Advertisement

ಬಸ್ಸಿನಲಿ ಕೇಳಿದ ಮೇಘ ಮಲ್ಹಾರ

10:34 AM Sep 06, 2017 | |

ಬಸ್ಸಿನಲ್ಲಿ ಯಾರೋ “ಥೂ ದರಿದ್ರ ಮಳೆ ಈಗಲೇ ಬರಬೇಕಾ?’ ಅಂತ ಒಂದು ಸಾಲನ್ನು ಆರಂಭಿಸಿಬಿಟ್ಟರು ನೋಡಿ, ಮಿಕ್ಕವರೆಲ್ಲ ಒಬ್ಬೊಬ್ಬರಾಗಿ ಮಳೆಗೆ ಹಿಡಿಶಾಪ ಹಾಕತೊಡಗಿದರು…

Advertisement

ಕಚೇರಿ ಬಿಡುವ ಹೊತ್ತಿಗೇ ಮೋಡ ದಟ್ಟೈಸಿತ್ತು. ಅಷ್ಟರಲ್ಲೇ ಮಗಳ ಫೋನು; “ಮೀ ಎಲ್ಲಿದೀಯ? ಆಫಿಸಿಂದ ಹೊರಟ್ಯಾ? ಮಳೆ ಬರೋ ಹಾಗಿದೆ. ಬೇಗ್‌ ಬಾ’. ಅವಳ ಬಳಿ ಮಾತಾಡ್ತಾ ಮಾತಾಡ್ತಾ ಓಡು ನಡಿಗೆಯಲ್ಲಿ ಬಸ್‌ಸ್ಟಾಪಿಗೆ ಬಂದಿದ್ದೇ ಗೊತ್ತಾಗ್ಲಿಲ್ಲ. ಸಣ್ಣಹನಿಗಳಾಗಿ ಶುರುವಾದ ಮಳೆ, ಬಸ್‌ಸ್ಟಾಪ್‌ ಸೇರುವ ಹೊತ್ತಿಗೆ ದಪ್ಪ ಹನಿಗಳಾಗಿ, ಬಸ್‌ ಬರುವ ಹೊತ್ತಿಗೆ ನನ್ನನ್ನು ಅರ್ಧಂಬರ್ಧ ನೆನೆಸಿತ್ತು.

ಹೊರಗೆ ಗುಡುಗು- ಮಿಂಚುಗಳ ಆರ್ಭಟ. ಕ್ಷಣಕ್ಕೊಮ್ಮೆ ಫ‌ಳ್‌ ಫ‌ಳಾರ್‌; ಮಿಂಚಿನ ತಾರಕಸ್ವರ. ಒಂದು ಮೂಲೆಯಲ್ಲಿ ಸೀಟು ಹಿಡಿದು ಕುಳಿತೆ. ಇದ್ದಕ್ಕಿದ್ದಂತೆ ಮಳೆ ಬಸ್ಸಿನೊಳಕ್ಕೂ ಬಂತು! ಸೋರುವ ಚಾವಣಿ, ಇರಚಲು ಬಡಿಯುವ ಕಿಟಕಿಯಿಂದ ನೀರು ಒಳಬಂದು, ಪ್ರಯಾಣಿಕರನ್ನೂ ಒದ್ದೆ ಮಾಡಿತ್ತು. ಅದೇ ವೇಳೆ, ಮಳೆಯೊಂದಿಗೆ ಒಂದಿಷ್ಟು ತಣ್ಣನೆಯ ದೃಶ್ಯಗಳು ಅಲ್ಲಿ ತಟಪಟ ಎನ್ನುತ್ತಿದ್ದವು. ಬಸ್ಸೆಂಬ ಧ್ಯಾನಸ್ಥ ಪಯಣದಲ್ಲಿ ಎಷ್ಟೋ ಸಲ ಕಂಡಕ್ಟರ್‌ನ ಜೇಬಿನ ಚಿಲ್ಲರೆ ಸದ್ದನ್ನು ಕೇಳಿಸಿಕೊಂಡಿದ್ದೆ. ಆದರೆ, ಇಂದು ಗುಡುಗು- ಸಿಡಿಲುಗಳ ಆರ್ಭಟದಲ್ಲಿ ಅದು ಕೇಳಿಸದೇ ಹೋಯಿತು. ಆ ಗುಡುಗನ್ನೂ ಗೌಣವಾಗಿಸುವಂತೆ ಅಲ್ಲಿ ಪ್ರಯಾಣಿಕರ ಮೊಬೈಲುಗಳು ಅಬ್ಬರಿಸುವುದು ಕಿವಿಗೆ ಬಿತ್ತು. ಒಂದೇ ಸಮನೆ ಆತ್ಮೀಯರ ಫೋನುಗಳು; “ಎಲ್ಲಿದ್ದೀಯ? ಜೋರು ಮಳೆ’. “ಆರ್‌ ಯು ಸೇಫ್?’, “ಸಲಾಮತ್‌ ಹೋ?’, “ಎಕ್ಕಡುನ್ನಾವೂ ಕ್ಷೇಮಂಗಾ ಉನ್ನಾವಾ?’- ನಾನಾ ಭಾಷೆಯನ್ನು ಒಂದೇ ಕಡೆಗೆ ಗುಡ್ಡೆ ಹಾಕಿತ್ತು ಆ ಮಳೆ. ಮಿಂಚು - ಗುಡುಗುಗಳಿಂದ ಭಯ ಹುಟ್ಟಿಸುತ್ತಿದ್ದ ಮಳೆಗೆ ಎದೆಗೊಟ್ಟು ಸಾಗುತ್ತಿದ್ದ ಬಸ್ಸಿನ ಧೈರ್ಯ ಮೆಚ್ಚಿದೆ. ತುಂಬಿದ ಬಸುರಿಯಂತೆ ಅದರ ಚಲನೆ. 

