Advertisement

ಹಿರೇಕೆರೆ ಕಾವಲಿನಲ್ಲಿ ಸರಳ ಸಿಡಿ ಆಚರಣೆ

03:54 PM Feb 25, 2021 | Team Udayavani |

ನಾಯಕನಹಟ್ಟಿ: ಹಿರೇಕೆರೆ ಕಾವಲಿನಲ್ಲಿ ಚೌಡೇಶ್ವರಿ ರಥೋತ್ಸವದ ಅಂಗವಾಗಿ ಬುಧವಾರ ಸಿಡಿ ಉತ್ಸವ ಜರುಗಿತು. ಸರಕಾರ ಸಿಡಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಉತ್ಸವನ್ನು ಸಾಂಪ್ರದಾಯಿಕ ರೂಪದಲ್ಲಿ ಆಚರಿಸಲಾಯಿತು. ಭಕ್ತರು ಸಿಡಿ ಮರವನೇರಿ ಸಿಡಿಯಾಡುವ ನಿಷೇಧ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಜರುಗಿತು. ಚೌಡೇಶ್ವರಿ ಮೂರ್ತಿಯ ಬೃಹತ್‌ ಪಂಚಲೋಹದ ವಿಗ್ರಹವನ್ನು ಮೆರವಣಿಗೆಯ ಮೂಲಕ ತಂದು ಸಿಡಿಯಾಡುವ ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾಯಿತು.ಸಿಡಿಯಾಡುವ ವ್ಯಕ್ತಿಯನ್ನು ಸಿಡಿ ಮರಕ್ಕೆ ಕಟ್ಟದೆ ಸಿಡಿ ಆಚರಣೆ ನಡೆಸಲಾಯಿತು.

Advertisement

ವ್ಯಕ್ತಿಗೆ ಬದಲಾಗಿ ಕೇವಲ ಸಿಡಿ ಕಂಬವನ್ನು ಸುತ್ತಿಸಲಾಯಿತು. ಅದರಡಿಯಲ್ಲಿ ಎತ್ತಿನ ಗಾಡಿಯಲ್ಲಿ ಸಿಡಿಯಾಡುವ ವ್ಯಕ್ತಿಯನ್ನು ವೃತ್ತಾಕಾರವಾಗಿ ಸುತ್ತಿಸಲಾಯಿತು. ಸಿಡಿ ಉತ್ಸವದಲ್ಲಿ ಎತ್ತಿನಹಟ್ಟಿ ಗೊಲ್ಲಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದವರು ಸಿಡಿಯಾಡುವುದು ವಿಶೇಷವಾಗಿದೆ. ಸಿಡಿ ಮರದ ಕೆಳಗಿದ್ದ ದಲಿತ ಸಮುದಾಯದ ಯುವಕ ಭಂಡಾರ ಬೇವಿನಸೊಪ್ಪ ಹೂವುಗಳನ್ನು ಭಕ್ತರ ಮೇಲೆ ಎಸೆದರು. ಸಿಡಿ ಕಂಬವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಲಾಯಿತು. ಪ್ರದಕ್ಷಿಣೆ ವೇಳೆ ಭಕ್ತರು ಬಾಳೆಹಣ್ಣು, ಮಂಡಕ್ಕಿ, ಹೂವುಗಳನ್ನು ಸಿಡಿಗಾರನಿಗೆ ಎಸೆದು ಹರಕೆ ಸಲ್ಲಿಸಿದರು.

ಸುತ್ತಲಿನ ಗ್ರಾಮಗಳು ಸೇರಿದಂತೆ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಜಾತ್ರಾ ಪ್ರದೇಶದಲ್ಲಿ ನೀರು, ನೆರಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಪಟೇಲ್‌ ಜಿ.ಎಂ. ತಿಪ್ಪೇಸ್ವಾಮಿ, ಪಪಂ ಅಧ್ಯಕ್ಷ ಎನ್‌. ಮಹಾಂತಣ್ಣ, ಸದಸ್ಯರಾದ ಬಸಣ್ಣ, ಹನುಮಣ್ಣ, ದೇವರಾಜ್‌ ಮತ್ತಿತರರು ಇದ್ದರು. ಎರಡು ದಿನಗಳ ಚೌಡೇಶ್ವರಿ ರಥೋತ್ಸವ, ಸಿಡಿ ಉತ್ಸವದೊಂದಿಗೆ ಸಂಪನ್ನಗೊಂಡಿತು.

ಓದಿ : ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next