ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಘಾಟಿ ಆರಂಭದ ಭಾಗವಾದ ಮಠದ ಮಜಲು ರಸ್ತೆ ಬದಿಯ ಸರಕಾರಿ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿಯು ಚಾರ್ಮಾಡಿ- ಕನಪಾಡಿ ರಕ್ಷಿತಾರಣ್ಯದತ್ತ ಗುರುವಾರ ರಾತ್ರಿ ಹಬ್ಬಿದ್ದು, ಶುಕ್ರವಾರದ ವರೆಗೂ ಉರಿದಿದೆ.
ರಸ್ತೆ ಬದಿ ಹಾಗೂ ಅರಣ್ಯದ ಸುಮಾರು 2 ಎಕರೆಗಿಂತ ಅಧಿಕ ಸ್ಥಳ ಹಾನಿಗೀಡಾಗಿದೆ. ಡಿಆರ್ಎಫ್ಒ ರವೀಂದ್ರ ಅಂಕಲಗಿ, ಸಿಬಂದಿ ರಾಜಾರಾಮ್ ತತ್ಕ್ಷಣ ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರು ಸಹಕರಿಸಿದ್ದಾರೆ. ಶುಕ್ರವಾರ ಮುಂಜಾನೆ 4 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಶಿಬಾಜೆ- ಶಿಶಿಲದಲ್ಲಿ ಆರದ ಜ್ವಾಲೆ
ಶಿಬಾಜೆ ಮೀಸಲು ಅರಣ್ಯದಲ್ಲಿ ಮತ್ತೆ ಬೆಂಕಿ ಆವರಿಸಿದೆ. ಶಿಶಿಲದಲ್ಲಿ ಮೀಯಾರು ಸಮೀಪ ಹೊತ್ತಿಕೊಂಡ ಬೆಂಕಿ ಚಿಕ್ಕಮಗಳೂರು- ಬಾಳೂರು ಅರಣ್ಯಕ್ಕೆ ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಶುಕ್ರವಾರ ಅರಸಿನಮಕ್ಕಿ ಮತ್ತು ಕೊಕ್ಕಡ ದಾರಿಯಲ್ಲಿ ಹೊಸದಾಗಿ ಕಾಳಿYಚ್ಚು ಕಂಡುಬಂದಿದ್ದು, ಬೆಳ್ತಂಗಡಿ ಅಗ್ನಿಶಾಮಕದಳ ಅರಸಿನಮಕ್ಕಿಯಲ್ಲೇ ಕಾರ್ಯಾಚರಿಸುತ್ತಿದೆ. ಸುಮಾರು 500 ಹೆಕ್ಟೇರ್ ಅರಣ್ಯ ಮತ್ತೆ ಆಹುತಿಯಾಗಿದೆ.
ಬೆಟ್ಟದಲ್ಲಿ ದಟ್ಟ ಹೊಗೆ
ಕುದುರೆಮುಖ ರಾಷ್ಟ್ರೀಯ ಉದ್ಯಾನದಂಚಿನ ಶಿರ್ಲಾಲು ಸಮೀಪದ ನರ್ತಿಕಲ್ಲು, ನೆಲ್ಯಾಲು ಹಾಗೂ ಸವಣಾಲು ಗ್ರಾಮಕ್ಕೆ ಹೊಂದಿಕೊಂಡಂತೆ ಸುಮಾರು ಸಾವಿರ ಎಕ್ರೆ ಪ್ರದೇಶದ ಬೆಟ್ಟದಲ್ಲಿ ಬೆಂಕಿ ಆವರಿಸಿದ್ದು, ತುಂಬ ದಟ್ಟ ಹೊಗೆ ಆವರಿಸಿದೆ. ವಾರಗಳಿಂದ ಈ ಬೆಟ್ಟದಲ್ಲಿ ಬೆಂಕಿ ಉರಿಯುತ್ತಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.
Related Articles
ವಿಧ್ವಂಸಕ ಕೃತ್ಯ?
ಅರಣ್ಯದೊಳಗೆ ಹೊಕ್ಕು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚುತ್ತಿರುವ ದಟ್ಟ ಅನುಮಾನ ಕಾಡಿದೆ. ಬೆಂಕಿ ನಂದಿಸಲು ಹೋಗುವ ಮಂದಿಗೆ ಕಾಡಿನಲ್ಲಿ ಗಿಡ – ಪೊದೆ ಕಡಿದು ಹಾಕಿ ಯಾರೋ ದಾರಿ ಮಾಡಿ ತೆರಳಿರುವ ಕುರುಹುಗಳು ಲಭಿಸಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಳಿYಚ್ಚು ಆವರಿಸಿದರೂ ಅರಣ್ಯ ಇಲಾಖೆ ಸರಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ. ಹೆಲಿಕಾಪ್ಟರ್ ಕಾರ್ಯಾಚರಣೆ ಕುರಿತು ಆಗ್ರಹಿಸುತ್ತಿಲ್ಲ. ಅರಣ್ಯದೊಳಗೆ ಪ್ರಾಣಿಗಳ ಚಲನವಲನ ಪತ್ತೆ ಹಚ್ಚಲು ಅಳವಡಿಸುವ ಸಿಸಿ ಕೆಮರಾ ಎಲ್ಲೆಡೆ ಹೆಚ್ಚಿಸಬೇಕಿದೆ. ಅರಣ್ಯದೊಳಕ್ಕೆ ಮಾನವನ ಪ್ರವೇಶವಾಗುತ್ತಿರುವ ಕುರಿತು ಗಂಭೀರ ಚಿಂತನೆ ನಡೆಸದೆ ಹೋದಲ್ಲಿ ಅರಣ್ಯ ಸಂಪೂರ್ಣ ನಾಶವಾಗಲಿದೆ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ. ಕಾಳಿYಚ್ಚಿನ ಪರಿಣಾಮ ಬೆಳ್ತಂಗಡಿ ಆಸುಪಾಸು ಬಿಸಿ ಗಾಳಿ ಹೆಚ್ಚಾಗಿದೆ.