ಬಸ್ಸಿನಲ್ಲಿ ಯಾರೋ “ಥೂ ದರಿದ್ರ ಮಳೆ ಈಗಲೇ ಬರಬೇಕಾ?’ ಅಂತ ಒಂದು ಸಾಲನ್ನು ಆರಂಭಿಸಿಬಿಟ್ಟರು ನೋಡಿ, ಮಿಕ್ಕವರೆಲ್ಲ ಒಬ್ಬೊಬ್ಬರಾಗಿ ಮಳೆಗೆ ಹಿಡಿಶಾಪ ಹಾಕತೊಡಗಿದರು. “ಎಲ್ಲರೂ ಮನೆ ಸೇರಿದ ಮೇಲೆ ರಾತ್ರಿಯೆಲ್ಲಾ ಹುಯ್ಯಲಿ. ಯಾರು ಬೇಡಾಂತಾರೆ?’, “ಮನೆ  ಸೇರಿ¤àವೋ, ಇಲ್ವೋ ಅಂತಾಗಿಬಿಟ್ಟಿದೆ…’ ಈ ಮಾತುಗಳಿನ್ನೂ ಮುಗಿದಿರಲಿಲ್ಲ, ಅಷ್ಟರಲ್ಲೇ ಅಲ್ಲಿದ್ದ ಪರಿಸರ ಪ್ರೇಮಿಯೊಬ್ಬ “ಯಾರ್ರೀ ಅದು ಮಳೆಗೆ ಶಾಪ ಹಾಕೋದು? ಜನ ನೀರಿಲ್ಲದೆ ಸಾಯ್ತಾ ಇದಾರೆ. ಇವರಿಗೇನೋ ಮಳೆ ಬೇಡ್ವಂತೆ. ನಿಮ್ಮೊಬ್ಬರ ಕ್ಷೇಮ ನೋಡಬೇಡ್ರಿ, ನಿಮ್ಗೆ ಅನ್ನ ಹಾಕೋ ರೈತರ ಮುಖನೂ ನೋಡಿ’ ಅಂತ ರೇಗಿದ. ಆತನ ಮಾತಿಗೆ ಲೈಕ್‌ ಒತ್ತುವಂತೆ ಅಲ್ಲಿ ಇನ್ನೊಂದು ಧ್ವನಿ; “ಅವರ್ಯಾರೋ ಶ್ರೀಮಂತರು ಅಣ್ಣಾ, ದುಡ್ಡು ಕೊಟ್ಟು
ನೀರು ತರಿಸಿಕೊಳ್ತಾರೆ. ಪಾಪ, ಪ್ರಾಣಿ ಪಕ್ಷಿಗಳು ಎಲ್ಲಿಗೆ ಹೋಗ್ಬೇಕು?’. ಮಳೆಗೆ ಶಾಪ ಹಾಕಿದವರು ಇದನ್ನೆಲ್ಲ ಕೇಳಿ, “ಅಲ್ಲಾರೀ… ನಾನೇನು ಮಳೆನೇ ಬರಬಾರದು ಅಂದೆ°à? ಇನ್ನೂ ಸ್ವಲ್ಪ ಹೊತ್ತು ಕಳೆದು ಬಂದಿದ್ರೆ ಇದರ ಗಂಟೇನು ಹೋಗ್ತಿತ್ತು ಅಂದೆ. ಈಗ ನೋಡಿ, ಎಷ್ಟ್ ಕಷ್ಟ. 

