Advertisement

‌ಕೃಷಿ ಕಾಯ್ದೆಯಲ್ಲಿ ಗೊಂದಲ ಮೂಡಿಸುವ ಷಡ್ಯಂತ್ರ

06:20 PM Jan 25, 2021 | Team Udayavani |

ಕ‌ಡೂರು: ಕೃಷಿ ಕಾಯ್ದೆ ವಿಷಯದಲ್ಲಿ ಗೊಂದಲ ಮೂಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಶಕ ಸಿ.ಟಿ. ರವಿ ಹೇಳಿದರು.
ತಾಲೂಕಿನ ನಿಡಘಟ್ಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಭಾನುವಾರ ನಡೆದ ರೈತ ಸದಸ್ಯರಿಗೆ ಹೊಸ ಮತ್ತು ಹೆಚ್ಚುವರಿ ಬೆಳೆ ಸಾಲದ ಚೆಕ್‌ ವಿತರಣೆ ಹಾಗೂ ರಾಜ್ಯ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ನಡೆದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೃಷಿ ಕಾಯ್ದೆ ರೈತರಿಗೆ ಮಾರಕವಲ್ಲ. ಅವರು ಬೆಳೆದ ಬೆಳೆಗೆ ಮುಂಚಿತವಾಗಿಯೇ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿದೆ. ಅದರೆ ಕೆಲವು ಪಟ್ಟಭದ್ರ ಶಕ್ತಿಗಳು ಅರಾಜಕತೆ ಹುಟ್ಟುಹಾಕುವ ಕೆಲಸ ಮಾಡುವ ಜೊತೆಗೆ ಕಾಯ್ದೆ ವಿಷಯದಲ್ಲಿ ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನದಲ್ಲಿವೆ ಎಂದು ಆರೋಪಿಸಿದರು.

ರೈತ ತಾನು ಬೆಳೆದ ಬೆಳೆಯನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಗುತ್ತಿಗೆ ಆಧಾರದ ಬೆಳೆಯಲ್ಲೂ ಕೂಡ ಉತ್ತಮ ಲಾಭ ಕಾಣಬಹುದು. ಬೇಸಾಯ ಚಟುವಟಿಕೆಗೆ ಒಂದು ಗೌರವ ತಂದು ಕೊಡುವ ನಿಟ್ಟಿನಲ್ಲಿ ನೂತನ ಕಾಯ್ದೆ ರೂಪುಗೊಂಡಿದೆ. ಇದನ್ನು ರೈತರು ಆರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ನೀರಾವರಿ ಯೋಜನೆಗಳಿಗೆ ತಾವು ಈ ಬಾರಿ ಹೆಚ್ಚು ಒತ್ತು ನೀಡಿದ್ದು ಭದ್ರಾ ಉಪ ಕಣಿವೆ ಆಥವಾ ಗೊಂದಿ  ಅಣೆಕಟ್ಟು ಯೋಜನೆಗೆ ಜಿಲ್ಲೆಯ ಶಾಸಕರ ಸಹಭಾಗಿತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ತೆರಳಿ 1281 ಕೋಟಿ ರೂ. ಮಂಜೂರು ಮಾಡಿಸುವಲ್ಲಿ ಸಫಲತೆ ಕಾಣಲಾಗಿದೆ. ಟೆಂಡರ್‌ ಪ್ರಕ್ರಿಯೆ ಇಷ್ಟರಲ್ಲಿಯೇ ನಡೆಯಲಿದ್ದು ಕಾಮಗಾರಿಯೂ ಆರಂಭವಾಗಲಿದೆ. ಮುಂದಿನ 30 ತಿಂಗಳಲ್ಲಿ ಒಟ್ಟಾರೆ ಯೋಜನೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ತಾಂತ್ರಿಕವಾಗಿ ಕೆಲವೊಂದು ತೊಡಕುಗಳಿದ್ದರೂ ಕರಗಡ ನೀರಾವರಿ
ಯೋಜನೆ 2ನೇ ಹಂತದ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಬೈರಾಪುರ ಪಿಕ್‌ಆಪ್‌ ಯೋಜನೆಗೆ ಮಂಜೂರಾತಿ ದೊರಕಿದೆ. ರಣಘಟ್ಟ ಯೋಜನೆಯ ಮೂಲಕವು ಲಕ್ಯಾ ಪಿಳ್ಳೆನಹಳ್ಳಿ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಒಟ್ಟಾರೆ ಹತ್ತಾರು ಯೋಜನೆಗಳ ಮೂಲಕ ದಶದಿಕ್ಕುಗಳ ಹೋರಾಟದ ಫಲವಾಗಿ ಚಿಕ್ಕಮಗಳೂರು ಕ್ಷೇತ್ರದ ಅದರಲ್ಲಿಯೂ ದೇವನೂರು, ಸಖರಾಯಪಟ್ಟಣ ಭಾಗದ ಬಹಳಷ್ಟು ಕೆರೆಗಳು ಭವಿಷ್ಯದ ದಿನಗಳಲ್ಲಿ ನೀರನ್ನು ಕಾಣಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಮೇದರ್ಜೆಗೆರಿಸಲು 200 ಕೋಟಿ ನೀಡಲಾಗಿದೆ. ವೈದ್ಯಕೀಯ ಕಾಲೇಜಿಗೆ ಈಗಾಗಲೇ ಮುಖ್ಯಮಂತ್ರಿಗಳು ಭೂಮಿಪೂಜೆ ನೆರವೇರಿಸಿದ್ದಾರೆ. ಜಿಲ್ಲೆಯ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಪ್ರತಿ ಮನೆ- ಮನೆಗೆ ಕುಡಿಯುವ ನೀರು ಪೂರೈಕೆ ಮಾಡುವ 630 ಕೋಟಿ ರೂ. ವೆಚ್ಚದ ಯೋಜನೆಗೆ ನಬಾರ್ಡ್‌ ಹಣ ಮಂಜೂರು ಮಾಡಿದೆ. ಇದಕ್ಕಾಗಿ ಲಕ್ಕವಳ್ಳಿಯ ಭದ್ರಾ ಅಣೆಕಟ್ಟಿನ ಬಳಿ ಜಾಕ್‌ವೆಲ್‌ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಿದ್ದು ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.
ತಾವು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದರೂ ಭಾವ ಕ್ಷೇತ್ರದಲ್ಲಿದೆ. ದೇಹ ದೆಹಲಿಯಲ್ಲಿದೆ. ಅದರೂ ಅಭಿವೃದ್ಧಿಗೆ ತೊಡಕಾಗದಂತೆ ಕೆಲಸ ನಿರ್ವಹಿಸುತ್ತೇನೆ. ಕಡೂರು, ತರೀಕೆರೆಯ ಶಾಸಕರು ಜೋಡೆತ್ತಿನಂತೆ ಅಭಿವೃದ್ಧಿಗೆ ಕೈ ಜೋಡಿಸಲಿದ್ದಾರೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ. ತಮ್ಮ ರಾಜಕೀಯ ಜೀವನದಲ್ಲಿ ಯಾರನ್ನೂ ಎತ್ತಿಕಟ್ಟಿ ಹೊಡೆದಾಡಿಸಿಲ್ಲ. ಸಂಕಲ್ಪ ತಮ್ಮದು, ಫಲಾಪೇಕ್ಷೆ ಭಗವಂತನದ್ದು ಎಂದು ಮಾರ್ಮಿಕವಾಗಿ ನುಡಿದರು.

