Advertisement

ಸ್ವಸ್ಥ ಸಮಾಜಕ್ಕೆ ನಾಗರಿಕರು ಪೊಲೀಸರಾಗಲಿ

01:15 PM Dec 29, 2017 | Team Udayavani |

ಹುಬ್ಬಳ್ಳಿ: ಸಮಾಜದಲ್ಲಿ ಕಾನೂನು ಗೌರವಿಸಲಾರದವರಿಗೆ ಇಲ್ಲಿ ಸ್ಥಾನವಿಲ್ಲವೆಂಬ ಸಂದೇಶವನ್ನು ತಲುಪಿಸುವ ಕಾರ್ಯವನ್ನು ಸಾರ್ವಜನಿಕರು  ಮಾಡಬೇಕಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಹೇಳಿದರು.

Advertisement

ಇಲ್ಲಿನ ಅಶೋಕನಗರದ ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ  ಕರ್ನಾಟಕ ರಾಜ್ಯ ಪೊಲೀಸ್‌, ಹು-ಧಾ ಪೊಲೀಸ್‌ ಕಮಿಷನರೇಟ್‌, ಅಶೋಕನಗರ ಪೊಲೀಸ್‌ ಠಾಣೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಅಪರಾಧ  ತಡೆ ಮಾಸಾಚರಣೆ-2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಶೇ.99ರಷ್ಟು ಜನರು ಕಾನೂನು ಪರಿಪಾಲಕರಾಗಿದ್ದಾರೆ. 

ಆದರೆ ಶೇ.1ರಷ್ಟು ಜನರು ಇದರ ಉಲ್ಲಂಘನೆ  ಮಾಡುತ್ತಿರುವುದರಿಂದ ಇದರ ದುಷ್ಪರಿಣಾಮ ಸಮಾಜದ ಮೇಲೆ ಆಗುತ್ತಿದೆ.  ಆದ್ದರಿಂದ ಇಂಥವರಿಗೆ ಸಾರ್ವಜನಿಕರ ಹಾಗೂ ಪೊಲೀಸರ ಭಯ ಇರಬೇಕು. ಆ ನಿಟ್ಟಿನಲ್ಲಿ ನಮ್ಮಲ್ಲಿ ಸಾಮಾಜಿಕ ಬದ್ಧತೆ ಬೇಕು. ಕಳ್ಳರಿಗೆ ಶಿಕ್ಷೆ  ಆಗಬೇಕು. 

ಇಲ್ಲವಾದರೆ ಮತ್ತೆ ಅವರು ಅಡ್ಡದಾರಿ ಹಿಡಿಯುತ್ತಾರೆ ಎಂದರು. ಜನವರಿ ತಿಂಗಳಲ್ಲಿ ಸಂಚಾರ ಸಪ್ತಾಹ ಆಚರಿಸಲಾಗುವುದು. ಈ ವೇಳೆ  ಕಡ್ಡಾಯವಾಗಿ ಸಂಚಾರ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗುವುದು. ಹೆಲ್ಮೆಟ್‌ ಧರಿಸದೆ ಚಾಲನೆ ಮಾಡುವ ದ್ವಿಚಕ್ರ ವಾಹನ ಸವಾರರ ಮೇಲೆ  ಕ್ರಮಕೈಗೊಳ್ಳಲಾಗುವುದು.

ಅವಳಿ ನಗರದಲ್ಲಿ ಬಹುತೇಕ ಆಟೋರಿಕ್ಷಾಗಳಿಗೆ ಪರವಾನಗಿ ಇಲ್ಲ. ಆದ್ದರಿಂದ ಆಟೋರಿಕ್ಷಾದಲ್ಲಿ ಚಾಲಕನ ಹಿಂಭಾಗದಲ್ಲಿ  ಪ್ರಯಾಣಿಕರಿಗೆ ಕಾಣುವಂತೆ ಚಾಲಕನ ಹೆಸರು, ಮೊಬೈಲ್‌ ಸಂಖ್ಯೆ, ವಾಹನದ ನೋಂದಣಿ ಸಂಖ್ಯೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಚಾಲಕರು ಸಮವಸ್ತ್ರ ಧರಿಸಬೇಕು.