ಒಂದು ಬಸ್ಸಲ್ಲಿ ಎರಡು ಬಸ್‌ ಜನ ಇದೀವಿ. ಈ ಮಳೆಗೆ ಬಸ್ಸು ಕೂಡಾ ನೋಡಿ ಹೇಗೆ ವಾಲಾಡ್ತಾ ಹೋಗ್ತಿದೆ. ಗ್ರಹಚಾರ ಕೆಟ್ಟು ಬಸ್ಸು ಮಗುಚಿ ಬಿದ್ರೆ, ನಮ್‌ ಜೀವದ ಕತೆ?’ ಎಂದು ಹೆದರಿಸಿಬಿಟ್ಟರು. ಅದನ್ನು ಕೇಳಿಸಿಕೊಂಡ, ಯಾರೋ ಬಸುರಿ ಭಯದಿಂದ, “ಸುಮ್ಮನಿರ್ರಿ… ಯಾಕೆ ಅಪಶಕುನ ನುಡಿದು ಹೆದರಿಸ್ತೀರಾ? ನಾನು ಎರಡು ಜೀವದವಳು. ಭಯ ಆಗಲ್ವಾ ನಂಗೆ?’ ಅಂತ ಕೇಳಿ, ಒಂದು ಕ್ಷಣ ಅವರ ಬಾಯಿಯನ್ನು ಮುಚ್ಚಿಸಿದರು. ಅಲ್ಲೇ ಇದ್ದ ಹಿರಿತಾಯಿಯೊಬ್ಬಳು, “ಆ ಚಾಮುಂಡೇಶ್ವರಿ ತಾಯಿನ ನೆನೆಸ್ಕೋ, ಏನೂ ಆಗಲ್ಲ. ಕ್ಷೇಮವಾಗಿ ಮನೆಗೆ ಸೇರೊತೀಯ’ ಅಂತ ಆಕೆಗೆ ಧೈರ್ಯ
ತುಂಬಿದರು. ನಾನು ಕಿಟಕಿಯಾಚೆ ನೋಡಿದೆ. 

