ಶೃಂಗೇರಿ: ಪ್ಲವ ನಾಮ ಸಂವತ್ಸರದ ಚೈತ್ರ ಶುಕ್ಲ ಷಷ್ಠಿಗೆ 70 ವಸಂತ ಪೂರೈಸುತ್ತಿರುವ ಶಾರದಾ ಪೀಠದ 36 ನೇ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಸಪ್ತತಿಪೂರ್ತಿ ಕಾರ್ಯಕ್ರಮ ಅತ್ಯಂತ ವೈಭವದಿಂದ ನಡೆಯುತ್ತಿದೆ. ಈ ಹಿಂದೆ ಖರ ನಾಮ ಸಂವತ್ಸರದಲ್ಲಿ (2011) ಜಗದ್ಗುರುಗಳ ಷಷ್ಟಬ್ಧಿಪೂರ್ತಿ ಸಂದರ್ಭದಲ್ಲಿ ಶ್ರೀಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಸಾವಿರಾರು ಋತ್ವಿಜರು ಲಕ್ಷಮೋದಕ ಗಣಹೋಮ, ಆಯತಚಂಡಿಕಾಯಾಗ,ಕೋಟಿ ಕುಂಕುಮಾರ್ಚನೆ ಹಾಗೂ ಅತಿರುದ್ರಮಹಾಯಾಗ ನಡೆಸಿದ್ದರು.
ದಿವ್ಯಸಪ್ತತಿ ಪೂರ್ತಿ ಮಹೋತ್ಸವದ ಅಂಗವಾಗಿ ಗುರುವಾರ ಆಯುತಚಂಡಿ ಮಹಾಯಾಗದ ಸಂಕಲ್ಪ ಕೈಗೊಳ್ಳಲಾಯಿತು.100 ಯಜ್ಞಕುಂಡದಲ್ಲಿ ಒಂದು ಸಾವಿರ ಋತ್ವಿಜರು ಮಹಾಚಂಡಿಯಾಗ ನೆರವೇರಿಸುತ್ತಿದ್ದಾರೆ. ಬೆಳಗ್ಗೆ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಋತ್ವಿಜರಿಗೆ ಮಧುಪರ್ಕ ನೀಡುವುದರ ಮೂಲಕ ಯಾಗಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಇದ್ದರು.
ಋತ್ವಿಜರ ದುರ್ಗಾಸಪ್ತಶತಿ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಗಿದೆ. ಶುಕ್ರವಾರ ಶ್ರೀ ಶಾರದಾಂಬಾ ಸನ್ನಿ ಧಿಯಲ್ಲಿ ಕೋಟಿ ಕುಂಕುಮಾರ್ಚನೆಗೆ ಸಂಕಲ್ಪ ಕೈಗೊಳ್ಳಲಾಗುತ್ತದೆ. ಯಾಗಶಾಲೆಯಲ್ಲಿ ಋತ್ವಿಜರಿಗೆ ಪ್ರತ್ಯೇಕವಾದ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸ್ವಯಂಸೇವಕರು ಶ್ರೀಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಕ್ತಾದಿಗಳಿಗೆ ಶ್ರೀಮಠದ ಭೋಜನಶಾಲೆಯಲ್ಲಿ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಗುರುವಾರ ಸಂಜೆ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ವಿದ್ವಾನ್ ಹೇರಂಭ ಮತ್ತು ಹೇಮಂತ್ ತಂಡದಿಂದ ದ್ವಂದ್ವ ಕೊಳಲುವಾದನ ನಡೆಯಿತು. ವಯೋಲಿನ್ನಲ್ಲಿ ವಿವಿಎಸ್ ಮುರಾರಿ, ಮೃದಂಗ ಬಿ.ಎಸ್. ಪ್ರಶಾಂತ್, ಘಟದಲ್ಲಿ ಚಂದ್ರಶೇಖರ ಶರ್ಮ ಸಹಕಾರ ನೀಡಿದರು. ಶುಕ್ರವಾರ ಸ್ಥಳೀಯ ಕಲಾವಿದ ಸಂಪಗೋಡು ವಿಘ್ನರಾಜ ಮತ್ತು ತಂಡದವರಿಂದ ಹಾಡುಗಾರಿಕೆ ಏರ್ಪಡಿಸಲಾಗಿದೆ.