Advertisement

ಕೆಮಿಸ್ಟ್ರಿ ವರ್ಕೌಟ್‌ ಆಯ್ತು: ಕರಿಯಪ್ಪನ ಹಾಡಿಗೆ ಮೆಚ್ಚುಗೆ 

06:10 AM Jan 11, 2019 | |

ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವಂತಹ ಚಿತ್ರಗಳು ಬಂದಿವೆ. ಆ ಸಾಲಿಗೆ “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಎಂಬ ಚಿತ್ರವೂ ಒಂದು. ಈ ಚಿತ್ರ ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು, ಬಿಡುಗಡೆಗೆ ಸಜ್ಜಾಗಿದೆ. ಅಷ್ಟೇ ಅಲ್ಲ, ಚಿತ್ರದ ಮೊದಲ ಹಾಡು ಕೂಡ ಹೊರಬಂದಿದೆ. ಹೌದು, ಸಂಗೀತ ನಿರ್ದೇಶಕ ನವೀನ್‌ ಸಜ್ಜು ಹಾಡಿರುವ “ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು, ಶ್ರೀಮತಿ ಆಗು ಅಂದ್ರೆ ಮೂತಿ ತಿರುವಿ ಹೋದ್ಲು…’ ಎಂಬ ಹಾಡು ಹೊರಬಂದಿದ್ದು, ಈಗಾಗಲೇ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Advertisement

“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ನಿರ್ದೇಶಕ ಕುಮಾರ್‌ ಅವರೇ ಈ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆರವ್‌ ರಿಶಿಕ್‌ ಚಿತ್ರಕ್ಕೆ ಸಂಗೀತ ನೀಡಿದ್ದು, ಕುಮಾರ್‌ ಬರೆದ ಹಾಡಿಗೆ ವಿಶೇಷ ಧ್ವನಿ ಬೇಕು ಎಂಬ ಕಾರಣಕ್ಕೆ, ನವೀನ್‌ ಸಜ್ಜು ಅವರಿಂದ ಹಾಡು ಹಾಡಿಸಲಾಗಿದೆ. ಈಗಾಗಲೇ ನವೀನ್‌ ಸಜ್ಜು ಅವರು ಹಾಡಿದ “ಎಣ್ಣೆ ನಮ್ದು ಊಟ ನಿಮ್ದು’ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತು. ನವೀನ್‌ ಸಜ್ಜು ಅವರೇ ಈ ಹಾಡನ್ನೂ ಹಾಡಬೇಕು ಎಂಬ ಕಾರಣದಿಂದ ನಿರ್ದೇಶಕರು ಅವರಿಂದ ಹಾಡನ್ನು ಹಾಡಿದ್ದಾರೆ.

ಎಂ ಸಿರಿ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಡಾ.ಮಂಜುನಾಥ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ’ ಶೂಟಿಂಗ್‌ ಮುಗಿಸಿದ್ದು, ಇದೀಗ  ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಆನಂದ್‌ ಆಡಿಯೋ ಸಂಸ್ಥೆ ಚಿತ್ರದ ಲಿರಿಕಲ್‌ ಆಡಿಯೋ ಬಿಡುಗಡೆ ಮಾಡಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲವ್‌ ಪ್ಯಾಥೋ ಸಾಂಗ್‌ ಇದಾಗಿದ್ದು, ಟಪ್ಪಾಂಗುಚ್ಚಿ ಶೈಲಿಯಲ್ಲೂ ಹಾಡು ಮೂಡಿ ಬಂದಿದೆ. ಯುವ ನಿರ್ದೇಶಕ ಕುಮಾರ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರದಲ್ಲಿ “ಕಿರಿಕ್‌ ಪಾರ್ಟಿ’ ಚಂದನ್‌ ಆಚಾರ್‌,

ಯುವ ನಾಯಕಿ ಸಂಜನಾ ಆನಂದ್‌, ತಬಲಾ ನಾಣಿ, ಸುಚೇಂದ್ರ ಪ್ರಸಾದ್‌ ಡಾ.ಮಂಜುನಾಥ್‌, ಮೈಕೋ ನಾಗರಾಜ್‌, ರಾಕ್‌’ಲೈನ್‌ ಸುಧಾಕರ್‌ ನಟಿಸಿದ್ದಾರೆ. ಸದ್ಯಕ್ಕೆ “ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು’ ಹಾಡು ಒಳ್ಳೆಯ ಮೆಚ್ಚುಗೆ ಪಡೆದಿರುವುದರಿಂದ ಸಂಕ್ರಾಂತಿ ಹಬ್ಬದ ದಿನದಂದ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಈ ಚಿತ್ರಕ್ಕೆ ಸುಜಯ್‌ ಕುಮಾರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.  ಶಿವಸೇನ ಅವರು ಛಾಯಾಗ್ರಹಣ ಮಾಡಿದ್ದಾರೆ. ವೆಂಕಿ ಅವರ ಸಂಕಲನವಿದೆ. ಲಕ್ಷ್ಮಿತ್‌ ವಿನಯ್‌ ನೃತ್ಯ ನಿರ್ದೇಶನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next