Advertisement

ಕರಂದ್ಲಾಜೆ ಜನರ ಸಮಸ್ಯೆಗೆ ಸ್ಪಂದಿಸಿಲ್ಲ : ಮಧ್ವರಾಜ್‌

04:56 PM Apr 10, 2019 | Team Udayavani |

ಎನ್‌.ಆರ್‌. ಪುರ: ಕಳೆದ ಲೋಕ ಸಭಾ ಚುನಾವಣೆಯಲ್ಲಿ 1.80 ಲಕ್ಷ ಮತಗಳಿಂದ ಗೆದ್ದ ಸಂಸದೆ ಶೋಭಾ ಕರದ್ಲಾಂಜೆ ಅವರು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌
ಮಧ್ವರಾಜ್‌ ಹೇಳಿದರು.

Advertisement

ತಾಲೂಕಿನ ಬಿ.ಎಚ್‌. ಕೈಮರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷದ ರಾಜ್ಯದ ಜವಾಬ್ದಾರಿಯಿದೆ ಎಂದು ಕಾರಣ
ಹೇಳುವ ಮೂಲಕ ಕ್ಷೇತ್ರದ ಸಮಸ್ಯೆ ಆಲಿಸಲು ಮನೆಯನ್ನು ಮಾಡಲಿಲ್ಲ. ಕಸ್ತೂರಿರಂಗನ್‌ ವರದಿ ಜಾರಿ ಸಭೆಯಲ್ಲಿ ಭಾಗವಹಿಸಲಿಲ್ಲ. ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ತೀರ್ಮಾನವಾದಾಗಲೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂದು ದೂರಿದರು.

ಪ್ರಸ್ತುತ ಚುನಾವಣೆಯಲ್ಲಿ ಮತದಾರರು ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕೋ ಅಥವಾ ಕೆಲಸ ಮಾಡುವ ಪ್ರಮೋದ್‌ ಮಧ್ವರಾಜ್‌ ಬೇಕೋ
ಎಂಬುದನ್ನು ನಿರ್ಧರಿಸ ಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ 25 ಕೋಟಿ ಜನ ಬಡವರಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂತಹ ಕುಟುಂಬದ
ಪ್ರತಿ ಮಹಿಳೆಗೆ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡುವ ಮಹಾ ಕ್ರಾಂತಿಕಾರಿಕ ಘೋಷಣೆ ಮಾಡಿದ್ದಾರೆ. ಸಂಸದರು ತಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮೋದಿ ನೋಡಿ ಮತಹಾಕಿ ಎನ್ನುತ್ತಿದ್ದಾರೆ. ಆದರೆ ಸ್ಥಳೀಯ
ಜನರ ಸಮಸ್ಯೆಗಳನ್ನು ಆಲಿಸಲು ಮೋದಿ ಬರುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ಲಭ್ಯವಾಗುವ ಅಭ್ಯರ್ಥಿಗಳ ಅವರು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.

ಬಿಜೆಪಿಯವರು ಆರಂಭಿಸುವ ಗೋ ಬ್ಯಾಕ್‌ ಶೋಭಾ ಅಭಿಯಾನವನ್ನು ಅವರಿಗೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಯಶಸ್ವಿಯಾಗಿ ಮುಗಿಸುವ ಕೆಲಸ
ಮಾಡಬೇಕು. ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾಗುವುದು. ಜನರ ವಿರೋಧಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಕೆಲಸ
ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನವನ್ನು ತಂದು ಶೃಂಗೇರಿ ಕ್ಷೇತ್ರವನ್ನು ಹಾಗೂ ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. 2ಕೋಟಿ ಉದ್ಯೋಗ ಸೃಷ್ಠಿಸಿಲ್ಲ. ಡಾಲರ್‌ ಎದುರು ರೂಪಾಯಿ ಮೌಲ್ಯ
ಹೆಚ್ಚಿಸಿಲ್ಲ. ನೆರೆಹೊರೆಯ ರಾಷ್ಟ್ರಗಳ ಸೈನಿಕರ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ನಷ್ಟದ ಸ್ಥಿತಿ
ಅನುಭವಿಸುವಂತಾಯಿತು ಎಂದು ದೂರಿದರು.

ತಾಲೂಕು ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಾ| ಅಂಶುಮಂತ್‌, ಜಿಪಂ ಸದಸ್ಯ ಪಿ.ಆರ್‌. ಸದಾಶಿವ, ಮುಖಂಡರಾದ ಈ.ಸಿ. ಜೋಯಿ, ಉಪೇಂದ್ರ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್‌, ಶಿವದಾಸ್‌, ಸಾಧಿಕ್‌ ಭಾಷಾ, ಅಬೂಬಕರ್‌ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next