Advertisement

ದಳಪತಿ ಮುಂದೆ ವರ್ಕ್‌ಔಟ್‌ ಆಗದ ಪ್ರಧಾನಿ ಮೋದಿ ಪ್ರಚಾರ

04:19 PM May 14, 2023 | Team Udayavani |

ಚನ್ನಪಟ್ಟಣ: ಜಿದ್ದಾಜಿದ್ದಿನ ಸಮರದ ನಡುವೆ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹದಿನೈದು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಕುಮಾರಸ್ವಾಮಿ ಅವರ ಗೆಲುವಿನ ಬಗ್ಗೆ ಹಲವಾರು ವ್ಯಾಖ್ಯಾನಗಳು ನಡೆಯುತ್ತಿರುವಂತೆ, ಸಾಕಷ್ಟು ಪೈಪೋಟಿ ನಡುವೆಯೂ ಸತತ ಎರಡನೇ ಬಾರಿಗೆ ಪರಾಜಿತರಾದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರ ಸೋಲಿನ ಕುರಿತಂತೆಯೂ ತಾಲೂಕಿನಲ್ಲಿ ಅವರವರ ಭಾವಕ್ಕೆ ತಕ್ಕಂತೆ ವಿಶ್ಲೇಷಣೆ ಸಾಗಿದೆ.

Advertisement

ಎಚ್ಡಿಕೆ ಗೆಲುವಿಗೇನು ಪೂರಕ: ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸ್ಥಳೀಯ ಜೆಡಿಎಸ್‌ ಮುಖಂಡರೊಡಗೂಡಿ ಕಳೆದ ಬಾರಿಗಿಂತ ಹೆಚ್ಚು ಬಾರಿ ಕುಟುಂಬದ ಸದಸ್ಯರು ಕ್ಷೇತ್ರದಲ್ಲಿ ಪ್ರಚಾರ ಮಾಡಿರುವುದು ವರ್ಕ್‌ ಔಟ್‌ ಆಗಿದೆ ಎಂಬ ಚರ್ಚೆಗಳು ತಾಲೂಕಿನಲ್ಲಿ ಕೇಳಿಬಂದಿವೆ. ಕುಮಾರ ಸ್ವಾಮಿಅವರು ಮಾಜಿ ಮುಖ್ಯಮಂತ್ರಿಗಳಾಗಿ ಕ್ಷೇತ್ರದಲ್ಲಿ 2018 ರಲ್ಲಿ ಚುನಾವಣೆ ಎದುರಿಸಿದ ವೇಳೆ ನಾಮಪತ್ರ ಸಲ್ಲಿಕೆ ಹಾಗೂ ಒಂದು ದಿನ ಜಿ.ಪಂ. ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ದು ಬಿಟ್ಟರೆ ಅಂದು ಕುಮಾರಸ್ವಾಮಿ  ಕುಟುಂಬದ ಸದಸ್ಯರು ಸೇರಿ ಯಾರೂ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು ಸಹ ಅಂದು ಪ್ರಚಾರಕ್ಕೆ ಇಳಿದಿರಲಿಲ್ಲ. ಆದರೂ ಕುಮಾರಸ್ವಾಮಿ ಅವರು ಯೋಗೇಶ್ವರ್‌ ಅವರ ವಿರುದ್ಧ 21 ಸಾವಿರ ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಚುನಾವಣಾ ಪೂರ್ವದಲ್ಲಿ ಜೆಡಿಎಸ್‌ನ ನೂರಾರು ಪ್ರಭಾವಿ ಮುಖಂಡರು ಪಕ್ಷಾಂತರ ಮಾಡಿ ಯೋಗೇಶ್ವರ ಅವರ ಸೈನ್ಯ ಬೆಳೆದಂತೆಲ್ಲಾ ಕುಮಾರಸ್ವಾಮಿ ಅವರ ಕುಟುಂಬದವರು ತಾಲೂಕಿನತ್ತ ಮುಖ ಮಾಡಿದರು ಇದು ಕೂಡ ಎಚ್ಡಿಕೆಗೆ ಪ್ಲಸ್‌ ಆಯಿತು ಎಂಬುದು ಪ್ರಮುಖ ವಿಶ್ಲೇಷಣೆ.

ಇದಕ್ಕೆ ಬದಲಾಗಿ ತಮ್ಮ ನಾಯಕತ್ವ ಮೆಚ್ಚಿ ಬಂದ ಅನೇಕ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಿದ್ದ ಸ್ವಯಂಕೃತ ತಪ್ಪಿನಿಂದ ಸೈನಿಕ ಸೋಲಿನೆಡೆಗೆ ಸಾಗಿದರು ಎಂಬ ಚರ್ಚೆಗಳು ಒಂದೆಡೆಯಾದರೆ, ಮತ್ತೂಂದೆಡೆ ತಾಲೂಕಿನ ಜೆಡಿಎಸ್‌ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿ ಚುನಾವಣಾ ಕಣದಲ್ಲಿ ಹಗಲಿರುಳು ಶ್ರಮಿಸಿದ್ದರ ಫ‌ಲ ಎಂಬ ಮಾತುಗಳಿವೆ.

