Advertisement

ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

12:56 AM Sep 20, 2022 | Team Udayavani |

ವಿಧಾನಸಭೆ : ರಾಜ್ಯದಲ್ಲಿ ಪ್ರವಾಹದಿಂದ ಗ್ರಾಮೀಣ ಭಾಗದಲ್ಲಿ ಹಾನಿಯಾಗಿರುವ ಮೂಲಸೌಕರ್ಯ ಪುನರ್‌ ಸ್ಥಾಪಿಸಲು ಈಗಾಗಲೇ 500 ಕೋಟಿ ರೂ. ಬಿಡುಗಡೆ ಮಾಡಿದ್ದು, ಹೆಚ್ಚುವರಿಯಾಗಿ 600 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

Advertisement

ಪ್ರವಾಹ ಸಂಕಷ್ಟ ಕುರಿತ ಚರ್ಚೆಗೆ ಉತ್ತರಿಸಿದ ಅವರು, ಅರಂಭದಲ್ಲಿ ಪ್ರವಾಹದಿಂದ 5.8 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ಅದು 10.06 ಲಕ್ಷ ಹೆಕ್ಟೇರ್‌ ಅಗಿದೆ. ಸುಮಾರು 1550 ಕೋಟಿ ರೂ. ಬೆಳೆ ನಷ್ಟವಾಗಿದೆ. ಈವರೆಗೆ 3,25,766 ರೈತರಿಗೆ 377.44 ಲಕ್ಷ ರೂ. ಪರಿಹಾರವನ್ನು ನೇರ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. 42048 ಮನೆ ಹಾನಿಯಾಗಿದೆ. ಪರಿಹಾರಕ್ಕಾಗಿ ಮೊದಲ ಕಂತಿನಲ್ಲಿ 196.49 ಕೋ.ರೂ. ಬಿಡುಗಡೆ ಮಾಡಲಾಗಿದೆ. ಎನ್‌ಡಿಅರ್‌ಎಫ್ ನಡಿ 1640 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದೇವೆ.

ಒಟ್ಟಾರೆಯಾಗಿ ಬೆಳೆ ಹಾನಿ ಪರಿಹಾರಕ್ಕೆ 1550 ಕೋ.ರೂ., ಮನೆ ಹಾನಿ ಪರಿಹಾರಕ್ಕೆ 850 ಕೋಟಿ ರೂ. ಹಾಗೂ ಮೂಲಸೌಕರ್ಯ ಪರಿಹಾರಕ್ಕೆ 1200 ಕೋಟಿ ರೂ.ಅವಶ್ಯಕತೆಯಿದೆ ಎಂದರು.

ಪಶ್ಚಿಮ ಘಟ್ಟದಲ್ಲಿ ಇತ್ತೀಚನ ವರ್ಷದಲ್ಲಿ ಭೂ ಕುಸಿತ ಹೆಚ್ಚಾಗುತ್ತಿದೆ. ಇದಕ್ಕೆ ಹಲವು ಕಾರಣವೂ ಇದೆ. ಭಟ್ಕಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗುಡ್ಡಕೊರೆದು ಅಗಿರುವ ಅನಾಹುತವನ್ನು ಗಮನಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಗುಡ್ಡ ಕೊರೆಯುವುದನ್ನು ನಿಲ್ಲಿಸಲು ನಿರ್ದೇಶನ ನೀಡಲಾಗಿದೆ. ವಿವಿಧ ಸಂಸ್ಥೆಯ ತಜ್ಞರ ಮೂಲಕವೂ ಭೂ ಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆ ವರದಿಯನ್ನು ಪಡೆಯಲಾಗಿದೆ. ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಕೆಲವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

ಹೊಸ ಪದ್ಧತಿ: ಕರಾವಳಿಯಲ್ಲಿ ಕಡಲ್ಕೊರೆತ ತಡೆಗೆ ಪ್ರತಿ ವರ್ಷ ಕಲ್ಲು ಹಾಕುವುದರಿಂದ ಯಾವುದೇ ಪ್ರಯೋಜನ ಆಗಿಲ್ಲ.ಹೀಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಹೊಸ ಪದ್ಧತಿಯೊಂದನ್ನು ದ.ಕ. ಜಿಲ್ಲೆಯ ಉಲ್ಲಾಳದಲ್ಲಿ ಒಂದು ಕಿ.ಮೀ. ಉದ್ದದಲ್ಲಿ ಕಾಮಗಾರಿ ನಡೆಸಲಿದ್ದೇವೆ. ಎಡಿಬಿಯಿಂದಲೂ ಹಲವು ಕಾಮಗಾರಿಗಳು ನಡೆದಿವೆ. ಅದರೆ, ಕೆಲವೊಂದು ಪ್ರಯೋಜನವಾಗಿಲ್ಲ. ಕಲ್ಲು ಹಾಕುವುದರಿಂದ ಗುತ್ತಿಗೆದಾರರಿಗೆ ಮಾತ್ರ ಲಾಭವಾಗುತ್ತಿದೆ. ಕಡಲ್ಕೊರೆತದಿಂದ ಮೀನುಗಾರರ ಕುಟುಂಬಕ್ಕೆ ಸಾಕಷ್ಟು ಸಮಸ್ಯೆಯಾಗುವುದನ್ನು ಸ್ಥಳ ಪರಿಶೀಲನೆ ವೇಳೆ ಗಮನಿಸಿದ್ದೇನೆ ಎಂದರು.