Advertisement

ಈ ಮಳೆಯಲ್ಲಿ ಚಾಮುಂಡೇಶ್ವರಿ ಧೈರ್ಯ ಮಾಡಿ ಕಾಪಾಡಲು ಬರೋದೂ ಡೌಟು ಅಂತನ್ನಿಸಿ, ಒಂದು ಕ್ಷಣ ಬೆಚ್ಚಿದೆ. “ಯೋಯ್‌ ಸುಮ್ನೆ ನಿಂತ್ಕೊತೀರೋ ಇಲ್ವೋ? ನಿಮ್ಮ ಕೂಗಾಟದಿಂದ ಡ್ರೆ„ವರಿಗೆ ಟೆನ್ಶನ್‌ ಆಗುತ್ತೆ’ ಅಂತ ಕಂಡಕ್ಟರ್‌ ಹೇಳಿದ. ಎಲ್ಲರೂ ಒಂದು ಕ್ಷಣ ಗಪ್‌ಚುಪ್‌! ಬಸ್ಸು ಮಳೆನೀರಿನಲ್ಲಿ ದೋಣಿಯಂತೆ ಬಳುಕುತ್ತಾ ಸಾಗುತ್ತಲೇ ಇತ್ತು.  ಹಳ್ಳ ಎಲ್ಲಿದೆಯೋ, ಹಂಪ್‌ ಎಲ್ಲಿದೆಯೋ, ಕಲ್ಲು ಎಲ್ಲಿದೆಯೋ, ಅದರ ಹೆಡ್‌ಲೈಟಿನ ಕಣ್ಣುಗಳಿಗೂ ಕಾಣೆ! ಧಡ್‌ ಧಡ್‌ ಎನ್ನುವ ಸದ್ದುಗಳು ಮಾತ್ರ ಕೆಳಭಾಗದಿಂದ ಉದ್ಭವವಾಗುತ್ತಲೇ ಇತ್ತು. ಜನರ ಜೀವವೂ ಧಡಧಡ ಎನ್ನುತ್ತಿತ್ತೇನೋ! ಒಂದೊಂದು ಸ್ಟಾಪ್‌ ಬಂದಾಗಲೂ, ಹೃದಯವೇ ನಿಂತಂತೆ ಹಿಂಸೆ ಆಗುತ್ತಿತ್ತು. ಮತ್ತೆ ಬಸ್ಸಿನೊಳಗೆ ಮಾತಿನ ಮಳೆ. ಅಲ್ಲಿ ಅವರ ನಾಲಗೆಗಳ ಮೇಲೆ ತಟಪಟ ಅನ್ನುತ್ತಿದ್ದುದ್ದೂ ಅದೇ ಮಳೆ ಕುರಿತ ಮಾತುಗಳೇ! ನಾನು ಅವರನ್ನು ನೋಡಿ ನಕ್ಕುಬಿಟ್ಟೆ. ಈಗ ಹೀಗೆ ಬಯ್ಯುವ ಜನ, ಬೇಸಿಗೆಯಲ್ಲಿ ಉರಿಬಿಸಿಲಲ್ಲಿ ಆಕಾಶ ನೋಡುತ್ತಾ, ಸೂರ್ಯನಿಗೆ ಹಿಡಿಶಾಪ ಹಾಕುತ್ತಾ, ಬೆವರು ಒರೆಸಿಕೊಳ್ಳುತ್ತಾ, “ಅಯ್ಯೋ, ನಾಕು ಹನಿ ಮಳೆ ಬರಬಾರದಾ? ಈ ಧಗೆ, ಆ ಧೂಳಾದರೂ ಕಡಿಮೆಯಾಗುತ್ತಿತ್ತಲ್ಲಾ?’ ಎಂದು ಹೇಳುತ್ತಿದ್ದುದನ್ನು ನೆನೆದೆ. ಮಳೆ ಏನು ಇವರ ಆಜಾnಧಾರಕನೇ? ಇವರು ಬೇಕು ಎಂದಾಗ ಸುರಿದು, ಬೇಡ ಎಂದಕೂಡಲೇ ನಿಲ್ಲೋಕ್ಕೆ! ಮತ್ತೆ ಮಳೆಯನ್ನು ನೋಡಿದೆ. ಹರಿಯುತ್ತಿದ್ದ ನೀರನ್ನು ದಿಟ್ಟಿಸಿದೆ. ಬಾಲ್ಯದ ಹೆಜ್ಜೆಗಳು ಇದರಲ್ಲೇ ಕರಗಿವೆಯೇನೋ ಅಂತನ್ನಿಸಿತು. ನಾವೆಲ್ಲ ಚಿಕ್ಕಂದಿನಲ್ಲಿ ಮಳೆಯನ್ನು ಎಷ್ಟು ಎಂಜಾಯ್‌ ಮಾಡುತ್ತಿದ್ದೆವು. 