Advertisement

ಸ್ವ-ಆತ್ಮರಕ್ಷಣೆಗಾಗಿ ಮಹಿಳೆಯಗೆ ಕರಾಟೆ ಹಾಗೂ ಸಿವಿಲ್‌ ರೈಫಲ್‌ ಫೈರಿಂಗ್‌ ತರಬೇತಿ ನೀಡುವಂತೆ ಸಂಬಂಧಿಸಿದ  ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಡಿಸಿಪಿ ರೇಣುಕಾ ಸುಕುಮಾರ ಮಾತನಾಡಿ, ಪೊಲೀಸರು ಲಾಠಿ ಹಿಡಿದು ಸಂಚಾರ ನಿರ್ವಹಣೆ ಮಾಡುವ ಕಾಲ ಮುಗಿದಿದೆ.

ಪೊಲೀಸರು ಸಮವಸ್ತ್ರ ಧರಿಸಿದ ನೌಕರರಷ್ಟೆ. ಸಮಾಜ ನೆಮ್ಮದಿಯಾಗಿ, ಸುವ್ಯವಸ್ಥಿತವಾಗಿ ಇರಬೇಕಾದರೆ ಎಲ್ಲರ ಸಹಕಾರ ಮುಖ್ಯ. ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಸಮಾಜ ಸುರಕ್ಷಿತವಾಗಿಡುವಲ್ಲಿ ಪೊಲೀಸರೊಂದಿಗೆ ನಾಗರಿಕರ ಪಾತ್ರವೂ ಅತೀ ಮಹತ್ವದಾಗಿದೆ. 

ಸ್ವಯಂ ರಕ್ಷಣೆಗಾಗಿ ಮಹಿಳೆಯರೆಲ್ಲ ಸಿದ್ಧರಾಗಬೇಕು. ಅದಕ್ಕಾಗಿ ತರಬೇತಿ ಪಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಆಯುಕ್ತರು ಅಪರಾಧ ತಡೆ  ಮಾಸಾಚರಣೆ ಅಂಗವಾಗಿ 7-8ನೇ ತರಗತಿ ಹಾಗೂ 9-10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ  ಪ್ರಮಾಣ ಪತ್ರ ನೀಡಿದರು.

ಬೀಟ್‌ ಚೆನ್ನಾಗಿ ನಿರ್ವಹಿಸಿದ ಅಶೋಕನಗರ ಠಾಣೆಯ ತಿಂಗಳ ವ್ಯಕ್ತಿಯೆಂದು ಆಯ್ಕೆಯಾದ ಮೂವರು ಸಿಬ್ಬಂದಿಯನ್ನು ಸನ್ಮಾನಿಸಿದರು. 260 ಗ್ರಾಂ ಚಿನ್ನಾಭರಣ ಕಳುವಾಗಿದ್ದನ್ನು ಪತ್ತೆ ಮಾಡಿದ್ದಕ್ಕಾಗಿ ಫಾರೆಸ್ಟ್‌ ಕಾಲೋನಿಯ ಪರಶುರಾಮ ಧೋಂಗಡಿ ಮತ್ತು  ಕುಟುಂಬದವರು ಪೊಲೀಸ್‌ ಆಯುಕ್ತರನ್ನು ಸನ್ಮಾನಿಸಿದರು. ನಾಗರಿಕರಾದ ಎ.ಡಿ. ಕೊಟ್ನಾಳ, ಸಿದ್ದು ಮೊಗಲಿಶೆಟ್ಟರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿಸಿಪಿ ಎಸ್‌.ಬಿ. ನೇಮಗೌಡ ಅಧ್ಯಕ್ಷತೆ ವಹಿಸಿದ್ದರು. ಎಸಿಪಿಗಳಾದ ಎಚ್‌.ಕೆ. ಪಠಾಣ, ಎನ್‌.ಬಿ. ಸಕ್ರಿ ಮೊದಲಾದವರಿದ್ದರು. ಸುಧಾರಾಣಿ ಪ್ರಾರ್ಥಿಸಿದರು. ಅಶೋಕನಗರ  ಠಾಣೆ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next