Advertisement

ಅಭಿನಂದನೆ ಸ್ವೀಕರಿಸಿದ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮತ್ತು ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್‌ ಮಾತನಾಡಿ, ಸಹಕಾರ ಕ್ಷೇತ್ರಕ್ಕೆ ಸಿ.ಟಿ. ರವಿ ಅವರ ನಾಯಕತ್ವದಲ್ಲಿ ಆಕಸ್ಮಿಕ ಪ್ರವೇಶ ಪಡೆದಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿ.ಟಿ. ರವಿ ಅವರು ತಮ್ಮ ಮೇಲಿಟ್ಟಿರುವ ನಂಬಿಕೆಯಂತೆ ಉತ್ತಮ ಕೆಲಸ ಮಾಡಿ ಜನಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಡುತ್ತೇನೆ ಎಂದರು.
ಮತ್ತೋರ್ವ ಶಾಸಕ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಿ.ಎಸ್‌. ಸುರೇಶ್‌ ಮಾತನಾಡಿ, ಜಿಲ್ಲೆಯ 123 ಸಹಕಾರ ಸಂಘಗಳಿಗೆ 128 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಕಳೆದ 20 ವರ್ಷದಲ್ಲಿ ನಿಡಘಟ್ಟ ಪತ್ತಿನ ಸಹಕಾರ ಸಂಘಕ್ಕೆ 7 ಕೋಟಿ ಸಾಲ ದೊರೆತಿದ್ದರೆ ತಮ್ಮ ಅವಧಿಯ ಕೇವಲ 3 ತಿಂಗಳಲ್ಲಿ 8 ಕೋಟಿ ರೂ. ಸಾಲ ನೀಡಲಾಗಿದೆ. ರೈತರ ಬದುಕು ಹಸನಾಗಬೇಕೆಂಬುದೇ ತಮ್ಮ ಆಶಯ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ವಿಜಯಕುಮಾರ್‌, ಸಹಕಾರ ಸಂಘದ ಅಧ್ಯಕ್ಷ ಎನ್‌.ಪಿ. ಸತೀಶ್‌, ಟಿ.ಎಲ್‌. ರಮೇಶ್‌, ಶೆಟ್ಟಿಹಳ್ಳಿ ರಾಮಪ್ಪ, ತಾಪಂ ಸದಸ್ಯ ಅಕ್ಷಯ್‌ಕುಮಾರ್‌, ನಿಡಘಟ್ಟ ಲೋಕೇಶ್‌, ಆಶಾ ವಿಜಯಕುಮಾರ್‌, ಗಂಗಶೆಟ್ರಾ, ಎನ್‌.ಕೆ. ಶ್ರೀಧರ, ರಾಮಚಂದ್ರಪ್ಪ, ಅನುಸೂಯ ಓಂಕಾರಮೂರ್ತಿ, ಎಚ್‌.ಕೆ. ದಯಾನಂದ ಇದ್ದರು.

ಓದಿ: ಬಸ್‌ ಪಾಸ್‌ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next