Advertisement

ಜಿಲ್ಲಾ ಉತ್ಸವಕ್ಕಾಗಿ ವಿವಿಧ ಕ್ರೀಡಾಕೂಟ

01:23 PM Feb 14, 2020 | Naveen |

ಚಿಕ್ಕಮಗಳೂರು: ಫೆ.28ರಿಂದ ಮಾ.1ರ ವರೆಗೆ ನಡೆಯಲಿರುವ ಜಿಲ್ಲಾ ಉತ್ಸವಕ್ಕೆ (ಹಬ್ಬ) ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಫೆ.23 ರಿಂದ ಫೆ.25ರ ವರೆಗೆ ಕ್ರೀಡಾಕೂಟ ನಡೆಯಲಿವೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ತಿಳಿಸಿದರು.

Advertisement

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಹಾಗೂ ಬಯಲುಸೀಮೆ ಒಳಗೊಂಡ ಜಿಲ್ಲೆ ವಿಶಿಷ್ಟ ಜಾನಪದ ಕಲೆ ಹಾಗೂ ಕ್ರೀಡಾ ವಿಶೇಷಗಳನ್ನು ಒಳಗೊಂಡಿದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಫೆ.23ರ ಬೆಳಗ್ಗೆ 6.30ಕ್ಕೆ ಆಯೋಜಿಸಲಾಗಿರುವ ಫಿಟ್‌ ಚಿಕ್ಕಮಗಳೂರು ಕಾರ್ಯಕ್ರಮ ಜಿಲ್ಲಾ ಆಟದ ಮೈದಾನದಿಂದ ಆರಂಭಗೊಂಡು ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮತ್ತೆ ಜಿಲ್ಲಾ ಆಟದ ಮೈದಾನ ತಲುಪಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸರ್ಕಾರಿ ನೌಕರರು ಭಾಗವಹಿಸಬಹುದಾಗಿದೆ ಎಂದರು.

ಅದೇ ದಿನ ಬೆಳಗ್ಗೆ 9 ಗಂಟೆಯಿಂದ ನಗರದ ಐಡಿಎಸ್‌ಜಿ ಕಾಲೇಜು ಮೈದಾನದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದ್ದು, ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು. ನಲ್ಲೂರು ಗ್ರಾಮದ ಗದ್ದೆಗಳಲ್ಲಿ ಕೆಸರುಗದ್ದೆ ಓಟ, ಹಗ್ಗಜಗ್ಗಾಟ, ನಿಧಿ  ಹುಡುಕಾಟ, ಭಾರ ಹೊತ್ತು ಓಡುವ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಎಐಟಿ ಸಭಾಂಗಣದಲ್ಲಿ ರಾಜ್ಯಮಟ್ಟದ ಚದುರಂಗ ಸ್ಪರ್ಧೆ ಬೆಳಿಗ್ಗೆ 10ಗಂಟೆಯಿಂದ ನಡೆಯಲಿದ್ದು, ಮಹಿಳೆಯರು ಮತ್ತು ಪುರುಷರು ಭಾಗವಹಿಸಬಹುದು. ಟಿಎಂಎಸ್‌ ಕಾಲೇಜು ಆವರಣದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆಯಲಿದೆ. ಎಐಟಿ ಬಯಲು ರಂಗಮಂದಿರದಲ್ಲಿ ಸಬ್‌ ಜೂನಿಯರ್‌ ಮತ್ತು ಸೀನಿಯರ್‌ ಮಹಿಳೆಯರು ಮತ್ತು ಪುರುಷರಿಗೆ ಜಿಲ್ಲಾ ಟೆಕ್ವಾಂಡೋ ಸ್ಪರ್ಧೆ ನಡೆಯಲಿದೆ.