ಅಂದು ಇದೇ ಮಳೆಗೇ ಅಲ್ಲವೇ ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದು? ಆಲಿಕಲ್ಲು ಬಿದ್ದಾಗ, ಮುತ್ತಿನಂಥ ಅದರ ಸೊಬಗನ್ನು ಕಣ್ತುಂಬಿಕೊಂಡು, ಇನ್ನೇನು ಕರಗಿತು ಎನ್ನುವಾಗ ಗುಳಕ್ಕನೆ ನುಂಗಿದ್ದು? ಇದೇ ನೀರಿನಲ್ಲೇ ಅಲ್ಲವೇ, ಕಾಗದದ ದೋಣಿಯನ್ನು ತೇಲಿಸಿಬಿಟ್ಟಿದ್ದು? ಮಳೆಗಾಲದಲ್ಲಿ ಬೆಂಕಿಯಲ್ಲಿ ಸುಟ್ಟ ಗೇರು ಬೀಜ, ಹಲಸಿನ ಬೀಜ ತಿಂದ ರುಚಿ, ಇನ್ನೂ ಹೃದಯದಲ್ಲಿ ಹಸಿರು. ಕೆಂಡದ ಮೇಲೆ ಹಪ್ಪಳ ಸುಟ್ಟು ತಿನ್ನೋವಾಗ, ಆ ಬಿಸಿ ಶಾಖ ಹೀರಿದ ಅಂಗೈ ಪುಳಕಗೊಂಡಿದ್ದು ಇನ್ನೂ ನೆನಪಿದೆ. ಆಗ ಮನೆಯಿಂದ ಹೊರ ಹೋದವರು ಮಳೆಗೆ ಸಿಕ್ಕಿಕೊಂಡರೆ, ಯಾರೂ ಆತಂಕ ಪಡುತ್ತಿರಲಿಲ್ಲ. “ನೀನು ಸೇಫಾ?’ ಎಂದು ಕೇಳಲು ಆಗ ಮೊಬೈಲ್‌ಗ‌ಳು ಇರಲಿಲ್ಲ. “ಎಲ್ಲೋ ನಿಂತಿರ್ತಾರೆ. ಮಳೆ ನಿಂತ ಮೇಲೆ ಬರ್ತಾರೆ ಬಿಡು’ ಎಂಬ ನಿರುಮ್ಮಳ ಭಾವ.

ಬಾಲ್ಯದ ದೃಶ್ಯಗಳಿಗೆ ಕಂಡಕ್ಟರ್‌ನ ಸೀಟಿ ತೆರೆ ಬೀಳಿಸಿತು. ವಾಸ್ತವಕ್ಕೆ ಮರಳಿದಾಗ, ನನ್ನ ಸ್ಟಾಪ್‌ ಬಂದಿದ್ದು. ಚಿಲ್ಲನೆ ಮಳೆಯಲ್ಲಿಯೇ, ಬಸ್ಸಿನಿಂದ ಕೆಳಗಿಳಿದೆ. “ಹುಷಾರಾಗಿ ಹೋಗಿ ಮೇಡಮ್ಮಾರೆ’ ಎಂದು ಕೂಗಿದ ಡ್ರೈವರಣ್ಣ. “ಸೇಫಾಗಿ ತಂದು ಬಿಟ್ರಲ್ಲಾ, ನಿಮಗೆ ಥ್ಯಾಂಕ್ಸ್‌’ ತುಟಿಯಂಚಿನ ನಗುವಿನಲ್ಲಿ ಅವರಿಗೆ ಹೇಳಿದ್ದೆ. ಪ್ರವಾಹದಂತೆ ಹರಿದುಹೋಗುತ್ತಿದ್ದ ನೀರಿನಲ್ಲಿ, ಹೆಜ್ಜೆಯಿಟ್ಟು ಬಾಲ್ಯದ ಹೆಜ್ಜೆಯನ್ನು ಹುಡುಕಲೆತ್ನಿಸಿದೆ. ಮನಸ್ಸು “ರಿಮ್‌ ಜಿಮ್‌ ರಿಮ್‌ ಜಿಮ್‌ ಭಿಗಿ ಭಿಗಿ ರುತು ಮೆ ತುಮ್‌ ಹಮ್‌ ಹಮ್‌ ತುಮ್‌’ ಹಾಡನ್ನು ಗುನುಗುನಿಸುತ್ತಿತ್ತು.

ವೀಣಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next