Advertisement
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂತ್ರಸ್ತರ ರಕ್ಷಣೆ ಮತ್ತು ಪರಿಹಾರ ಕಾರ್ಯದ ಜತೆಗೆ ರೋಗ ಹರಡದಂತೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಖಾಲಿಯಾಗಿರುವ ಮನೆಗಳಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಬಂದಿರುವ ಮಾಹಿತಿ ಆಧರಿಸಿ ಎಲ್ಲಾ ಮನೆಗಳಿಗೂ ಗೃಹ ರಕ್ಷಕ ದಳದ ಸಿಬ್ಬಂದಿಯ ರಕ್ಷಣೆ ಒದಗಿಸಲಾಗುತ್ತಿದೆ ಎಂದರು.
Related Articles
Advertisement
ಸರ್ಕಾರದಿಂದಲೇ ಪಠ್ಯ, ನೋಟ್ ಪುಸ್ತಕ: ಪ್ರವಾಹದಿಂದ ತಮ್ಮ ಪುಸ್ತಕಗಳನ್ನು ಕಳೆದುಕೊಂಡಿರುವ ಶಾಲಾ ಮಕ್ಕಳಿಗೆ ಸರ್ಕಾರದ ವತಿಯಿಂದಲೇ ಪಠ್ಯ ಮತ್ತು ನೋಟ್ ಪುಸ್ತಕಗಳನ್ನು ಒದಗಿಸಲಾಗುವುದು. ಅಲ್ಲದೆ, ಮಳೆಯಿಂದಾಗಿ 20 ದಿನಕ್ಕೂ ಹೆಚ್ಚು ಕಾಲ ಶಾಲೆಗಳು ನಡೆಯದ ಕಾರಣ ಮಕ್ಕಳಿಗೆ ವಿಶೇಷ ತರಬೇತಿ ನೀಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.
155 ಕೋಟಿ ರೂ. ಬಿಡುಗಡೆ: ಮಳೆಹಾನಿ ಪರಿಹಾರ ಕಾರ್ಯಗಳಿಗಾಗಿ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ 200 ಕೋಟಿ ರೂ.ಒದಗಿಸುವುದಾಗಿ ಈ ಹಿಂದೆ ಹೇಳಿದಂತೆ ಈಗಾಗಲೇ 155 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೊಡಗಿಗೆ 30 ಕೋಟಿ ರೂ., ಹಾಸನ,
ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ತಲಾ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಕೊಡಗಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಮಳೆಹಾನಿ ಸಂತ್ರಸ್ತರಿಗಾಗಿ ಸಂಘಟನೆಗಳ ಹೆಸರಿನಲ್ಲಿ ನಿಧಿ ಸಂಗ್ರಹಕ್ಕೆ ಪ್ರೋತ್ಸಾಹ ನೀಡಬೇಡಿ. ಇದು ದುರುಪಯೋಗವಾಗುವ ಸಾಧ್ಯತೆ ಇದೆ. ನೆರವು ನೀಡುವ ಮನೋಭಾವ ಇದ್ದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬ್ಯಾಂಕ್ ಖಾತೆ ಮೂಲಕವಾಗಲಿ, ಚೆಕ್, ಡಿಡಿಗಳ ಮೂಲಕವಾಗಲೀ ಕೊಡ ಬಹುದು. ಯಾವುದೇ ಕಾರಣಕ್ಕೂ ನಗದು ನೀಡುವುದು ಬೇಡ.
ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