Advertisement
ಮೊದಲ ದಿನ ಮಕ್ಕಳ ಚಲನಚಿತ್ರೋತ್ಸವವು ಶಾಲೆಯ ಆಡಿಯೋ ವಿಷುವಲ್ ಹಾಲ್ನಲ್ಲಿ ನಡೆಯಿತು. ಎಂಐಸಿ ಪ್ರಾಧ್ಯಾಪಕ ವಿನ್ಯಾಸ ಹೆಗಡೆ ಸಿನಿಮಾದ ಭಾಷೆ, ತಂತ್ರ ಮತ್ತು ಆಶಯದ ಬಗ್ಗೆ ಒಳನೋಟದ ಮಾತುಗಳನ್ನಾಡಿದರು. ಉಡುಪಿ ವಿದ್ಯಾಂಗ ಉಪ ನಿರ್ದೇಶಕ ಶೇಷಶಯನ ಪಠ್ಯಪೂರಕ ಚಟುವಟಿಕೆಯ ಮಹತ್ವ ವಿವರಿಸಿದರು. ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಕಲಾತ್ಮಕ ಚಲನಚಿತ್ರ ಪ್ರದರ್ಶನ ಮಕ್ಕಳಿಗೆ ಹೊಸ ಅನುಭವ ನೀಡಿತು. ಟಿ.ಎಸ್. ನಾಗಾಭರಣ ನಿರ್ದೇಶನದ “ಚಿನ್ನಾರಿ ಮುತ್ತ’, ಎಂ. ಮಣಿಕಂಠನ್ ನಿರ್ದೇಶನದ “ಕಾಕಾ ಮುತ್ತೈ’, ಚಾರ್ಲಿ ಚಾಪ್ಲಿನ್ ನಿರ್ದೆಶನದ “ದಿ ಕಿಡ್’, ಪಿ. ಎನ್. ರಾಮಚಂದ್ರ ನಿರ್ದೇಶನದ “ಪುಟಾಣಿ ಪಾರ್ಟಿ’, ಮಾಸ್ಟರ್ ಕಿಶನ್ ನಿರ್ದೇಶನದ “ಕೇರ್ ಆಫ್ ಪುಟ್ಪಾತ್’ ಮಕ್ಕಳ ಮನಸೆಳೆದವು. ಜನಪ್ರಿಯ ಚಿತ್ರಗಳ ಕ್ರೌರ್ಯ, ಅಬ್ಬರ, ಹಿಂಸೆ,ಅಸಹ್ಯಗಳನ್ನು ನೋಡಿ ಬೇಸತ್ತಿದ್ದ ಮಕ್ಕಳ ಮನಸ್ಸಿನಲ್ಲಿ ಈ ಚಿತ್ರಗಳು ಹೊಸ ಲೋಕವನ್ನೇ ಸೃಷ್ಟಿಸಿದವು. ಎರಡನೇ ದಿನ ಪ್ರದರ್ಶನಗೊಂಡ ನಾಟಕ “ಸಂದೇಹ ಸಾಮ್ರಾಜ್ಯ’. ನಿರ್ದೇಶಿಸಿದವರು ಖ್ಯಾತ ರಂಕರ್ಮಿ ಮಂಜುನಾಥ ಬಡಿಗೇರ. ಪ್ರದರ್ಶನ ನೀಡಿದ ತಂಡ ಕೆ. ವಿ. ಸುಬ್ಬಣ್ಣ ರಂಗ ಸಮೂಹ, ಹೆಗ್ಗೊàಡು. ಮನುಷ್ಯ ಸಂಬಂಧಗಳಲ್ಲಿ ಅತಿ ಸಂಕೀರ್ಣವಾದ ಸಂಬಂಧವೆಂದರೆ ಗಂಡು ಹೆಣ್ಣಿನ ಸಂಬಂಧ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ಇನ್ನೂ ಸೂಕ್ಷ್ಮ. ಗಟ್ಟಿ ಎಳೆದರೆ ಹರಿದು ಹೋಗುತ್ತದೆ. ಎಳೆಯದಿದ್ದರೆ ಮುದುಡಿ ಬಿಡುತ್ತದೆ ಎಂಬಂತಹ ರೀತಿ. ಈ ಸಂಬಂಧ ಹಲವು ಬಾರಿ ಗಟ್ಟಿಯಾಗುತ್ತದೆ. ಕೆಲವು ಬಾರಿ ನಾಶವಾಗಿ ಬಿಡುತ್ತದೆ. ಸಂಪೂರ್ಣ ನಂಬಿಕೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ಆಧರಿಸಿರುವ ಈ ಕೌಟುಂಬಿಕ ವಸ್ತುವನ್ನು ಈ ಸಂದೇಹ ಸಾಮ್ರಾಜ್ಯ ಬಿಚ್ಚಿಡುತ್ತದೆ.
