ಚಳ್ಳಕೆರೆ: ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿದೆ. ಈ ಮೂಲಕ ಬಡವರ ವಿರೋ ಧಿ ಸರ್ಕಾರವೆಂದು ಸಾಬೀತುಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀಮಂತ ವರ್ಗದ ಹಿತ ಕಾಯುವ ಮೂಲಕ ಬಡವರನ್ನು ಅಲಕ್ಷಿಸಿದ್ದಾರೆ ಎಂದು ಶಾಸಕ ಟಿ. ರಘುಮೂರ್ತಿ ಆರೋಪಿಸಿದರು.
ತೈಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಮತ್ತು ಯುವ ಘಟಕದ ವತಿಯಿಂದ ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ಬಿ.ಕೆ.ಟಿ ಪೆಟ್ರೋಲ್ ಬಂಕ್ ಬಳಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ 2014ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 314 ರೂ., ಪೆಟ್ರೋಲ್ ಬೆಲೆ 58 ರೂ., ಡೀಸೆಲ್ ಬೆಲೆ 23 ರೂ. ಇತ್ತು. ಅಂದಿನ ಪ್ರಧಾನಿ ಡಾ| ಮನಮೋಹನ ಸಿಂಗ್ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರ ರಕ್ಷಣೆಗೆ ಮುಂದಾಗಿದ್ದರು.
ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೇಪಿ ನೇತೃತ್ವದ ಎನ್ಡಿಎ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಚ್ಚೇ ದಿನ್ ಆಮಿಷವೊಡ್ಡಿ ಇಡೀ ದೇಶದ ಜನರನ್ನು ಮರಳು ಮಾಡಿದರು. ಬೆಲೆ ಏರಿಕೆ ಮೂಲಕ ಬಡವರ ಮೇಲೆ ಗದಾಪ್ರಹಾರ ಮಾಡಿದ್ದಾರೆಂದು ವಾಗ್ಧಾಳಿ ನಡೆಸಿದರು. ಇಂದು ಸಾಮಾನ್ಯ ವ್ಯಕ್ತಿಯೂ ಸಹ ಅನಿವಾರ್ಯವಾಗಿ ವಾಹನದಲ್ಲೇ ಓಡಾಡಬೇಕಾದ ಸಂದರ್ಭವಿದೆ. ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಹನ ಬಳಸುತ್ತಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಹಾಗೂ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಬಡವರು ಸಂಕಷ್ಟದಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪಾವತಿಸಲು ಕಷ್ಟವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ದರವನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಕಿಸಾನ್ ಮೋರ್ಚಾ ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಹೆಚ್ಚು ನೋವು ಅನುಭವಿಸಿದ್ದು ಬಡವರು. ಕೇಂದ್ರ ಸರ್ಕಾರ ಶ್ರೀಮಂತರಿಗೆ ಅನುಕೂಲವಾಗುವಂತಹ ನಿಯಮಗಳನ್ನು ರೂಪಿಸಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ.
ಮೋದಿಯವರ ಅಚ್ಚೇ ದಿನ್ ದೇಶದ ಜನತೆಗೆ ಕನಸಾಗಿಯೇ ಉಳಿದಿದೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಟಿ. ಪ್ರಭುದೇವ್, ಕೆಎಂಎಫ್ ನಿರ್ದೇಶಕ ಸಿ. ಬಾಬು, ಮೂಡಲಗಿರಿಯಪ್ಪ, ಎಸ್.ಎಚ್. ಸೈಯದ್, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಗೌಡ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅನ್ವರ್ ಮಾಸ್ಟರ್, ಫರೀದ್ ಖಾನ್, ಕೃಷ್ಣಮೂರ್ತಿ, ಎಚ್.ಎನ್. ಆದರ್ಶ, ನಗರಸಭಾ ಸದಸ್ಯರಾದ ವಿರೂಪಾಕ್ಷಿ, ಚಳ್ಳಕೆರೆಯಪ್ಪ, ವೈ. ಪ್ರಕಾಶ್, ಕೆ. ವೀರಭದ್ರಪ್ಪ, ಪಾತಲಿಂಗಪ್ಪ, ಸಿ. ಓಬಣ್ಣ, ಬಂಗ್ಲೆ ಶ್ರೀನಿವಾಸ್, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ರವಿಕುಮಾರ್, ಕಾರ್ತಿಕ, ದ್ಯಾಮಣ್ಣ ಮತ್ತಿತರರು ಭಾಗವಹಿಸಿದ್ದರು.