Advertisement

ಆಡಳಿತ ”ಕುಂಟಿತ”: ಪರಿವಾರದಿಂದ ಮುಂದಿನ ವಾರ ಚಿಂತನಾ ಬೈಠಕ್

09:54 AM Jun 17, 2022 | Team Udayavani |

ಬೆಂಗಳೂರು: ಚುನಾವಣಾ ವರ್ಷದಲ್ಲೂ ರಾಜ್ಯ ಸರಕಾರದ ಆಡಳಿತ ನಿರೀಕ್ಷಿತ ವೇಗದಲ್ಲಿ ನಡೆಯದೇ ಇರುವ ಬಗ್ಗೆ ಸಂಘ-ಪರಿವಾರದ ಮುಖಂಡರು ಅಸಮಾಧಾನಗೊಂಡಿದ್ದು, ಇದೇ ತಿಂಗಳು ಬೆಂಗಳೂರಿನಲ್ಲಿ ಮಹತ್ವದ ಚಿಂತನಾ ಬೈಠಕ್‌ ನಡೆಸಲು ತೀರ್ಮಾನಿಸಲಾಗಿದೆ.

Advertisement

ಜೂನ್ 21, 22 ರಂದು ಬೆಂಗಳೂರಿನ ಕೇಶವ ಕೃಪಾದಲ್ಲಿ ಚಿಂತನಾ ಬೈಠಕ್ ನಡೆಯಲಿದೆ ಎಂದು ಬಿಜೆಪಿ‌ ಮೂಲಗಳು ತಿಳಿಸಿವೆ. ಸಿಎಂ‌ ಬಸವರಾಜ್ ಬೊಮ್ಮಾಯಿ ಹಾಗೂ ಸಂಪುಟದ ಆಯ್ದ ಸಚಿವರಿಗೆ ಮಾತ್ರ ಈ ಸಭೆಗೆ ಆಹ್ವಾನ ನೀಡಲಾಗಿದ್ದು, ಸರಕಾರದ ಆಡಳಿತ ವೈಖರಿ, ನೀತಿ- ನಿರೂಪಣಾ ವ್ಯವಸ್ಥೆಯ ಬಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಸಭೆಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಹಿರಿಯ ಸಚಿವರೊಬ್ಬರು ಭಾಗವಹಿಸುವ ನಿರೀಕ್ಷೆ ಇದೆ. ಜತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಘ ಪರಿವಾರದ ಮುಖಂಡರಾದ ಮುಕುಂದ್, ರವಿಕುಮಾರ್, ತಿಪ್ಪೇಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಭ್ರಷ್ಟರ ಬೇಟೆಗಿಳಿದ ಎಸಿಬಿ: ರಾಜ್ಯದ 80 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ

ಚುನಾವಣಾ ವರ್ಷದಲ್ಲೂ ಬಿಜೆಪಿ ಸರಕಾರದ ಆಡಳಿತ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಸರಕಾರದ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಉತ್ತಮ ಅಭಿಪ್ರಾಯ ಮೂಡುತ್ತಿಲ್ಲ. ಸ್ಪಂದನಾಶೀಲತೆ ಸಮರ್ಪಕವಾಗಿ ಇಲ್ಲ. ತಳಹಂತದ ಭ್ರಷ್ಟಾಚಾರ ಹಾಗೂ ದೋಷಪೂರಿತ ಕಾಮಗಾರಿಗಳು ಜನರಲ್ಲಿ ಬೇಸರ ಮೂಡಿಸುತ್ತಿವೆ. ಇದೆಲ್ಲದಕ್ಕೂ ಸರಕಾರ ಪರಿಹಾರ ಕಲ್ಪಿಸದೇ‌ ಇದ್ದರೆ ಚುನಾವಣಾ ವರ್ಷದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತದೆ ಎಂಬ ಮಾಹಿತಿಯನ್ನು ಸಂಘ – ಪರಿವಾರದ ಮುಖಂಡರು ಸಂಗ್ರಹಿಸಿದ್ದಾರೆ. ಈ ಬಗ್ಗೆ ಚಿಂತನಾ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next