್ಧಾಂತ,ಅದರ ಕ್ರಿಯಾಶೀಲ ಸದಸ್ಯರು ಕಾರಣ. ಉನ್ನತ ಮಟ್ಟದ ಧ್ಯೇಯೋದ್ದೇಶ, ನಾಯಕತ್ವ ನಮಲ್ಲಿದೆ. ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರು. ಭಾರತವನ್ನು ಮುನ್ನಡೆಸುವ ಬಗ್ಗೆ ಸ್ಪಷ್ಟತೆವುಳ್ಳ ನಾಯಕರು ಎಂದು ಹೇಳಿದರು.
**
2 ಲಕ್ಷ ಕೋಟಿ ಸಾಲ
ಕರ್ನಾಟಕ ಪ್ರಗತಿಪರ ರಾಜ್ಯ. ಇದನ್ನು ಅತ್ಯಂತ ಹಿಂದುಳಿದ ರಾಜ್ಯ ವನ್ನಾಗಿ ಮಾಡುವ ಕೆಲಸವನ್ನು ಕಾಂಗ್ರೆಸ್‌ 5 ವರ್ಷ ಮಾಡಿತು. ಸಿದ್ದರಾಮಯ್ಯ ಅವರು 5 ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೋವಿಡ್‌ ಇರಲಿಲ್ಲ. ಸಿದ್ದರಾಮಯ್ಯ ಬರುವವರೆಗೂ 1 ಲಕ್ಷ ಕೋಟಿ ಸಾಲವಿತ್ತು. ಅವರು ಬಂದ ನಂತರ ಹೆಚ್ಚಾಯಿತು ಎಂದು ದೂರಿದರು.

ಕೋವಿಡ್‌ ನಿರ್ವಹಣೆ ಮಾಡುತ್ತಾ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಕಳೆದ ಸಾಲಿನಲ್ಲಿ 10 ಸಾವಿರ ಕೋಟಿ ಸಾಲ ತೆಗೆದುಕೊಳ್ಳದೇ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ರಾಜ್ಯದಲ್ಲಿ 6000 ರಾಷ್ಟ್ರಿಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಜಲಜೀವನ ಮಿಷನ್‌ ಯೋಜನೆಯಡಿ ರಾಜ್ಯದಲ್ಲಿ ಕಳೆದ 2 ವರ್ಷದ ಅವಧಿಯಲ್ಲಿ 30 ಲಕ್ಷ ಮನೆಗಳಿಗೆ ನೀರು ಸಂಪರ್ಕ ನೀಡಲಾಗಿದ್ದು, ಇನ್ನೂ 25 ಲಕ್ಷ ಸಂಪರ್ಕ ನೀಡಲಾಗುವುದು. ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ದೌರ್ಭಾಗ್ಯ ಕೊಟ್ಟರು. ತಿನ್ನುವ ಅನ್ನ, ದಿಂಬು ಹಾಸಿಗೆ, ಸಣ್ಣ ನೀರಾವರಿಯಲ್ಲಿ ಭ್ರಷ್ಟಾಚಾರ ಮಾಡಿದರು. ನಮ್ಮ ಮೇಲೇ ಹತಾಶರಾಗಿ ಆರೋಪಗಳನ್ನು ಮಾಡುತ್ತಾರೆ. ಪುರಾವೆಗಳ ಸಮೇತ ಆರೋಪಗಳನ್ನು ಮಾಡಲಿ, ತನಿಖೆ ಮಾಡಿಸಲಾಗುವುದು ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ ಯೋಜನೆ, ಮುದ್ರಾ, ಉಜ್ವಲ, ಪ್ರಧಾನಮಂತ್ರಿ ಆವಾಸ ಯೋಜನೆ, ಆಯುಷ್ಮಾನ ಭಾರತ ಯೋಜನೆಗಳನ್ನು ಜನರ ಮುಂದಿಡಲಾಗಿದೆ. ರಾಜ್ಯದಲ್ಲಿ ರೈತ ವಿದ್ಯಾನಿಧಿ, ಕೂಲಿಕಾರರು, ಮೀನುಗಾರರು, ನೇಕಾರರ ಮಕ್ಕಳಿಗೆ ವಿದ್ಯಾನಿಧಿ, ಯುವಕರಿಗೆ ಸ್ವಯಂಉದ್ಯೋಗ ಕಲ್ಪಿಸುವ ಸ್ವಾಮಿ ವಿವೇಕಾನಂದ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಗಳ ಮೂಲಕ 5 ಲಕ್ಷ ಮಹಿಳೆಯರು ಹಾಗೂ 5 ಲಕ್ಷ ಯುವಕರಿಗೆ ಈ ಯೋಜನೆಗಳಿಂದ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

Advertisement

ಇದನ್ನೂ ಓದಿ: ಕಳಸಾ-ಬಂಡೂರಿ; ರಾಜಕೀಯ ಉದ್ದೇಶದಿಂದ ಇಲ್ಲ ಸಲ್ಲದ ಆರೋಪ: ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next