Advertisement

ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಕ್ಯಾರೇ ಎನ್ನದ ಜನ!

09:32 PM May 23, 2021 | Team Udayavani |

„ಎ.ಜೆ. ಪ್ರಕಾಶ್‌ಮೂರ್ತಿ ಕಡೂರು

Advertisement

ಕಡೂರು: ಕಡೂರು ತಾಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಗರಿಷ್ಟ ಸಂಖ್ಯೆಯನ್ನು ಈಗಾಗಲೇ ಮುಟ್ಟಿದ್ದು ಜನರ ಬೇಕಾಬಿಟ್ಟಿ ಓಡಾಟಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ಕೇವಲ ಎರಡಂಕಿ ಇದ್ದ ಸೋಂಕಿತರ ಸಂಖ್ಯೆ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ದಿಢೀರನೇ ಏರಿಕೆ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಪ್ರತಿ ದಿನ ತಾಲೂಕಿನ ಸೋಂಕಿತರ ಪಟ್ಟಿ ಬೆಳೆಯುತ್ತಲೇ ಇದೆ. 100, 130, 150 ಹೀಗೆ ಸಾಗಿದ ಪಟ್ಟಿ ಶತಕ, ದ್ವಿಶತಕದ ಗಡಿ ದಾಟಿದ್ದು ಪಾಸಿಟಿವ್‌ ಪ್ರಕರಣಗಳೊಂದಿಗೆ ಗರಿಷ್ಟ ಮಟ್ಟ ತಲುಪಿದೆ. ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಸೋಂಕು ನಿಯಂತ್ರಣಕ್ಕೆ ವ್ಯಾಪಕವಾದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಕೊರೊನಾ ಭಯವಿಲ್ಲದೆ ಅಂಗಡಿಗಳಿಗೆ ಮುಗಿಬೀಳುತ್ತಿರುವುದು ಒಂದೆಡೆಯಾದರೆ ಮತ್ತೂಂದೆಡೆ ಬಹಳಷ್ಟು ಜನರು ಅಲ್ಲಲ್ಲಿ ಗುಂಪಾಗಿ ನಿಂತು ಮಾತನಾಡುತ್ತಿರುವುದು ನೋಡಿದರೆ ಇವರಿಗೆ ರೋಗದ ಭಯ ಇಲ್ಲವೇನೋ ಎಂದು ಭಾಸವಾಗುತ್ತದೆ.

ವ್ಯಾಕ್ಸಿನ್‌ ಪಡೆಯಲು ಇದೀಗ ಮುಗಿಬಿದ್ದಿರುವ ಜನ ಅಂತರ ಕಾಪಾಡಿಕೊಳ್ಳದೆ ಗುಂಪು- ಗುಂಪಾಗಿ ನಿಲ್ಲುತ್ತಿದ್ದು ಇವರನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯವರು ಮುಂದಾಗುತ್ತಿಲ್ಲ. ಪಟ್ಟಣದ ವೆಂಕಟೇಶ್ಚರನಗರ, ವಿದ್ಯಾನಗರ, ಸುಭಾಷ್‌ನಗರ, ದೊಡ್ಡಪೇಟೆ ಮೂರ್ತಿಹಾಳ್‌, ಕಲ್ಲುಗುಂಡಿ, 31 ಎಕರೆ, ಅಂಬೇಡ್ಕರ್‌, ಕೆ. ಹೊಸಳ್ಳಿ ನಗರ ಹೀಗೆ ಕೆಲವು ಪ್ರಮುಖ ಪ್ರದೇಶಗಳಲ್ಲಿ ನಿತ್ಯ 10 ರಿಂದ 15 ಪ್ರಕರಣಗಳವರೆಗೆ ದಾಖಲಾಗುತ್ತಿದೆ.

ಆದರೂ ಜನರ ಬೇಜವಾಬ್ದಾರಿತನ ಕೋವಿಡ್‌ ನಿರ್ವಹಣೆ ವಿಚಾರವಾಗಿ ಅ ಧಿಕಾರಿಗಳ ತಲೆಬೇನೆ ಹೆಚ್ಚಿಸಿದೆ. ಎಲ್‌ಐಸಿ ಪಕ್ಕದ ರಸ್ತೆಯನ್ನು ಬಡಾವಣೆಯ ನಿವಾಸಿಗಳೇ ಬಂಬು,ಪೋಲ್ಸ್‌ಗಳೀಂದ ಬಂದ್‌ ಮಾಡಿ ಪ್ರವೇಶ ನಿರಾಕರಿಸಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಆರೋಗ್ಯ ಇಲಾಖೆಯು ಪಟ್ಟಿ ಮಾಡಿದ ಪ್ರಕಾರ ಒಂದು ಅಂದಾಜಿನಂತೆ ಪಟ್ಟಣದಲ್ಲಿ 350ಕ್ಕಿಂತಲೂ ಹೆಚ್ಚು ಪಾಸಿಟಿವ್‌ ಪ್ರಕರಣಗಳಿದ್ದು ಇವರಲ್ಲಿ ಶೇ. 90 ಜನರನ್ನು ಹೋಂ ಐಸೋಲೇಶ್‌ ನಲ್ಲಿ ಇಡಲಾಗಿದೆ.

Advertisement

ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತಾಲೂಕು ವೈದ್ಯಾ ಧಿಕಾರಿ ನೇತೃತ್ವದಲ್ಲಿ ಪರೀಕ್ಷೆ, ಮಾತ್ರೆಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮೊದಲ ಅಲೆಯ ಸಂದರ್ಭ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದ ಪ್ರದೇಶಗಳನ್ನು ಕಂಟೈನ್ಮೆಂಟ್‌, ಮೈಕ್ರೋ ಕಂಟೆನ್ಮೆಂಟ್‌ ಪ್ರದೇಶಗಳೆಂದು ನಿರ್ಧಾರ ಮಾಡಿ ಆಯಾ ಭಾಗದ ಶಾಲೆಗಳಲ್ಲಿ ಸೋಂಕು ನಿರ್ವಹಣೆಯ ಘಟಕಗಳನ್ನು ತೆರೆದು ಸೋಂಕಿತರ ಪತ್ತೆ ಕಾರ್ಯ, ಆರೈಕೆ ಹಾಗೂ ಬೇಕಾಬಿಟ್ಟಿ ತಿರುಗುವವರಿಗೆ ಕಡಿವಾಣ ಹಾಕುವ ಮೂಲಕ ಹತೋಟಿಗೆ ತರಬಹುದು ಎಂದು ಕೆಲವು ಪರಿಣಿತರ ಅಭಿಪ್ರಾಯವಾಗಿದೆ.

ಹಳ್ಳಿಗಳಿಂದ ಬರುವವರನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆಯ ಸಿಬ್ಬಂದಿ  ಮರವಂಜಿ, ಬಸವೇಶ್ವರ ವೃತ್ತದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಒಟ್ಟಾರೆ ಕೇವಲ ಎರಡು ತಿಂಗಳಲ್ಲಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದ್ದು ತಾಲೂಕು ಆಡಳಿತಕ್ಕೆ ಇದು ಜವಾಬ್ದಾರಿಯನ್ನು ಹೆಚ್ಚಿಸಿದರೆ ಜನ ಸಾಮಾನ್ಯರಿಗೆ ಎಚ್ಚರಿಕೆ ಗಂಟೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next