ವರ್ಕ್‌ಔಟ್‌ ಆಗದ ಮೋದಿ ಪ್ರಚಾರ!: ಪ್ರಧಾನ ಮಂತ್ರಿ ಮೋದಿ ಬಿಜೆಪಿಯ ಒಬ್ಬ ಪ್ರಭಾವಶಾಲಿ ಅಗ್ರಗಣ್ಯ ನಾಯಕರು. ಇವರು ಯೋಗೇಶ್ವರ್‌ ಅವರ ಪರ ಪ್ರಚಾರ ಮಾಡಲು ಆಗಮಿಸಿದ್ದು ಮೋದಿ ಅವರ ಪ್ರಚಾರದಿಂದ ಯೋಗೇಶ್ವರ್‌ ಅವರ ಮತ ಬ್ಯಾಂಕ್‌ ಹೆಚ್ಚಾಗುವುದೇ ನಿರೀಕ್ಷೆ ಬಿಜೆಪಿ ಪಾಳಯದಲ್ಲಿ ಅಧಿಕವಾಗಿತ್ತು. ಒಂದು ಹಂತದಲ್ಲಿ ಮೋದಿ ಪ್ರಚಾರ ಮಾಡಿದ ಬಳಿಕ ತಾಲೂಕಿನಲ್ಲಿ 15 ಸಾವಿರಕ್ಕೂ ಹೆಚ್ಚು ಯುವ ಮತ ದಾರರು ಯೋಗೇಶ್ವರ್‌ ಅವರಿಗೆ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಮೋದಿ ಅವರ ಪ್ರವಾಸದಿಂದ ಯೋಗೇಶ್ವರ್‌ ಅವರಿಗೆ ವ್ಯಕ್ತಿಗತವಾಗಿ ಬರುತ್ತಿದ್ದ ಮುಸ್ಲಿಂ ಮತಗಳು ಸಹ ದೂರವಾದವು ಎಂಬ ಚರ್ಚೆಗಳು ಕೇಳಿಬಂದಿವೆ.

ಅಲ್ಲದೆ ಮೋದಿ ಅವರ ಪ್ರವಾಸದ ಬೆನ್ನಲ್ಲೇ ಎಂಪಿ ಚುನಾವಣೆಯ ಮುಂದಾಲೋಚನೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸಹ ಸೈಲೆಂಟ್‌ ಮಾಡಿಸಿದ ಡಿಕೆಶಿ ಸಹೋದರರ ನಡೆ ಕಾಂಗ್ರೆಸ್‌ ಅಭ್ಯರ್ಥಿ 15 ಸಾವಿರ ದಾಟುತ್ತಿದ್ದಂತೆ ಯೋಗೇಶ್ವರ್‌ ಅವರಿಗೆ ಆಗುತ್ತಿದ್ದ ಲಾಭವನ್ನು ಸಹ ದೂರ ಮಾಡಿದೆ ಎಂಬ ಚರ್ಚೆಗಳು ತಾಲೂಕಿನಲ್ಲಿ ಕೇಳಿಬಂದಿವೆ.

Advertisement

ಮುಸ್ಲಿಂ ವಾರ್ಡ್‌ನತ್ತ ಬಿಜೆಪಿ ಚಿತ್ರ ಹರಿಸದಿದ್ದು, ಅನೇಕ ಮುಖಂಡರು ಜೆಡಿಎಸ್‌ಗೆ ದುಡಿಯಲು ಸಿದ್ಧರಾದಾದದ್ದು, ಇನ್ನು ಕಾಂಗ್ರೆಸ್‌ ‘ಬಿ’ ಫಾರಂ ಕೈ ತಪ್ಪಿ ಅನಾಯಾಸವಾಗಿ ಜೆಡಿಎಸ್‌ ತೆಕ್ಕೆಗೆ ಬಂದ ಉದ್ಯಮಿ ಪಿ. ಪ್ರಸನ್ನಗೌಡ, ಹಾಗೆಯೇ ಚುನಾವಣೆ ದಿನ ಕುಮಾರಸ್ವಾಮಿ ಅವರಿಗೆ ತಾರಾಬಲ ಇದ್ದದ್ದು. ಸಿಪಿವೈ ಚುನಾವಣಾ ಕ್ಯಾಂಪೇನ್‌ಗೆ ದರ್ಶನ್‌ ಗೈರಾದದ್ದು ಇವೆಲ್ಲವೂ ಎಚ್ಡಿಕೆ ಗೆಲುವಿಗೆ ಪೂರಕವಾದವು ಎಂಬ ವಿಶ್ಲೇಷಣೆ ಕೇಳಿಬರುತ್ತಿವೆ.

