Advertisement

ಆರ್ಥಿಕ ಗಣತಿ ಕಾರ್ಯ ಶ್ರದ್ಧೆಯಿಂದ ಮಾಡಿ

05:26 PM Jun 15, 2019 | Naveen |

ಚಿಕ್ಕಮಗಳೂರು: ಆರ್ಥಿಕ ಗಣತಿ ಕಾರ್ಯವನ್ನು ಅರ್ಪಣಾ ಮನೋಭಾವದಿಂದ ಪರಿಣಾಮಕಾರಿಯಾಗಿ ಮಾಡಬೇಕೆಂದು ಅಪರ ಡೀಸಿ ಡಾ|ಕುಮಾರ್‌ ಸಾಮಾನ್ಯ ಸೇವಾ ಕೇಂದ್ರಗಳ ಮೇಲ್ವಿಚಾರಕರಿಗೆ ಸಲಹೆ ನೀಡಿದರು.

Advertisement

7ನೇ ಆರ್ಥಿಕ ಗಣತಿ ಹಿನ್ನೆಲೆಯಲ್ಲಿ ಕೇಂದ್ರ ಸಾಂಖ್ಯೀಕ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ ಹಾಗೂ ಶಿವಮೊಗ್ಗಾದ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ನಗರದ ವಸಂತದತ್ತ ಸಭಾಂಗಣದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಮೇಲ್ವಿಚಾರಕರಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ ಎಲ್ಲಾ ಆರ್ಥಿಕ ಗಣತಿಯನ್ನು ಸರ್ಕಾರದ ತಳಮಟ್ಟದ ಅಧಿಕಾರಿಗಳಿಂದ ಮಾಡಿಸಲಾಗುತ್ತಿತ್ತು. ಅದರಿಂದ ಅವರಿಗೆ ಕೆಲಸದ ಹೊರೆ ಜಾಸ್ತಿಯಾಗಿ ಪರಿಣಾಮಕಾರಿಯಾಗಿ ಗಣತಿ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಖಾಸಗೀ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿದೆ ಎಂದರು.

ಶ್ರದ್ಧೆಯಿಂದ ಕೆಲಸ ಮಾಡಿ: ಆರ್ಥಿಕ ಗಣತಿ ಕಾರ್ಯ ಪರಿಣಾಮಕಾರಿಯಾಗಿ ಆಗಬೇಕಾದರೆ ಶ್ರದ್ಧೆ ಮತ್ತುಆಸಕ್ತಿ ತೀರಾ ಅಗತ್ಯ. ಕಾಟಾಚಾರಕ್ಕಾಗಿ ಕಾರ್ಯನಿರ್ವ ಹಿಸಬಾರದು. ಯಾವುದೇ ಯೂನಿಟ್‌ಗಳನ್ನೂ ಬಿಡದೇ ಗಣತಿ ಮಾಡಬೇಕೆಂದು ಕಿವಿಮಾತು ಹೇಳಿದರು.

ಆರ್ಥಿಕ ಗಣತಿ ಅಭಿವೃದ್ಧಿಗೆ ಪೂರಕ: ಜನರನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುವ ಮೂಲಕ ಅವರಿಂದ ಆರ್ಥಿಕ ಮಾಹಿತಿಯನ್ನು ನಿಖರವಾಗಿ ಪಡೆದುಕೊಳ್ಳಬೇಕು. ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಲು ಆರ್ಥಿಕ ಗಣತಿ ಅತ್ಯಂತ ಅಗತ್ಯ ಎಂದು ತಿಳಿಸಿದರು.

Advertisement

ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕ ಸಿ.ಎನ್‌.ಹೇಮಂತ್‌ ಕುಮಾರ್‌ ಮಾತನಾಡಿ, ಆರ್ಥಿಕ ಗಣತಿ ಕಾರ್ಯ ಯಶಸ್ವಿಯಾಗಲು ಸಹಕರಿಸುವಂತೆ ಶಿಬಿರಾರ್ಥಿಗಳಿಗೆ ಮನವಿ ಮಾಡಿದರು. ತರಬೇತುದಾರ ಜಯಪ್ರಕಾಶ್‌, ಜಿಲ್ಲಾ ನೋಡಲ್ ಅಧಿಕಾರಿ ಉಪೇಂದ್ರ ಉಪಸ್ಥಿತರಿದ್ದರು. ಡಿ.ಕೆ.ಸೋಮಶೇಖರ್‌ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕರೀಗೌಡ ಸ್ವಾಗತಿಸಿ, ಸಹ ಸಾಂಖ್ಯೀಕ ಅಧಿಕಾರಿ ರಘು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next