Advertisement

ರಾಜ್ಯದಲ್ಲಿ ಕ್ರೈಸ್ತರ ರಕ್ಷಣೆಗೆ ಆಗ್ರಹಿಸಿ ರ್‍ಯಾಲಿ

05:57 PM Oct 13, 2021 | Team Udayavani |

ಬೀದರ: ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಾನೂನಿನ ಕ್ರಮ ಕೈಗೊಂಡು, ಅಲ್ಪಸಂಖ್ಯಾತರಾದ ಕ್ರೈಸ್ತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಮಾಜ ಬಾಂಧವರು ಪ್ರತಿಭಟನಾ ರ್‍ಯಾಲಿ ನಡೆಸಿದರು.

Advertisement

ವೇದಿಕೆ ಅಧ್ಯಕ್ಷ ಭಾಸ್ಕರ್‌ ಬಾಬು ಪಾತರಪಳ್ಳಿ ನೇತೃತ್ವದಲ್ಲಿ ವೇದಿಕೆ ನಗರದ ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಲಾಯಿತು. ಬಳಿಕ ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರಿಗೆ ಸಲ್ಲಿಸಲಾಯಿತು.

ಸಂವಿಧಾನದ ಪ್ರಕಾರ ಭಾರತದಲ್ಲಿರುವ ಯಾವುದೇ ಪ್ರಜೆ ಯಾವುದೇ ಧರ್ಮವನ್ನು ಸ್ವೀಕರಿಸಲು, ಆಚರಿಸಲು ಹಾಗೂ ಪ್ರಚಾರ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಈ ಹಕ್ಕನ್ನು ಮೊಟಕುಗೊಳಿಸಲು ಕೆಲವು ಹಿಂದುಪರ ಸಂಘಟನೆಗಳು ಕ್ರೈಸ್ತರು, ಹೆಣ್ಣು ಮಕ್ಕಳು ಮತ್ತು ಪ್ರಾರ್ಥನೆ ಮಂದಿರಗಳ ಮೇಲೆ ದಾಳಿ ಮಾಡಿ ತೊಂದರೆ ನೀಡುತ್ತಿದ್ದಾರೆ. ಇದು ಕಾನೂನು ರೀತಿ ಅಪರಾಧವಾಗಿದೆ. ಈ ರೀತಿಯ ವರ್ತನೆ ಸುಮಾರು ವರ್ಷಗಳಿಂದ ನಡೆಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವು ಸಮಾಜ ಘಾತುಕ ವ್ಯಕ್ತಿ ಹಾಗೂ ಸಂಘಟನೆಗಳು ಇದಕ್ಕೆ ಒತ್ತಾಯದ ಮತಾಂತರ ಎಂದು ಬಣ್ಣ ಹಚ್ಚಿ ಅಮಾಯಕ ದೈವ ಸೇವಕರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ದಾಳಿ ಮಾಡಲಾಗುತ್ತಿದೆ. ಹೊಸದುರ್ಗ ಶಾಸಕರು ತಮ್ಮ ತಾಯಿಯೇ ಮತಾಂತರ ಆಗಿದ್ದಾರೆಂದು ವಿಧಾನಸಭೆಯಲ್ಲಿ ಹೇಳಿ ಅವಮಾನಿಸುವುದು ಎಷ್ಟು ಸರಿ. ಈಗಾಗಲೇ ಅನೇಕ ವರದಿಗಳು ಅಲ್ಲಿ ಮತಾಂತರ ನಡೆದಿಲ್ಲ ಎಂದು ಪೊಲೀಸ್‌ ಮತ್ತು ಮಾಧ್ಯಮ ವರದಿಗಳು ಹೊರಬಿದ್ದಿವೆ. ಆದರೂ ಒಬ್ಬ ಶಾಸಕನಾಗಿ ಧರ್ಮದ ವಿಷ ಬೀಜ ಬಿತ್ತುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಅನಧಿಕೃತ ದೇವಾಲಯಗಳೆಂದು ಅನೇಕ ಚರ್ಚ್ ಗಳು ನೆಲಸಮ ಮಾಡಲಾಗಿದೆ. ವಿವಿಧೆಡೆ ನೆಲಸಮ ಮಾಡಿರುವ ಚರ್ಚ್ ಗಳನ್ನು ಸರ್ಕಾರವೇ ಪುನರ್‌ ನಿರ್ಮಾಣ ಮಾಡಿ ಕೊಡಲು ಆದೇಶಿಸಬೇಕು ಎಂದು ಆಗ್ರಹಿಸಲಾಗಿದೆ.

Advertisement

ಪ್ರಕಾಶ ಕೋಟೆ, ಸಾಮಸನ್‌ ಹಿಪ್ಪಳಗಾಂವ್‌, ರಾಜೇಶ ಜೋತಿ, ಸುಧಾಕರ ಡೋಣೆ, ಸಾಲಮನ್‌ ಮರ್ಜಾಪುರ, ಸುನೀಲ ಹಿರೇಮಾನಿ, ರೇ. ರಾಜಕುಮಾರ ಬರ್ಮ, ದಶರಥ ಮೀಶೆ, ಸುಂದರರಾಜ್‌ ಫಿರಂಗೆ, ಮಾಣಿಕ ಕೌಠಾ, ದತ್ತು ಸೋನೆ ಮತ್ತು ಲೋಕೇಶ ಕನಕ ಇನ್ನಿತರರು ಭಾಗವಹಿಸಿದ್ದರು.

ಧರ್ಮ ಸ್ವೀಕರಿಸಿದರೆ ಜಾತಿ ಬದಲಾಗದು

ಕ್ರೈಸ್ತ ಧರ್ಮವು ಒಂದು ಜಾತಿಯಲ್ಲ, ಇದು ಒಂದು ಧರ್ಮ. ಸಂವಿಧಾನತ್ಮಕವಾಗಿ ಯಾವುದೇ ವ್ಯಕ್ತಿ ಯಾವುದೇ ತನಗಿಷ್ಟವಾದ ಧರ್ಮವನ್ನು ಸ್ವೀಕರಿಸಬಹುದಾಗಿದೆ. ಇದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. 1983ರಲ್ಲಿ ಸರ್ವೋಚ್ಚ ನ್ಯಾಯಾಲವು ತಮಿಳುನಾಡಿನ ಅನಬಳಗನ್‌ ಎಂಬುವವರ ಕೇಸನಲ್ಲಿ ಯಾವುದೇ ಧರ್ಮವನ್ನು ಬದಲಾಯಿಸಬಹುದು. ಆದರೆ ಜಾತಿಯಲ್ಲ, ಧರ್ಮವನ್ನು ಸ್ವೀಕರಿಸಿದ ಮಾತ್ರಕ್ಕೆ ಜಾತಿ ಬದಲಾವಣೆ ಆಗುವುದಿಲ್ಲ. ಹೀಗಾಗಿ ಕಾನೂನು ಕೈಗೆತ್ತಿಕೊಳ್ಳುವ ಕೆಲವು ಸಮಾಜ ಘಾತುಕ ಶಕ್ತಿಗಳನ್ನು ನಿಗ್ರಹಿಸಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿಭಂಗಕ್ಕೆ ನಾಂದಿಯಾಗುತ್ತಿದೆ ಎಂದು ಮನವಿ ಮೂಲಕ ಪ್ರತಿಭಟನಾಕಾರರು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next