Advertisement

ಈಗ ವಾಗ್ವಾದದ ಕಾವು :ಟೈಲರ್‌ ಹತ್ಯೆ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಟು ಟೀಕೆ

01:51 AM Jun 30, 2022 | Team Udayavani |

ಹೊಸದಿಲ್ಲಿ/ಉದಯಪುರ: ರಾಜಸ್ಥಾನದ ಉದಯ­ಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಶಿರಚ್ಛೇದ ಪ್ರಕರಣ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣ­ವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರ ಆಂತರಿಕ ಭಿನ್ನಮತ ಪರಿಹರಿಸುವಲ್ಲಿಯೇ ನಿರತವಾಗಿದೆ. ಇದರಿಂದಾ­ಗಿಯೇ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ.

Advertisement

ರಾಜಸ್ಥಾನದಲ್ಲಿ ಇಂತಹ ಘಟನೆಗಳು ನಡೆದಿರುವುದು ಮೊದಲ ಬಾರಿಗೆ ಅಲ್ಲ. ಟೈಲರ್‌ ಹತ್ಯೆ ಖಂಡನೀಯ. ಆದರೆ ಈ ಬಾರಿ ಎಲ್ಲವನ್ನೂ ಮೀರಿದೆ ಎಂದು ಠಾಕೂರ್‌ ದೂರಿದ್ದಾರೆ. ಏಳು ದಿನಗಳ ಹಿಂದೆಯೇ ವೀಡಿಯೋ ಬೆಳಕಿಗೆ ಬಂದಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ರಾಜಸ್ಥಾನ ಕಾಂಗ್ರೆಸ್‌ ಘಟಕದ ಒಳಜಗಳಕ್ಕೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾನೆ ಎಂದು ದೂರಿದರು.

ಉಗ್ರ ಕೃತ್ಯ: ಹತ್ಯೆ ಯತ್ನ ಉಗ್ರ ಕೃತ್ಯ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಆರೋಪಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರಕಾರವೇ ಈ ಘಟನೆಗೆ ಕಾರಣ. ದ್ವೇಷದ ಸರಣಿ ಘಟನೆಗಳಲ್ಲಿ ಇದೂ ಒಂದಾಗಿದೆ ಎಂದು ಅವರು ದೂರಿದ್ದಾರೆ. ಈ ಘಟನೆಯಲ್ಲಿ “ಜೆಹಾದಿ’ ಶಕ್ತಿಗಳು ಒಳಗೊಂಡಿವೆ. ಕಾಂಗ್ರೆಸ್‌ ತುಷ್ಟೀಕರಣದಲ್ಲಿ ತೊಡಗಿದೆ ಎಂದ ರಾಥೋಡ್‌, ರಕ್ಷಣೆ ಕೋರಿದ್ದ ಕನ್ಹಯ್ಯ ಅವರನ್ನೇ ಪೊಲೀಸರು ಬಂಧಿಸಿದ್ದು ಎಂಥಾ ಕ್ರಮ ಎಂದು ಪ್ರಶ್ನಿಸಿದ್ದಾರೆ. ಆದರೆ ಅವರನ್ನು ಹತ್ಯೆ ಮಾಡಿದ ವ್ಯಕ್ತಿಯ ಸಹೋದರನಿಗೆ ಪೊಲೀಸರು ರಕ್ಷಣೆ ನೀಡಿದ್ದೆಷ್ಟು ಸರಿ ಎಂದು ಪ್ರಶ್ನಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಅಶೋಕ್‌ ಅಶೋಕ್ ಗೆಹ್ಲೋಟ್ ಉದಯಪುರದಲ್ಲಿ ಮತ್ತು ಜೈಪುರದಲ್ಲಿ ದಿನವಿಡೀ ಸರಣಿ ಸಭೆಗಳನ್ನು ನಡೆಸಿದ್ದಾರೆ.

ವಿವಾದಕ್ಕೊಳಗಾದ ಸಿಎಂ ಮನವಿ: “ದೇಶದಲ್ಲಿ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮನವಿ ಮಾಡಬೇಕು’ ಎಂದು ಮಂಗಳವಾರ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಾಡಿದ ಮನವಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಹತ್ಯೆ ವೀಡಿಯೋ ವೈರಲ್‌ ಆಗಿರುವ ಇಂಥ ಸಂದರ್ಭದಲ್ಲಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮತ್ತು ಬಿಜೆಪಿ ವಕ್ತಾರ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಖಂಡನೆ: ಟೈಲರ್‌ ಶಿರಚ್ಛೇದದ ಬಗ್ಗೆ ಮುಸ್ಲಿಂ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಇಂಥ ಕೃತ್ಯಗಳು ಇಸ್ಲಾಂನ ವಿರುದ್ಧವಾದದ್ದು ಮತ್ತು ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಪ್ರವಾದಿ ಮೊಹಮ್ಮದ್‌ ಅವರನ್ನು ಅವಮಾನಿಸಿದ ನೂಪುರ್‌ ಶರ್ಮಾ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದೇ ಆಕ್ಷೇಪಾರ್ಹ ಅಂಶ. ಈ ಕೃತ್ಯವನ್ನು ಇಸ್ಲಾಮಿಕ್‌ ಶರಿಯತ್‌ ಸಮರ್ಥಿ ಸುವುದಿಲ್ಲ ಎಂದು ಅದು ಹೇಳಿದೆ. ಹೊಸದಿಲ್ಲಿ ಯಲ್ಲಿರುವ ಜಾಮಾ ಮಸೀದಿಯ ಶಾಹಿ ಇಮಾಮ್‌ ಸಯ್ಯದ್‌ ಅಹ್ಮದ್‌ ಬುಖಾರಿ ಪ್ರಕ್ರಿಯೆ ನೀಡಿ “ಕನ್ಹಯ್ನಾ ಲಾಲ್‌ ಅವರನ್ನು ಹತ್ಯೆ ಮಾಡಿದ್ದು ಹೇಡಿತನದ ಕೃತ್ಯ ಮತ್ತು ಇಸ್ಲಾಂ ತಣ್ತೀಗಳಿಗೆ ವಿರುದ್ಧವಾದದ್ದು’ ಎಂದು ಹೇಳಿದ್ದಾರೆ.

