Advertisement
ಶಾಲೆಗೆ ಚಕ್ಕರ್ ಹಾಕಲು, ಹೊಟ್ಟೆ ನೋವು, ಆ ನೋವು, ಈ ನೋವು ಅಂತೆಲ್ಲಾ ಸುಳ್ಳು ಹೇಳುವುದು ತುಂಬಾ ಹಳೆಯ ಐಡಿಯಾ. ನನ್ನ ಅಪ್ಪ-ಅಮ್ಮ ಅಂಥವಕ್ಕೆಲ್ಲ ಬಗ್ಗುವುದಿಲ್ಲ ಎಂದು ಬಹಳ ಬೇಗ ಕಂಡುಕೊಂಡುಬಿಟ್ಟಿದ್ದೆ. ನಮ್ಮೂರು ಶಿರಸಿ. ಇಲ್ಲಿನ ಮಳೆ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯಾನೇ ಇಲ್ಲ ತಾನೆ? ಹೀಗಾಗಿ, ಸಿಚುವೇಷನ್ಗೆ ತಕ್ಕಂತೆ ಒಂದೊಳ್ಳೆ ಉಪಾಯ ಹುಡುಕಿ ಇಟ್ಟುಕೊಂಡಿದ್ದೆ. ಆಟವಾಡೋಕೆ ಹೋದಾಗ ಬಿದ್ದು ಗಾಯ ಮಾಡಿಕೊಳ್ಳೋದು. ಆಮೇಲೆ ಅದನ್ನೇ ದೊಡ್ಡದು ಮಾಡಿ, ಶಾಲೆಗೆ ರಜೆ ಹಾಕೋದು. ಗಾಯ ಮಾಡಿಕೊಳ್ಳುವಾಗ ಸ್ವಲ್ಪ ರಿಸ್ಕ್ ಏನೋ ಇತ್ತು. ಆದರೆ, ರಿಸ್ಕ್ ತೆಗೆದುಕೊಂಡರೆ ಅಲ್ವಾ ಬೇಕಾಗಿದ್ದು ಸಿಗೋದು! ಆಗಿರುತ್ತಿದ್ದ ಗಾಯಕ್ಕೂ ನನ್ನ ಚೀರಾಟ, ನರಳಾಟಕ್ಕೂ ಕನೆಕ್ಷನ್ನೇ ಇರುತ್ತಿರಲಿಲ್ಲ. ನನ್ನದು ಓವರ್ಆ್ಯಕ್ಟಿಂಗ್ ಆಗಿರುತ್ತಿತ್ತು. ಗಾಯ ಚಿಕ್ಕದಾಗಿದ್ದರೂ ಹೈಡ್ರಾಮಾ ಮಾಡುತ್ತಿದ್ದೆ. ನಾನೊಬ್ಬನೇ ಅಲ್ಲ, ನಮ್ಮ ಶಾಲೆಯಲ್ಲಿ ನನ್ನಂಥವರು ತುಂಬಾ ಜನರಿದ್ದರು. ನಮ್ಮ ಚಕ್ಕರಾಭ್ಯಾಸವನ್ನು ನೋಡಿಯೇ ಏನೋ ಶಾಲೆಯವರೂ ಒಂದು ತಂತ್ರ ಹೂಡಿದರು. ಶಾಲೆ ಶುರುವಾದ ಮೊದಲ 2- 3 ತಿಂಗಳು ಓದಿಗಿಂತ ಹೆಚ್ಚಾಗಿ ಆಟವನ್ನೇ ಆಡಿಸುವ, ಕ್ರೀಡಾಕೂಟ ನಡೆಸುವ ತೀರ್ಮಾನ ಕೈಗೊಂಡರು. ಮಳೆಯಲ್ಲೇ ಆಟವಾಡುವ ಆಮಿಷದಿಂದ ಮಕ್ಕಳು ಚಕ್ಕರ್ ಹೊಡೆಯದಿರಲಿ ಎಂಬುದು ಅದರ ಉದ್ದೇಶ. 2- 3 ತಿಂಗಳ ನಂತರ, ಆಟಕ್ಕೆ ಬಿಡುವೇ ಕೊಡದಂತೆ ಸಿಲೆಬಸ್ ಪೂರ್ತಿಗೊಳಿಸುತ್ತಿದ್ದಿದ್ದು ಬೇರೆ ವಿಷಯ. ಹೀಗೆ ನಮ್ಮ ಚಕ್ಕರ್ವ್ಯೂಹವನ್ನು ಶಾಲೆಯವರು ಭೇದಿಸುತ್ತಿದ್ದರು.
Advertisement
ಮಕ್ಕಳು ಚಾಪೆ ಕೆಳಗೆ…ಟೀಚರ್ ರಂಗೋಲಿ ಕೆಳಗೆ…!
06:00 AM Jun 26, 2018 | |
Advertisement
Udayavani is now on Telegram. Click here to join our channel and stay updated with the latest news.