Advertisement

ಮುಖ್ಯ ಕಾರ್ಯದರ್ಶಿಗೆ ಕರಾವಳಿ ನಂಟು!

09:35 AM Dec 02, 2017 | Team Udayavani |

ಕಾರ್ಕಳ: ಇತ್ತೀಚೆಗಷ್ಟೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಐಎಎಸ್‌ ಅಧಿಕಾರಿ ರತ್ಮಪ್ರಭಾ ಅವರಿಗೂ ಕಾರ್ಕಳಕ್ಕೂ ನಂಟಿದೆ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ !

Advertisement

ಹೌದು ಕಳೆದ ವಾರವಷ್ಟೇ ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆ ವಹಿಸಿದ ಮಹಿಳಾಮಣಿ ರತ್ನಪ್ರಭಾ ಅವರ ತಾಯಿ ಕಾರ್ಕಳದವರು. ಕಾರ್ಕಳದಲ್ಲಿ ಉದ್ಯಮಿ, ರಾಜಕಾರಣಿಯಾಗಿ ಗುರುತಿಸಿ ಜನಪ್ರಿಯರಾಗಿದ್ದ ಹಳೆ ದ್ವಾರಕಾ ಹೊಟೇಲಿನ ಮಾಲಕ ಸದಾನಂದ ಕಾಮತ್‌ ಅವರ ಸೋದರಿಯಾಗಿದ್ದ ವಿಮಲಾ ಬಾೖ ಅವರ ಮೂವರು ಮಕ್ಕಳಲ್ಲಿ ರತ್ನಪ್ರಭಾ ಕೊನೆಯವರು. 

ಕಾರ್ಕಳದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ ದಿ|ವಿಮಲಾ ಬಾೖ ಅವರು ಆಂಧ್ರ ಮೂಲದ ಅಧಿಕಾರಿ ಚಂದ್ರಯ್ಯ ಅವರನ್ನು ವಿವಾಹವಾಗಿದ್ದರು.  ತಮ್ಮ ಬಾಲ್ಯ ಹಾಗೂ ಶಿಕ್ಷಣವನ್ನು ಆಂಧ್ರಪ್ರದೇಶದಲ್ಲಿಯೇ ಪೂರೈಸಿದ ರತ್ನಪ್ರಭಾ ಅವರು ತಾಯಿ ವಿಮಲಾ ಅವರ ಜತೆಗೆ ರಜಾದಿನಗಳಲ್ಲಿ ಕಾರ್ಕಳದತ್ತ ಬಂದು ಕುಟುಂಬದ ಸದಸ್ಯರ ಜತೆಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದರು.
ಈಗಲೂ ವರ್ಷಕ್ಕೊಂದು ಬಾರಿ ಕಾರ್ಕಳಕ್ಕೆ ಬರುವ ಅವರು, ಕುಟುಂಬದ ಕಾರ್ಯಕ್ರಮಗಳಲ್ಲಿ, ತಮ್ಮ ಕುಟುಂಬದ ದೇವಸ್ಥಾನದ ಪೂಜಾ ಮಹೋತ್ಸವಗಳಲ್ಲಿ  ಪಾಲ್ಗೊಳ್ಳುತ್ತಾರೆ.

ಕರಾವಳಿಯ ನಿಕಟ ಸಂಪರ್ಕ
ತಾಯಿ ವಿಮಲಾ ಅವರು ಮಂಗಳೂರು, ಪುತ್ತೂರು, ಕಾರ್ಕಳ ಮೊದಲಾದ ಕಡೆ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದರಿಂದ ಆ ಊರುಗಳ ಸಂಪರ್ಕವೂ ರತ್ನಪ್ರಭಾ  ಅವರಿಗಿದೆ.  ವಿಮಲಾ ಅವರು ಮಂಗಳೂರಿನ ಲೇಡಿ ಗೋಶನ್‌ನಲ್ಲಿಯೂ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದು ಸ್ಕಿನ್‌ ಸ್ಪೆಷಲಿಸ್ಟ್‌ ಆಗಿದ್ದರು. 2016ರಲ್ಲಿ ತಾಯಿ ನಿಧನ ಹೊಂದಿದಾಗ ಕೊನೆಯ ಬಾರಿ ಕಾರ್ಕಳಕ್ಕೆ ಭೇಟಿ ನೀಡಿದ್ದ ರತ್ನಪ್ರಭಾ ಅವರಿಗೆ ಕಾರ್ಕಳ ಇಷ್ಟವಾದ ತಾಣವಂತೆ. ಕಾರ್ಕಳದಲ್ಲಿರುವ ಪೂರ್ವಜರ ಮನೆ, ವಾತಾವರಣ ಎಲ್ಲವೂ ಅವರಿಗೆ ಮೆಚ್ಚುಗೆ ಎನ್ನುವ ಮಾಹಿತಿಯನ್ನು ಪ್ರಸ್ತುತ ಬೆಂಗಳೂರಿನಲ್ಲಿರುವ ಕಾರ್ಕಳದ ದಿ| ಸದಾನಂದ ಕಾಮತ್‌ ಅವರ ಮಕ್ಕಳು ನೀಡುತ್ತಾರೆ.

ಸಂಸ್ಕೃತಿ ಪ್ರಿಯೆ; ಕೊಂಕಣಿ ಮೋಹ
ರತ್ನಪ್ರಭಾ ಅವರಿಗೆ ಕೊಂಕಣಿ ಎಂದರೆ ಇಷ್ಟ . ಮನೆ ಭಾಷೆ ಕೊಂಕಣಿಯಾದ್ದರಿಂದ ಭಾಷೆಯ ಮೇಲೆ ಅಭಿಮಾನ ಜಾಸ್ತಿ. ಆಂಧ್ರ ಮೂಲದ ಹುಡುಗನನ್ನು ವರಿಸಿದ್ದರೂ, ಕೊಂಕಣಿ ಭಾಷೆ ಹಾಗೂ ಊರಿನ ವ್ಯಾಮೋಹದಿಂದ ತಮ್ಮ ಮಗ, ಮಗಳಿಗೂ ಕೊಂಕಣಿ ಕಲಿಸಿದ್ದಾರೆ. ಭಾಷಾ ಪ್ರೇಮವನ್ನೂ ಉಳಿಸಿಕೊಂಡಿದ್ದಾರೆ. ಅಲ್ಲದೇ ಟೆನ್ನಿಸ್‌ನಲ್ಲಿಯೂ ಅವರು ಪ್ರವೀಣೆಯಾಗಿದ್ದರು ಎನ್ನುವ ಮಾಹಿತಿಯನ್ನು ಸದಾನಂದ ಕಾಮತ್‌ ಮಕ್ಕಳು ನೀಡುತ್ತಾರೆ.

Advertisement

ಪ್ರಸಾದ್‌ ಶೆಣೈ ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next