Advertisement

ಪ್ರತಿ ವರ್ಷ ನಿರ್ವಹಣೆ ಆಗಬೇಕು: ವಿಪಕ್ಷದ ಉಪನಾಯಕ ಯು.ಟಿ. ಖಾದರ್‌ ಮಾತನಾಡಿ, ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಶಾಶ್ವತ ಕಾಮಗಾರಿ ಕೈಗೊಂಡು ಅದರ ನಿರ್ವಹಣೆಗೆ ಪ್ರತಿ ವರ್ಷ ಬಜೆಟ್‌ನಲ್ಲಿ ನಿರ್ದಿಷ್ಟ ಅನುದಾನ ಮೀಸಲಿಡಬೇಕು. ಕಡಲತೀರದಲ್ಲಿ ಕುಸಿದಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು. ಎಡಿಬಿಯಿಂದ ಅಗಿರುವ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಬೇಕು. ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆಗಳ ದುರಸ್ತಿ ತಕ್ಷಣದಿಂದಲೇ ಅಗಬೇಕು. ಸುಳ್ಯತಾಲೂಕಿನಲ್ಲಿ ಉಂಟಾದ ಕಂಪನದಿಂದ 43 ಮನೆಗೆ ಹಾನಿಯಾಗಿದ್ದು ಕೂಡಲೇ ಪರಿಹಾರ ಸೂಚಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೂ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಪೋಸ್ಟರ್‌ ಪ್ರದರ್ಶನ, ಸಭಾ ತ್ಯಾಗ
ಪ್ರವಾಹದ ಮೇಲಿನ ಚರ್ಚೆಗೆ ಮುಖ್ಯಮಂತ್ರಿಯವರು ನೀಡಿದ ಉತ್ತರಕ್ಕೆ ತೃಪ್ತಿಕಾಣದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಹಿತ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, 40 ಪರ್ಸೆಂಟ್‌ ಸರ್ಕಾರ, ಭ್ರಷ್ಟಾಚಾರದಿಂದ ತುಂಬಿದೆ ಎಂಬಿತ್ಯಾದಿ ಬರಹಗಳು ಇರುವ ಪೋಸ್ಟರ್‌ಗಳನ್ನು ಪ್ರದರ್ಶಿಸುತ್ತಾ ಸದನದ ಬಾವಿಗೆ ಇಳಿದರು. ಸಭಾಧ್ಯಕ್ಷರು ಮಧ್ಯ ಪ್ರವೇಶಿಸಿ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರೂ ಕೇಳದ ಸದಸ್ಯರು ಗದ್ದಲ ಮುಂದುವರಿಸಿದರು, ಆಗ ಆಡಳಿತ ಪಕ್ಷದ ಸದಸ್ಯರು ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ಅರೋಪದ ಪೋಸ್ಟರ್‌ ಪ್ರದರ್ಶಿಸಿದರು. ಸದಸ್ಯರ ವಾಗ್ವಾದ, ಆರೋಪ, ಪ್ರತ್ಯಾರೋಪ ತಾರಕಕ್ಕೆ ಏರುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾಧ್ಯಕ್ಷರು ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ಮತ್ತೆ 600 ಕೋಟಿ ರೂ. ಬಿಡುಗಡೆ
ಮಳೆ ಹಾನಿ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಲು 500 ಕೋಟಿ ರೂ. ಬಿಡುಗಡೆ ಮಾಡಿದ್ದು, ಹೆಚ್ಚುವರಿಯಾಗಿ 600 ಕೋಟಿ ರೂ. ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಪ್ರವಾಹ ಸಂಕಷ್ಟ ಕುರಿತ ಚರ್ಚೆಗೆ ಉತ್ತರಿಸಿದ ಅವರು, 10.06 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಸುಮಾರು 1,550 ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಈವರೆಗೆ 3,25,766 ರೈತರಿಗೆ 377.44 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮನೆ ಹಾನಿ ಪರಿಹಾರಕ್ಕೆ ಮೊದಲ ಕಂತಿನಲ್ಲಿ 196.49 ಕೋ.ರೂ. ಬಿಡುಗಡೆ ಮಾಡಲಾಗಿದೆ. ಎನ್‌ಡಿಅರ್‌ಎಫ್ನಡಿ 1,640 ಕೋ. ರೂ. ಕೋರಿದ್ದೇವೆ. ಒಟ್ಟಾರೆ ಬೆಳೆ ಹಾನಿ ಪರಿಹಾರಕ್ಕೆ 1,550 ಕೋ.ರೂ., ಮನೆ ಹಾನಿಗೆ 850 ಕೋ. ರೂ., ಮೂಲ ಸೌಕರ್ಯಕ್ಕೆ 1,200 ಕೋಟಿ ರೂ.ಅಗತ್ಯವಿದೆ ಎಂದರು.

