Advertisement

ಕಳ್ಳತನ ಮಾಡದಂತೆ ಬುದ್ಧಿ ಮಾತು ಹೇಳಿದ ತಂದೆಯನ್ನೇ ಕೊಂದ ಮಗ

07:58 PM Jan 25, 2022 | Team Udayavani |

ನಾಯಕನಹಟ್ಟಿ: ಕಳ್ಳತನ ಮಾಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಮಲ್ಲೂರಹಳ್ಳಿ ಸಮೀಪದ ಭರಮಸಾಗರ ಕಪಿಲೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

Advertisement

ಗುಡ್ಲು ಮಲ್ಲಯ್ಯ (70) ಎಂಬುವವರನ್ನು ಮಗ ಲೋಕೇಶ್‌ ಕೊಲೆ ಮಾಡಿದ್ದಾನೆ. ಮಲ್ಲೂರಹಳ್ಳಿ ಗ್ರಾಮ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಕಳ್ಳತನಕ್ಕೆ ಲೋಕೇಶ್‌ ಕುಖ್ಯಾತಿ ಪಡೆದಿದ್ದ. ಪದೇಪದೆ ಮನೆ, ದನ ಕರುಗಳನ್ನು ಕಳ್ಳತನ ಮಾಡುತ್ತಿದ್ದ. ಈತನ ವಿರುದ್ಧ ನಾಯಕನಹಟ್ಟಿ ಹಾಗೂ ತಳಕು ಠಾಣೆಗಳಲ್ಲಿ ಐದಾರು ದೂರುಗಳು ದಾಖಲಾಗಿದ್ದವು. ಜತೆಗೆ ಮದ್ಯಪಾನದ ಗೀಳು ಹಚ್ಚಿಕೊಂಡಿದ್ದ.

ಇತ್ತೀಚೆಗೆ ಕಳ್ಳತನ ಪ್ರಕರಣವೊಂದರಲ್ಲಿ ತಂದೆಯೇ ಮಗನಿಗೆ ಜಾಮೀನು ನೀಡಿ ಕರೆ ತಂದಿದ್ದ. ದುಶ್ಚಟ ಹಾಗೂ ದುರಭ್ಯಾಸಗಳಿಂದ ರೋಸಿ ಹೋಗಿದ್ದ ತಂದೆ, ಮಗನಿಗೆ ಹಲವಾರು ಬಾರಿ ಬುದ್ಧಿವಾದ ಹೇಳುತ್ತಿದ್ದರು. ಹೀಗಿದ್ದರೂ ಮಗ ಸರಿದಾರಿಗೆ ಬಂದಿರಲಿಲ್ಲ. ಸೋಮವಾರ ರಾತ್ರಿ ಕೂಡ ತಂದೆ, ಮಗನಿಗೆ ಬುದ್ಧಿವಾದ ಹೇಳಿದ್ದಾರೆ. ಆಗ ಇವರಿಬ್ಬರ ನಡುವೆ ಜಗಳ ಉಂಟಾಗಿದೆ.

ಮಗ ಮನೆಯಿಂದ ಹೊರಹೋಗದಂತೆ ಹಗ್ಗದಿಂದ ಕಟ್ಟಿ ಹಾಕಲು ತಂದೆ ಗುಡ್ಲುಮಲ್ಲಯ್ಯ ಪ್ರಯತ್ನಿಸಿದ್ದಾರೆ. ಇದರಿಂದ ಕುಪಿತನಾದ ಮಗ ಲೋಕೇಶ, ತಂದೆ ಮೇಲೆ ಹಲ್ಲೆ ನಡೆಸಿ ಜಾಡಿಸಿ ಒದ್ದಿದ್ದಾನೆ. ನೆಲಕ್ಕೆ ಬಿದ್ದ ರಭಸಕ್ಕೆ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಗುಡ್ಲುಮಲ್ಲಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿ ಲೋಕೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next