Advertisement

ಚಿಂಚನಸೂರ ಹೊಸ ರಾಜಕೀಯ ಇನ್ನಿಂಗ್ಸ್‌

02:55 PM Jul 31, 2022 | Team Udayavani |

ಯಾದಗಿರಿ: ಗಿರಿಜಿಲ್ಲೆಯ ಪ್ರಭಾವಿ ರಾಜಕಾರಣಿ, ಹಿಂದುಳಿದ ವರ್ಗಗಳ ನಾಯಕ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಅವರಿಗೆ ಬಿಜೆಪಿ ಹೈಕಮಾಂಡ್‌ ವಿಧಾನ ಪರಿಷತ್‌ ಟಿಕೆಟ್‌ ಘೋಷಿಸುವ ಮೂಲಕ ಹೊಸ ರಾಜಕೀಯ ಇನ್ನಿಂಗ್ಸ್‌ಗೆ ಹಾದಿ ಸುಗಮಗೊಳಿಸಿದೆ.

Advertisement

ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರುವ ವೇಳೆ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ಸ್ಥಾನ ಚಿಂಚನಸೂರ ಪಾಲಾಗಲಿದೆ. ಈ ಮೂಲಕ ಬಿಜೆಪಿ ನಾಯಕರು ಅಹಿಂದ ಮತ ಸೆಳೆಯಲು ತಯಾರಿ ನಡೆಸಿದಂತಿದೆ. ರಾಜ್ಯದಲ್ಲಿ ಹಿಂದುಳಿದ ಜಾತಿಗಳ ಪೈಕಿ ಕೋಲಿ-ಗಂಗಾಮತ ಸಮಾಜ ಅತ್ಯಂತ ಪ್ರಬಲ ಸಮುದಾಯವಾಗಿದೆ. ಈ ಸಮಾಜದ ಮುಖಂಡರೂ ಆದ ಚಿಂಚನಸೂರ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕರೂ ಹೌದು. ವಿಧಾನ ಪರಿಷತ್‌ ಚುನಾವಣೆಯಲ್ಲಿ ತಮ್ಮವರಿಂದಲೇ ಸೋಲಾಗಿದೆ ಎಂದು ಅಸಮಾಧಾನಗೊಂಡು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದವರು.

ಇದನ್ನೂ ಓದಿ: ರಣಬೀರ್ ಕಪೂರ್ ‘ಶಂಶೇರಾ’ ಕಲೆಕ್ಷನ್ ಮೀರಿದ ‘ವಿಕ್ರಾಂತ್ ರೋಣ’

ಮೊದಲಿಗರು: ಮೇಲ್ಮನೆ ಚುನಾವಣೆಯಲ್ಲಿ ಸೋಲನುಭವಿಸಿದ ಅಸಮಾಧಾನದಲ್ಲಿದ್ದ ಚಿಂಚನಸೂರ ಆಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ತಮಗೆ ಉತ್ತಮ ಹುದ್ದೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಹಿರಿಯ ಮಾಜಿ ಸಚಿವನಾಗಿದ್ದ ಕಾರಣ ಹೈಕಮಾಂಡ್‌ ಈ ಬಗ್ಗೆ ಪರಿಗಣಿಸಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು. ಆದರೆ ಪಕ್ಷ ಡಾ|ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆಗೆ ಸಚಿವ ಸ್ಥಾನ ನೀಡಿ ಮಹತ್ವದ ಖಾತೆ ನೀಡಿದ್ದು ಅವರ ಕಣ್ಣು ಕೆಂಪಗೆ ಮಾಡಿತು. ಇದರಿಂದ ಮತ್ತಷ್ಟು ಕುಪಿತಗೊಂಡ ಚಿಂಚನಸೂರ ಲೋಕಸಭೆ ಚುನಾವಣೆ ವೇಳೆ ಡಾ|ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಂಡಾಯ ಸಾರಿ ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅವರಿಗೆ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಚುಕ್ಕಾಣಿ ನೀಡಿ ಮತ್ತೂಮ್ಮೆ ಮುಖ್ಯವಾಹಿನಿಗೆ ತಂದು ನಿಲ್ಲಿಸಿತ್ತು. ಆದರೆ ಕಳೆದ ಹಲವು ದಿನಗಳಿಂದ ಚಿಂಚನಸೂರ ಮತ್ತು ಮಾಜಿ ಸಚಿವ ಡಾ|ಮಾಲಕರೆಡ್ಡಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಲಿದ್ದಾರೆ ಎನ್ನುವ ವದಂತಿ ಹರಿದಾಡುತ್ತಿತ್ತು. ಈಗ ಬಿಜೆಪಿ ಹೈಕಮಾಂಡ್‌ ಚಿಂಚನಸೂರ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡುವ ಮೂಲಕ ಅವರನ್ನು ಪಕ್ಷದಲ್ಲಿ ಗಟ್ಟಿಯಾಗಿ ಉಳಿಯುವಂತೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next