ಮೂಡಲಗಿ: ಮಕ್ಕಳ ಭವಿಷ್ಯದಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮೊದಲಿನ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯನ್ನು ತರಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲಿಸಬೇಕು ಎನ್ನುವ ಉದ್ದೇಶದಿಂದ ಪ್ರಾಯೋಗಿಕವಾಗಿ ಐದು ಸ್ಮಾರ್ಟ್ ಕ್ಲಾಸ್ಗಳನ್ನು ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಪಟ್ಟಣದ ಕೃಷ್ಣಪ್ಪ ಹ.ಸೋನವಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಬೇಕಾದ ಅನಿರ್ವಾಯತೆ ಇದೆ. ಶಿಕ್ಷಣದಿಂದ ಮಾತ್ರ ನಮ್ಮ ಮಕ್ಕಳ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ ಎಂದರು.
ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿಯಾಗುತ್ತದೆ. ಆದರಿಂದ ರಾಜ್ಯಸಭಾ ಸದಸ್ಯರ ಅನುದಾನದಲ್ಲಿ ಮೂಡಲಗಿ ಶಿಕ್ಷಣ ವಲಯದ ಕಲ್ಲೋಳಿ, ತುಕ್ಕಾನಟ್ಟಿ, ರಾಜಾಪೂರ, ಮೂಡಲಗಿಯಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾಯೋಗಿಕವಾಗಿ ನೀಡಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಡಲ್ಲಿ ಮುಂದಿನ ದಿನಮಾನಗಳಲ್ಲಿ ಎಲ್ಲ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಗಳನ್ನು ಪ್ರಾರಂಭ ಮಾಡುವಂತ ಯೋಜನೆಯನ್ನು ರೂಪಿಸಲಾಗದೆ ಎಂದರು.
ಕಲ್ಲೋಳಿ, ತುಕ್ಕಾನಟ್ಟಿ, ರಾಜಾಪೂರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಡೆಸ್ಕ್ ಇಲ್ಲದೇ ಇರುವುದರಿಂದ ಶಾಲೆಗಳಿಗೆ ಈಗಾಗಲೇ ಒಂದು ಸಾವಿರ ಡೆಸ್ಕ್ಗಳನ್ನು ನೀಡಲಾಗಿದ್ದು, ಸರ್ಕಾರಿ ಶಾಲೆಗಳಿಗೆ ಸದ್ಯದರಲ್ಲೇ 40 ಕಂಪ್ಯೂಟರ್ಗಳನ್ನು ನೀಡಲಾಗುತ್ತಿದ್ದು, ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಶಿಕ್ಷಣ ಕಲಿತರೇ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನವನ್ನು ಉದ್ದೇಶವಿದ್ದು, ವಿದ್ಯಾರ್ಥಿಗಳು ಇವುಗಳ ಉಪಯೋಗವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Related Articles
ನಂತರ ಮಕ್ಕಳೊಂದಿಗೆ ಮಾತನಾಡಿದ ಅವರು, ಮೊದಲಿನ ಶಿಕ್ಷಣದ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನದಿಂದ ಮಕ್ಕಳ ಕಲಿಕೆಯಲ್ಲಿ ಆಗುವ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ತಹಶೀಲ್ದಾರ್ ಡಿ.ಜಿ.ಮಹಾತ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮಣ್ಣಿಕೇರಿ, ತಾಪಂ ಇಒ ಎಫ್. ಜಿ. ಚಿನ್ನನವರ, ಸಿಡಿಪಿ ಯಲ್ಲಪ್ಪ ಗದಾಡಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಅಜೀಜ ಡಾಂಗೆ, ಪ್ರಕಾಶ ಮಾದರ, ಶಾಲೆಯ ಮುಖ್ಯ ಶಿಕ್ಷಕ ಎಂ.ಎಂ. ದಬಾಡಿ ಮತ್ತಿತರು ಇದ್ದರು.