ಸಿಪಿವೈ ಸೋಲಿಗೆ ಸುತ್ತಿಕೊಂಡ ಅಂಶಗಳು: 2018 ರಂದು ಸೋತ ಬಳಿಕ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಕ್ಷುಲ್ಲಕ ಕಾರಣಕ್ಕಾಗಿ ಹಲವರನ್ನು ದೂಷಿಸಿ ದೊಡ್ಡವರೇ ತಮ್ಮ ಕ್ಷೇತ್ರಕ್ಕೆ ಬರುವಂತೆ ಮಾಡಿಕೊಂಡು ಅಪಪ್ರಚಾರದಿಂದ ಸೋಲು ಕಂಡು ಬೆಂಗಳೂರು ಸೇರಿದ್ದರು. ಪ್ರತೀ ತಿಂಗಳು ರೈತರಿಗೆ ಹತ್ತು ಸಾವಿರದಿಂದ ಲಕ್ಷ ರೂ. ಆದಾಯ ಬರುವಂತೆ ಅಂತರ್ಜಲ ವೃದ್ಧಿ ಮಾಡಿಕೊಟ್ಟ ತಪ್ಪಿಗೆ ತಮ್ಮನ್ನು ಸೋಲಿಸಿದರೆಂದು ಮುನಿಸುಕೊಂಡು, ಬೆಂಗಳೂರು ರಾಜಕಾರಣಕ್ಕೆ ಮೀಸಲಾದರು. ಬಳಿಕ ರಾಜ್ಯ ರಾಜಕಾರಣದಲ್ಲಿ ಬಿಸಿಯಾದರು.

ಬಿಜೆಪಿ ಸರ್ಕಾರ ರಚಿಸಲು ಹೆಗಲು ಕೊಟ್ಟರು. ಹೇಗಾದರೂ ಮಾಡಿ ವಿಧಾನಸೌಧದ ಮೆಟ್ಟಿಲು ಹತ್ತಬೇಕೆಂದು ಹಠಕ್ಕೆ ಬಿದ್ದು ಹುಣಸೂರಿನತ್ತ ಹೆಜ್ಜೆ ಹಾಕಿದರು. ಖಾಸಗಿ ಬಸ್‌ ನಿಲ್ದಾಣ ಸೇರಿದಂತೆ, ಮಹದೇಶ್ವರ ದೇವಸ್ಥಾನ ಮತ್ತಿತರ ಕಾಮಗಾರಿಗಳು ನೆನಗುದಿಗೆ ಬಿದ್ದ ಅವುಗಳು ತಿರುಗಿ ನೋಡದ ಆರೋಪಗಳು, ಕಾರ್ಯಕರ್ತರಿಗೆ ಅನುದಾನ ನೀಡದ ಬಗ್ಗೆ ಟ್ರಾನ್ಸ್‌ಫ‌ರ್‌’ ವಿಚಾರದಲ್ಲಿ ಸಹಕಾರ ಮಾಡದ ಆರೋಪಗಳು ಇವೆಲ್ಲವನ್ನೂ ಸಮರ್ಥವಾಗಿ ಬಿಂಬಿಸಿ ತಮ್ಮೆಡೆಗೆ ಪ್ಲಸ್‌ ಪಾಯಿಂಟ್‌ ಮಾಡಿಕೊಳ್ಳುವ ಬದಲು ಕುಮಾರಸ್ವಾಮಿ ಅವರನ್ನು ಕೇವಲ ವಯಕ್ತಿಕವಾಗಿ ಟೀಕೆ ಮಾಡುತ್ತಾ ಸಿಪಿವೈ ಕಾಲಕಳೆದರು ಎಂಬ ಆರೋಪ ಸ್ವಪಕ್ಷೀಯರಿಂದಲೇ ಕೇಳಿಬರುತ್ತಿವೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದಿವೆ. ಅಂತೆಯೇ ಜೆಡಿಎಸ್‌ ಕಾರ್ಯಕರ್ತರು, ಮುಖಂಡರು, ಹಿರಿಯ- ಕಿರಿಯ ನಾಯಕರು ಎಲ್ಲರೂ ಒಗ್ಗೂಡಿ ಮಾಡಿದ ಪ್ರಚಾರ ಹಾಗೂ ಹಾಕಿದ ಪರಿಶ್ರಮ ಕುಮಾರಸ್ವಾಮಿ ಅವರ ಗೆಲುವಿಗೆ ಪೂರಕವಾಗಿ ಪರಿಣಮಿಸಿತು. –ಸಿ.ಅಜಯ್‌ ಕುಮಾರ್‌, ಚನ್ನಪಟ್ಟಣ ನಗರ ಜೆಡಿಎಸ್‌ ಅಧ್ಯಕ್ಷ

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next