ನಿರ್ಲಕ್ಷ್ಯಕ್ಕೆ ಬೆಲೆ ತೆತ್ತ ಪೊಲೀಸರು
ಹತ್ಯೆಗೀಡಾದ ಕನ್ಹಯ್ಯ ಲಾಲ್‌ ಅವರಿಗೆ ಜೂ.15ರಂದೇ ಕೆಲವರಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಅಂದೇ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಲಕ್ಷ್ಯ ವಹಿಸದೇ ಇದ್ದ ಕಾರಣಕ್ಕಾಗಿ ಎಎಸ್‌ಐ ಮತ್ತು ಠಾಣಾಧಿಕಾರಿ ಯನ್ನು ಅಮಾನತು ಮಾಡಲಾಗಿದೆ. ತಮ್ಮ ಅಂಗಡಿಯ ಮುಂಭಾಗದಲ್ಲಿ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಧನ್‌ಮಂಡಿ ಠಾಣೆಯಲ್ಲಿ ದೂರು ನೀಡಿದ್ದರು. ಠಾಣೆಯಲ್ಲಿನ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೇ ವೇಳೆ ವಿವಾದಾತ್ಮಕ ಪೋಸ್ಟ್‌ಗೆ ಸಂಬಂಧಿಸಿದಂತೆ ಜೂ.11ರಂದು ಅಸುನೀಗಿದ ಟೈಲರ್‌ ವಿರುದ್ಧವೇ ದೂರು ಸಲ್ಲಿಕೆಯಾಗಿತ್ತು. ಅದರ ಹಿನ್ನೆಲೆಯಲ್ಲಿ ಪೊಲೀಸರೇ ನಜೀಂ ಹಾಗೂ ಕನ್ಹಯ್ಯ ಲಾಲ್‌ ನಡುವೆ ರಾಜಿ ಮಾಡಿಸಿದ್ದರು ಎಂದು ಹೇಳಲಾಗಿದೆ. ಜತೆಗೆ ಅಂಗಡಿಯನ್ನು ತೆರೆಯದಂತೆ ತಮ್ಮ ಮೇಲೆ ಒತ್ತಡ ಹೇರಲಾಗಿತ್ತು ಎಂದೂ ಉಲ್ಲೇಖಿಸಿದ್ದಾರೆ. ನಜೀಂ ಸೇರಿದಂತೆ ಐವರು ತಮ್ಮ ಅಂಗಡಿಯ ಸುತ್ತ ತಿರುಗಾಡುತ್ತಿದ್ದರು ಎಂದು ಆರೋಪಿಸಿದ್ದರು.

ಬಂದೋಬಸ್ತ್ ನಲ್ಲಿ ಅಂತ್ಯಕ್ರಿಯೆ
ಹತ್ಯೆಗೀಡಾದ ಕನ್ಹಯ್ಯ ಲಾಲ್‌ ಅವರ ಅಂತ್ಯಕ್ರಿಯೆ ಬಿಗಿಪೊಲೀಸ್‌ ಬಂದೋಬಸ್ತ್ ನಡುವೆ ನಡೆಯಿತು. ಉದಯಪುರದಲ್ಲಿರುವ ಅವರ ನಿವಾಸಕ್ಕೆ ತೆರಳಿ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಅನಂತರ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಲಾಲ್‌ ಅವರ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ಗೋಳಿಡುತ್ತಾ ಇದ್ದದ್ದು ಎಂಥವರ ಹೃದಯವನ್ನೂ ಕರಗಿಸುವಂತೆ ಇತ್ತು. ಬಿಗಿ ಬಂದೋಬಸ್ತ್ ನ ಹೊರತಾಗಿಯೂ ಕೆಲವು ಕಿಡಿಗೇಡಿಗಳು, ಶ್ಮಶಾನದ ಗೇಟ್‌ಗೆ ಕಲ್ಲು ಎಸೆದಿದ್ದಾರೆ ಮತ್ತು ಕಾರೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ರಾಜಸ್ಥಾನ ವಿಪಕ್ಷ ನಾಯಕ ಗುಲಾಬ್‌ಚಂದ್‌ ಕಟಾರಿಯಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next