Advertisement

ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ

03:33 PM Feb 19, 2021 | Team Udayavani |

ಚಿತ್ರದುರ್ಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ  ನಡೆಯುತ್ತಿರುವ ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

ಸಭೆ ಆರಂಭ ಆಗುತ್ತಿದ್ದಂತೆ ಎದ್ದುನಿಂತ ಕಾಂಗ್ರೆಸ್‌ ಸದಸ್ಯ ಕೃಷ್ಣಮೂರ್ತಿ, ಶ್ರದ್ಧಾಂಜಲಿ ಸಲ್ಲಿಸುವ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಅಜ್ಜಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ ಬಾಬು ಮಾತನಾಡಿ, ರೈತರು ದೇಶದ ಬೆನ್ನೆಲುಬು. ಇಂದು ಕೃಷಿ ಕ್ಷೇತ್ರ ಆತಂಕದಲ್ಲಿದೆ. ಕೃಷಿ ಕ್ಷೇತ್ರದ ಉಳಿವಿಗಾಗಿ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರನ್ನು ಗೌರವಿಸೋಣ. ಇದರಲ್ಲಿ ರಾಜಕೀಯ ಮಾಡಬಾರದು ಎಂದು
ಮನವಿ ಮಾಡಿದರು.

ಈ ವೇಳೆ ಕಾಂಗ್ರೆಸ್‌ ಸದಸ್ಯ ಬಿ.ಪಿ. ಪ್ರಕಾಶ್‌ ಮೂರ್ತಿ ಮಾತನಾಡಿ, ರೈತರ ಬಗ್ಗೆ ಗೌರವ ಹಾಗೂ ಕಾಳಜಿ ಇರುವವರು ಶ್ರದ್ಧಾಂಜಲಿ ಸಲ್ಲಿಸಿ.
ರೈತರ ಬಗ್ಗೆ ಕಾಳಜಿ ಇಲ್ಲದವರು ಕುಳಿತುಕೊಳ್ಳಿ ಎಂದು ಹೇಳಿದರು. ಬಳಿಕ ಎಲ್ಲರೂ ಎದ್ದು ನಿಂತು ಶ್ರದ್ಧಾಂಜಲಿ ಸಲ್ಲಿಸಿದರು. ಆನಂತರ ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯಿತು. ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ರೈತರನ್ನು
ಕತ್ತಲಲ್ಲಿಟ್ಟು ಕಾಯ್ದೆ ಜಾರಿ ಮಾಡಲಾಗುತ್ತಿದೆ. ಇದು ಖಂಡನೀಯ ಎಂದರು.

ಮಂಡಿ ವ್ಯವಸ್ಥೆ ರದ್ದು ಮಾಡುವ ಹುನ್ನಾರ ನಡೆಯುತ್ತಿದೆ. ಮಂಡಿಯಿಂದಲೇ ರೈತ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ. ರೈತರು
ಕೃಷಿ ಚಟುವಟಿಕೆ ಆರಂಭದಲ್ಲಿ ಮಂಡಿಗಳಿಂದ ಸಾಲ ತಂದು ಬೀಜ, ಗೊಬ್ಬರ ಹೊಂದಿಸುತ್ತಾರೆ. ಕೇಂದ್ರ ಸರ್ಕಾರ ಜಾರಿ ಮಾಡುವ ಕಾಯ್ದೆಯಂತೆ ಕಾರ್ಪೊರೇಟ್‌ ಕಂಪನಿಗಳು ರೈತರಿಗೆ ಮುಂಗಡ ಸಾಲ ನೀಡುತ್ತವಾ ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯ ಗುರುಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಕಾಯ್ದೆಗಳಿಂದ ರೈತರಿಗೆ ಅನುಕೂಲವಿದೆ. ಸರ್ಕಾರ ರೈತರ ಪರವಾಗಿದೆ. ಕಾಯ್ದೆಗಳ ಬಗ್ಗೆ ಸರಿಯಾದ ಅರಿವಿಲ್ಲದೆ ಚರ್ಚಿಸುವುದು ಬೇಡ ಎಂದರು.

ಸದಸ್ಯ ಅನಂತ್‌ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಕಾಯ್ದೆಗಳ ಕುರಿತು ಕೃಷಿ ಇಲಾಖೆ ಅ ಧಿಕಾರಿಗಳು ಮಾಹಿತಿ
ನೀಡಲಿ. ಇದರಿಂದ ಜಿಲ್ಲೆಯ ರೈತರಿಗೆ ಮಾಹಿತಿ ದೊರೆಯಲಿದೆ ಎಂದು ಸಲಹೆ ನೀಡಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಸದಾಶಿವ, ಕಾಯ್ದೆಗಳ ವ್ಯಾಪ್ತಿ ದೊಡ್ಡದಿದೆ. ಇದು ಕೇವಲ ಕೃಷಿಗೆ ಸಂಬಂ ಧಿಸಿದ್ದಲ್ಲ. ಮಾರುಕಟ್ಟೆಯೂ ಇದೆ. ಅದನ್ನು ಇಲ್ಲಿ ವಿವರಿಸುವುದು ನನ್ನೊಬ್ಬನಿಂದ ಆಗದು ಎಂದರು. ಅಂತಿಮವಾಗಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯನ್ನು ನಡಾವಳಿ ಮಾಡಿ ಸರ್ಕಾರಕ್ಕೆ ಕಳಿಸಲಾಗುವುದು ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದರು.

ಓದಿ : ಫೆ.22ರಿಂದ ಆರರಿಂದ ಎಂಟನೇ ತರಗತಿ ಶಾಲಾರಂಭ: ಸರ್ಕಾರದಿಂದ ಅಧಿಕೃತ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next