Advertisement

17 ವರ್ಷ ಕೆಳಗಿನವರಿಗೆ, 18 ರಿಂದ 60 ಹಾಗೂ 61 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಹಿಳಾ ಗ್ರಾಮೀಣ ಕ್ರೀಡೋತ್ಸವ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು. ಫೆ.24 ರಂದು ಬೆಳಿಗ್ಗೆ 10 ಗಂಟೆಗೆ ಶತಮಾನೋತ್ಸವ ಕ್ರೀಡಾಂಗಣಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಜಿಲ್ಲಾ ಕಬಡ್ಡಿ ಪಂದ್ಯಾವಳಿ, ಪುರುಷರಿಗೆ ಜಿಲ್ಲಾ ಷಟಲ್‌ ಬ್ಯಾಡ್ಮಿಂಟನ್‌, ವಾಲಿಬಾಲ್‌ ಪಂದ್ಯಾವಳಿ ನಡೆಯಲಿದೆ. ಫೆ.25 ರಂದು ಬೆಳಿಗ್ಗೆ 10 ಗಂಟೆಗೆ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ, ಪುರುಷರಿಗೆ ವಾಲಿಬಾಲ್‌ ಪಂದ್ಯಾವಳಿ, ಮಹಿಳೆಯರಿಗೆ ಜಿಲ್ಲಾಷಟಲ್‌ ಬ್ಯಾಡ್ಮಿಂಟನ್‌ ಸ್ಪರ್ಧೆ  ನಡೆಯಲಿದೆ ಎಂದು ತಿಳಿಸಿದರು.

ನಗರದ ಎಸ್‌ಟಿಜೆ ಮಹಿಳಾ ಕಾಲೇಜು ಆವರಂದಲ್ಲಿ ಮಹಿಳೆ ಮತ್ತು ಪುರುಷರಿಗೆ ಜಿಲ್ಲಾ ಜಂಗಿಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ಅದೇ ದಿನ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಕೊಪ್ಪ, ಎನ್‌. ಆರ್‌.ಪುರ, ಶೃಂಗೇರಿ, ಅಜ್ಜಂಪುರ, ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಹಂತದ ಸ್ಪರ್ಧೆಗಳಿಗೆ ಜಿಲ್ಲೆಯವರೇ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವವರು ಫೆ.22 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಗೆ ಬೇಕಾಗುವ ಪರಿಕರಗಳನ್ನು ಸ್ಪ ರ್ಧಿಗಳೇ ತರಬೇಕು ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ಉಪನಿರ್ದೇಶಕಿ, ಕ್ರೀಡಾ ಸಮಿತಿ ಸದಸ್ಯ ಕಾರ್ಯದರ್ಶಿ ಮಂಜುಳಾ ಹುಲ್ಲಳ್ಳಿ ಮಾತನಾಡಿ, ಫೆ.25ರಿಂದ ಮಾ.1ರ ವರೆಗೆ ಜಲ, ಭೂ, ಹಾಗೂ ವಾಯು ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಜಲ ಸಾಹಸಕ್ಕೆ ಜಿಲ್ಲೆಯ ಅಯ್ಯನಕೆರೆ, ಹಿರೇಕೊಳಲೆ ಕೆರೆ ಮತ್ತು ನಲ್ಲೂರು ಕೆರೆ ಗುರುತಿಸಲಾಗಿದೆ.

ವಾಯು ಸಾಹಸ ಕ್ರೀಡೆ ಚಿಕ್ಕಮಗಳೂರು ಅಡ್ವೇಚರ್‌ ಕ್ಲಬ್‌ ನಡೆಸಿಕೊಡುತ್ತಿದ್ದು, ಪ್ಯಾರಾ ಗ್ಲೇಡಿಂಗ್‌ ನಗರದ ಎಐಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. 6 ರಿಂದ 8 ನಿಮಿಷದ ಒಂದು ಸುತ್ತಿಗೆ 3,100 ಶುಲ್ಕ ನಿಗದಿಪಡಿಸಲಾಗಿದ್ದು, ಐನೂರದಿಂದ ಸಾವಿರ ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಉಪ ಸಮಿತಿ ಸದಸ್ಯ ರವಿಕುಮಾರ್‌, ವಾಲಿಬಾಲ್‌ ತರಬೇತಿಗಾರ್ತಿ ವಿನುತಾ, ಕ್ರಿಕೆಟ್‌ ತರಬೇತಿಗಾರ ಶಂಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next