Advertisement

ಮುಷ್ಕರದಲ್ಲೂ 126 ಬಸ್‌ ಸಂಚಾರ

06:34 PM Apr 18, 2021 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿರುವ ಮಧ್ಯೆಯೇ ಶನಿವಾರ ವಿವಿಧ ಡಿಪೋಗಳ ಸುಮಾರು 126 ಸರ್ಕಾರಿ ಸಾರಿಗೆ ಬಸ್‌ ಗಳು ರಸ್ತೆಗಿಳಿದು ಜಿಲ್ಲೆಯಲ್ಲಿ ಸಂಚಾರ ಆರಂಭಿಸಿವೆ. ಸರ್ಕಾರಿ ಸಾರಿಗೆ ಬಸ್‌ ಗಳ ಸಂಚಾರದಿಂದಾಗಿ ಖಾಸಗಿ ಸಾರಿಗೆ ಬಸ್‌ ಮಾಲೀಕರು ನಿರಾಶರಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿ ಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 10 ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ನಿರತರಾಗಿದ್ದು, ಮುಷ್ಕರ 11ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ದಿನದಿಂದ ದಿನಕ್ಕೆ ಮುಷ್ಕರದ ಕಾವು ಕಡಿಮೆಯಾಗುತ್ತಿದ್ದು, ಶನಿವಾರ ಚಿಕ್ಕಮಗಳೂರು ಡಿಪೋದ 26 ಬಸ್‌ಗಳು ಸೇರಿದಂತೆ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ವಿಭಾಗದ ಮೂಡಿಗೆರೆ, ಅರಸೀಕೆರೆ, ಬೇಲೂರು, ಸಕಲೇಶಪುರ ಡಿಪೋಗೆ ಸೇರಿದ ಸುಮಾರು 126 ಕೆಎಸ್‌ಆರ್‌ ಟಿಸಿ ಬಸ್‌ಗಳು ಜಿಲ್ಲೆಯಲ್ಲಿ ಸಂಚಾರ ಆರಂಭಿಸಿವೆ.

ಮುಷ್ಕರ ನಿರತ ನೌಕರರ ಪೈಕಿ ಕೆಲ ನೌಕರರು ಒಬ್ಬೊಬ್ಬರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದು, ಕಳೆದ 10 ದಿನಗಳಿಂದ ಜಿಲ್ಲಾದ್ಯಂತ ಅಸ್ತವ್ಯಸ್ತಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆ ಸೋಮವಾರ ಯಥಾಸ್ಥಿತಿಗೆ ಮರಳಲಿದೆ ಎಂದು ಸಂಸ್ಥೆಯ ಅಧಿ  ಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆ ಎಂದಿನಂತೆ ಖಾಸಗಿ ಸಾರಿಗೆ ಬಸ್‌ಗಳು ಸೇರಿದಂತೆ ಇತರ ಸಾರಿಗೆ ವಾಹನಗಳು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದವು.

ಬೆಂಗಳೂರು ನಗರದಿಂದ ಕೆಲ ಬಸ್‌ಗಳು ಚಿಕ್ಕಮಗಳೂರು ನಗರಕ್ಕೆ ಪ್ರಯಾಣಿಕರನ್ನು ಕರೆತಂದು ಪ್ರಯಾಣಿಕರನ್ನು ತುಂಬಿಸಿಕೊಂಡು ಹಿಂದಿರುಗಲು ಸಜ್ಜಾಗಿದ್ದವು. ಆದರೆ ಚಿಕ್ಕಮಗಳೂರು ಡಿಪೋದ ಸುಮಾರು 10 ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣಕ್ಕೆ ಆಗಮಿಸಿದವು. ಖಾಸಗಿ ಬಸ್‌ಗಳಲ್ಲಿ ಕುಳಿತಿದ್ದ ಪ್ರಯಾಣಿಕರು ಕೆಳಗಿಳಿದು ಕೆಎಸ್‌ಆರ್‌ಟಿಸಿ ಬಸ್‌ ಗಳನ್ನೇರಿ ಕುಳಿತರು. ಇದರಿಂದ ಸ್ಥಳದಲ್ಲಿದ್ದ ಖಾಸಗಿ ಸಾರಿಗೆ ಬಸ್‌ಗಳ ಚಾಲಕರು, ನಿರ್ವಾಹಕರು ಕೆಎಸ್‌ ಆರ್‌ಟಿಸಿ ಅ ಧಿಕಾರಿಗಳ ಬಳಿ ವಾಗ್ವಾದ ನಡೆಸಿದರು. ಕೆಎಸ್‌ಆರ್‌ಟಿಸಿ ಎಚ್‌.ಟಿ. ವೀರೇಶ್‌ ಡಿಸಿ ಬಳಿ ಮಾತುಕತೆಗೆ ಮುಂದಾದರು.

ಸರ್ಕಾರಿ ಸಾರಿಗೆ ಬಸ್‌ಗಳ ಮಾರ್ಗದಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳೂ ಸಂಚಾರ ನಡೆಸಬಹುದು. ಖಾಸಗಿಯವರಿಗಾಗಿ ಸರ್ಕಾರಿ ಸಾರಿಗೆ ಬಸ್‌ಗಳ ಸೇವೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಖಾಸಗಿ ಬಸ್‌ ಮಾಲೀಕರ ಸಂಘದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದರು. ನಂತರ ಸರ್ಕಾರಿ ಬಸ್‌ಗಳು ತಮ್ಮ ಮಾರ್ಗದಲ್ಲಿ ಸಾರಿಗೆ ಸೇವೆ ಆರಂಭಿಸಿದರೆ ಖಾಸಗಿ ಬಸ್‌ಗಳು ಎಂದಿನಂತೆ ಸಾರಿಗೆ ಸೇವೆ ಮುಂದುವರಿಸಿದರು. ಜಿಲ್ಲಾದ್ಯಂತ ಸುಮಾರು 126 ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಸಂಚಾರ ಆರಂಭಿಸಿದವು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next