ಅಡಿಕೆಗೆ ಎಲೆ ಹಳದಿ ರೋಗ : ಸಹಾಯಧನಕ್ಕೆ ಕ್ರಮ
ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ಅಡಿಕೆಗೆ ವ್ಯಾಪಕವಾಗಿ ಹರಡುತ್ತಿರುವ ಎಲೆ ಹಳದಿ ರೋಗ ಕುರಿತು ಉದಯವಾಣಿಯ ವರದಿ ಮೇಲ್ಮನೆ  ಯಲ್ಲಿ ಪ್ರತಿಧ್ವನಿಸಿದ್ದು, ಸಹಾಯ ಧನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರಕಾರ ತಿಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ 97,492 ಹೆಕ್ಟೇರ್‌ ಪ್ರದೇಶ   ದಲ್ಲಿ ಅಡಿಕೆ ಬೆಳೆಯ ಲಾಗು ತ್ತಿದ್ದು, ಅಂದಾಜು 1,217 ಹೆಕ್ಟೇರ್‌ನಲ್ಲಿ ಅಡಿಕೆ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಇನ್ನು ಉಡುಪಿ ಯಲ್ಲಿ ಸುಮಾರು 22,898 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯ ಲಾಗುತ್ತಿದ್ದು, ಹಳದಿ ಎಲೆ ರೋಗಕ್ಕೆ ತುತ್ತಾ ಗಿರುವುದು ಕಂಡುಬಂದಿಲ್ಲ ಎಂದೂ ಸರಕಾರ ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಅವರ ಪ್ರಸ್ತಾವಕ್ಕೆ ಲಿಖಿತ ಉತ್ತರ ನೀಡಿರುವ ಸರಕಾರ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರದೇಶ ವಿಸ್ತರಣೆ ಕಾರ್ಯ ಕ್ರಮದಡಿ 2.25 ಕೋ.ರೂ. ನಿಗದಿಪಡಿಸಿ, 357.70 ಹೆಕ್ಟೇರ್‌ ಪ್ರದೇಶದಲ್ಲಿ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಸಂಶೋ ಧನೆ ಗಾಗಿ 1 ಕೋಟಿ ರೂ.ಗಳಲ್ಲಿ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಡಿಕೆಗೆ ಎಲೆ ಹಳದಿ ರೋಗವು ವ್ಯಾಪಕ ವಾಗಿ ಹರಡುತ್ತಿದೆ. ಈ ಬಗ್ಗೆ ಉದಯ ವಾಣಿ ಯಲ್ಲಿ ವಿಸ್ತೃತ ವರದಿ ಪ್ರಕಟವಾಗಿದೆ ಎಂದು ಹರೀಶ್‌ ಕುಮಾರ್‌ ಸದನದ ಗಮನ ಸೆಳೆದಿದ್ದರು.

ರಾಜ್ಯದಲ್ಲಿ ಮುಂದಿನ 2030ಕ್ಕೆ ಆಗಬಹುದಾದ ಹವಾಮಾನ ಬದಲಾವಣೆ ಬಗ್ಗೆ ಅರಣ್ಯ ಇಲಾಖೆ ಅಂಗಸಂಸ್ಥೆ ಸಂಶೋಧನಾ ವರದಿ ಸಲ್ಲಿಸಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ? ಎನ್‌ಡಿಆರ್‌ಎಫ್‌ ನಿಮಯ ಬದಲಾವಣೆಗೆ ಸದನದಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲು ಸಾಧ್ಯವಿಲ್ಲವೆ? ಬೆಳೆ ಹಾನಿಯಾಗಿರುವ 10.06 ಲಕ್ಷ ಹೆಕ್ಟೇರ್‌ ಸಹಿತ ಬಿತ್ತನೆ ಅಗದೇ ಇರುವ 8 ಲಕ್ಷ ಹೆಕ್ಟೇರ್‌ ಭೂಮಿಯ ರೈತರಿಗೂ ಪರಿಹಾರ ನೀಡಬೇಕು.
– ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next