Related Articles
Advertisement
ಕೊನೆಯ ದಿನ ನಡೆದ ತುಳು ನಾಟಕ “ಚಂದ್ರೆ ಎನ್ನೊಟ್ಟುಲೆ’. ಮೂಲ ಕವಿ ಜಯಂತ ಕಾಯ್ಕಿಣಿ. ಇದರ ತುಳು ಅನುವಾದ ಉದ್ಯಾವರ ನಾಗೇಶಕುಮಾರ್. ನಿರ್ದೇಶನ ಸಂತೋಷ ನಾಯಕ್ ಪಟ್ಲ. ಒಂದು ಮುಸ್ಲಿಂ ತುಂಬು ಕುಟುಂಬದಲ್ಲಿ ನಡೆಯುವ ಬದುಕಿನ ಕಷ್ಟಗಳು ಮತ್ತು ಸಂಘರ್ಷ ಇಲ್ಲಿ ಮುಖ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಮುವಾದ ಹೆಚ್ಚುತ್ತಿರುವ ಈ ಕಾಲದಲ್ಲಿ ಈ ನಾಟಕ ಕೆಲವು ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡುವ ಮತ್ತು ಹಿಂದೂ-ಮುಸ್ಲಿಂ ಸಂಬಂಧ ತೆಳುವಾಗುತ್ತಿರುವ ದುರಂತ ಚಿತ್ರಣ ಕೂಡಾ ಮನ ಕಲುಕುತ್ತದೆ. ನಾಟಕ ನಿರ್ದೇಶಿಸಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಸಂತೋಷ ನಾಯಕ್ ಗಮನ ಸೆಳೆದರು. ರಂಗಸಜ್ಜಿಕೆ, ಸಂಗೀತ, ಬೆಳಕು ಎಲ್ಲವೂ ಉತ್ತಮವಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ಮೂರು ದಿನಗಳ ಕಾಲ ಪೆರ್ಡೂರಿನ ಗ್ರಾಮೀಣ ಸೊಗಡಿಗೊಂದು ಹೊಸ ಆಶಯ ಮೂಡಿಸಿದ ಈ ಸಾಂಸ್ಕೃತಿಕ ಉತ್ಸವ ಮರೆಯಲಾಗದ್ದು. ಇದೇ ಸಂದರ್ಭದಲ್ಲಿ ಅಪರೂಪದ ನಾಟಕ ಪುಸ್ತಕಗಳ ಪ್ರದರ್ಶನ ಮತ್ತು ಜಿ. ಪಿ. ಪ್ರಭಾಕರ ತುಮರಿ ಅವರ ರಂಗವಿಮಶಾì ಬರಹಗಳ ಪ್ರದರ್ಶನವೂ ನಡೆಯಿತು. ವಿಮರ್ಶಕ ಮುರಳೀಧರ ಉಪಾಧ್ಯ ಉದ್ಘಾಟಿಸಿದ್ದ ಈ ನಾಟಕೋತ್ಸವದ ಸಮಾರೋಪದಲ್ಲಿ ಕವಿ ಗುರುರಾಜ ಮಾರ್ಪಳ್ಳಿ ಆಶಯದ ಮಾತನಾಡಿದರು. ಅನೇಕ ಸಮಾಜದ ಗಣ್ಯರು ಭಾಗವಹಿಸಿದ ಈ ಸಾಂಸ್ಕೃತಿಕ ಉತ್ಸವದ ಯಶಸ್ಸಿಗೆ ಮುಖ್ಯ ಕಾರಣರಾದ ಪ್ರಭಾಕರ ಸರ್ ಅವರಿಗೆ ಅಭಿನಂದನೆ ಹೇಳಲೇಬೇಕು.
ಉಷಾರಾಣಿ ಕಾಮತ್