Advertisement

ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ : ಚನ್ನೇಗೌಡ

05:49 PM Apr 03, 2021 | Team Udayavani |

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಅಮೂಲಾಗ್ರ ಬದಲಾವಣೆ ಬಯಸಿ ಈ ಬಾರಿ ಪರಿಷತ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಸ್ಪರ್ಧಾ ಆಕಾಂಕ್ಷಿ ವ.ಚ. ಚನ್ನೇಗೌಡ ತಿಳಿಸಿದರು.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ 106 ವರ್ಷಗಳ ಇತಿಹಾಸ ಹೊಂದಿದ್ದು, ವಿಶ್ವಮಟ್ಟದಲ್ಲಿಯೂ ಸದಸ್ಯರನ್ನು ಒಳಗೊಂಡಿದೆ. ಮೇ 9ರಂದು ಚುನಾವಣೆ ನಡೆಯಲಿದ್ದು ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

1982ರಲ್ಲಿ ನಡೆದ ಗೋಕಾಕ್‌ ಚಳುವಳಿಯಿಂದ ಪ್ರೇರಣೆಗೊಂಡು ಅಂದಿನಿಂದ ಇಂದಿನವರೆಗೂ ಕನ್ನಡ ಸೇವೆ ಮಾಡಿಕೊಂಡು ಬಂದಿದ್ದೇನೆ. ರಾಜ್ಯ ರಸ್ತೆಸಾರಿಗೆ ಸಂಸ್ಥೆ ನೌಕರನಾಗಿ ಅಲ್ಲಿಯೂ ಕೇಂದ್ರ ಕನ್ನಡ ಕ್ರಿಯಾ ಸಂಸ್ಥೆ ಸ್ಥಾಪನೆ ಮಾಡುವ ಮೂಲಕ ಕನ್ನಡ ಸೇವೆ ಮಾಡಿದ್ದೇನೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಗೌರವ ಧನ 7 ಲಕ್ಷ 20 ಸಾವಿರ ರೂ. ಕನ್ನಡ ಕಾಯಕ ದತ್ತಿ ಪ್ರಶಸ್ತಿ ಸ್ಥಾಪಿಸಿ ಕನ್ನಡ ಪರ ಹೋರಾಟಗಾರರಿಗೆ, ಕನ್ನಡ ನಾಡುನುಡಿ ಕುರಿತು ರಚಿಸಿದ ಕೃತಿಕಾರರಿಗೆ, ಕನ್ನಡ ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್‌ ಜನಸಾಮಾನ್ಯರ ಪರಿಷತ್‌ ಮಾಡುವ ಗುರಿ ಹೊಂದಿದ್ದೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದಲ್ಲಿ ಶಾಶ್ವತ ನಿಘಂಟು ವಿಭಾಗ ಸ್ಥಾಪನೆ, ಕನ್ನಡದ ಮಹತ್ವದ ಸಾಹಿತ್ಯಗಳನ್ನು ಇತರೆ ಭಾಷೆಗಳಿಗೆ ಅನುವಾದಿಸಿ ಮುದ್ರಿಸಲಾಗುವುದು, ಪರಿಷತ್‌ ಸದಸ್ಯತ್ವ ಮತ್ತು ಪುಸ್ತಕ ಖರೀದಿ ಆನ್‌ ಲೈನ್‌ಗೊಳಿಸಲಾಗುವುದು. ಕನ್ನಡ ಶಾಲೆಗಳ ಸಬಲೀಕರಣಕ್ಕೆ ಒತ್ತು ನೀಡಲಾಗುವುದು. ಯುವ ಬರಹಗಾರರು ಮತ್ತು ಮಹಿಳಾ ಸಾಹಿತಿಗಳಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

Advertisement

ಸಾಹಿತಿ ಮತ್ತು ಕಲಾವಿದರಿಗೆ ಆರೋಗ್ಯ ವಿಮೆ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಭವನ, ಪರಿಷ್ಕೃತ ಡಾ| ಸರೋಜಿನಿ ಮಹಷಿ ವರದಿ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಕೇಂದ್ರ ಸರ್ಕಾರ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಭಾಷೆ ಉಳಿವಿಗಾಗಿ ನಿರ್ದಿಷ್ಟ ಕಾರ್ಯಯೋಜನೆ, ನಾಲ್ಕು ಕಂದಾಯ ವಲಯಗಳಲ್ಲಿ ಮಹಿಳಾ, ದಲಿತ, ವಚನ, ಹಾಗೂ ದಾಸ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳ ಸಮಾವೇಶ, ಹೊರರಾಜ್ಯಗಳಲ್ಲಿ ಕನ್ನಡ ಸಮಾವೇಶ ನಡೆಸಲಾಗುವುದು ಎಂದರು.

ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಮತ್ತು ಇತರೆ ಸಾಹಿತ್ಯ ಸಮಾವೇಶ, ವಿವಿಧ ಕ್ಷೇತ್ರದ ತಜ್ಞರ ಸಲಹಾ ಸಮಿತಿ, ಕಾನೂನು ಘಟಕ, ಸಂಶೋಧನೆ ವಿಭಾಗ ತೆರೆಯಲಾಗುವುದು ಹಾಗೂ ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದ ಅವರು, ರಾಜ್ಯದಲ್ಲಿ 3.10 ಲಕ್ಷ ಸದಸ್ಯರಿದ್ದು, ಕನ್ನಡ ಸಾಹಿತ್ಯ ಪರಿಷತ್‌ನ 26ನೇ ರಾಜ್ಯಾಧ್ಯಕ್ಷರನ್ನಾಗಿ ಬಹುಮತದಿಂದ ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಸಾಹಿತಿ ರವೀಶ್‌ ಬಸಪ್ಪ ಮಾತನಾಡಿ, ವ.ಚ. ಚನ್ನೇಗೌಡ ಅವರು ಅಂದುಕೊಂಡ ಕೆಲಸವನ್ನು ಮಾಡಿಯೇ ಮಾಡುತ್ತಾರೆ. ಇವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಲ್ಲಿ ಪರಿಷತ್‌ ಹೋರಾಟದ ರೂಪ ಪಡೆದುಕೊಳ್ಳಲಿದೆ ಹಾಗೂ ಸರ್ಕಾರ ಮತ್ತು ಪರಿಷತ್‌ ನಡುವೆ ಕೊಂಡಿಯಾಗಿ ಉತ್ತಮವಾಗಿ ಕೆಲಸ ಮಾಡುವ ಮೂಲಕ ಕನ್ನಡಿಗರ ಧ್ವನಿ ಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌, ಕುಮಾರಸ್ವಾಮಿ, ನರೇಂದ್ರ, ಚಲುವೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next