ವಿಜಯಪುರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಇಡಿ ಇಲಾಖೆ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ವಿಷಯ ನನಗೆ ಗೊತ್ತಿಲ್ಲ. ಮಾಡಿದವನ ಪಾಪ ಆಡಿದವನ ಬಾಯಲ್ಲಿ ಎಂಬಂತೆ ನನ್ನ ಬಾಯಲ್ಲಿ ಏಕೆ ಹೇಳಿಸುತ್ತೀರಿ, ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಹಾಗೂ ಕಾನೂನುಗಳಿವೆ. ಯಾರು ದೇಶವನ್ನು ಹಾಳು ಮಾಡಿದ್ದಾರೆ, ದೇಶವನ್ನು ಲೂಟಿ ಮಾಡಿದ್ದಾರೋ ಅಂಥವರು ಶಿಕ್ಷೆಯನ್ನು ಅನುಭವಿಸಲೇಬೇಕು ಎಂದರು.
ಡಿ.ಕೆ.ಶಿವಕುಮಾರ ಅಥವಾ ಇನ್ನೊಬ್ಬರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಏನು ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
ಇದನ್ನೂ ಓದಿ :ಬಿಜೆಪಿಗೆ ಡಿಕೆಶಿ ಅವರಂಥ ಕಳ್ಳರ ಅವಶ್ಯಕತೆ ಇಲ್ಲ: ಯತ್ನಾಳ್
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನಿಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಸಂಚು ರೂಪಿಸಲಾಯಿತೆ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ನನಗೆ ನಮ್ಮ ತಾಯಿ ನಮ್ಮ ಮನೆ ದೇವರು ಚೌಡೇಶ್ವರಿ ಮೇಲೆ ನಂಬಿಕೆ ಇದೆ. ನಾನೇನು ತಪ್ಪು ಮಾಡಿಲ್ಲ ಎಂದು ತಾಯಿಗೆ ಅನ್ನಿಸಿದರೆ ನನ್ನನ್ನ ಹೊರ ತನ್ನಿ, ಇಲ್ಲವೆಂದರೆ ನನಗೆ ಶಿಕ್ಷೆ ಕೊಡಲಿ ಎಂದು ತಾಯಿಯ ಮೇಲೆ ಭಾರ ಹಾಕಿದ್ದೇನೆ ಎಂದರು.