Advertisement

ಚಾಮರಾಜನಗರ: ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

09:13 PM Aug 08, 2022 | Team Udayavani |

ಚಾಮರಾಜನಗರ: ಜನರು ಮಾಧ್ಯಮಗಳನ್ನು, ಪತ್ರಕರ್ತರನ್ನು ಗಮನಿಸುತ್ತಿರುತ್ತಾರೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಹಾಗಾಗಿ ಪತ್ರಕರ್ತರು ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಿವಿಮಾತು ಹೇಳಿದರು.

Advertisement

ಸೋಮವಾರ, ನಗರದ ವರ್ತಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಮ್ಮಲ್ಲೇ ಮೊದಲು ಎಂಬ ಧಾವಂತದಲ್ಲಿ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲಿಸದೇ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಳ್ಳಬೇಕು. ಸತ್ಯಕ್ಕೆ ಚ್ಯುತಿ ಬಾರದಂತೆ ನೈಜ ಸುದ್ದಿಗಳನ್ನು ಪ್ರಕಟಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು ಪ್ರಸರಣವಾಗುತ್ತಿವೆ. ಜನರು ಸತ್ಯಕ್ಕಾಗಿ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಪತ್ರಕರ್ತರು ತಮ್ಮನ್ನು ತಾವೇ ವಿಮರ್ಶೆಗೆ ಒಡ್ಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ದೇಹದ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದಂತೆ ಸಮಾಜದ ಖಾಯಿಲೆಗೆ ಪತ್ರಕರ್ತ ಚಿಕಿತ್ಸಕನಾಗಿ ಕೆಲಸ ಮಾಡಬೇಕಿದೆ. ಪತ್ರಕರ್ತರು ತಮ್ಮ ನಡೆ, ನುಡಿಯಲ್ಲಿ ಶುದ್ಧವಾಗಿರಬೇಕು. ಈ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಪತ್ರಕರ್ತರಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಚಿಕತ್ಸೆಯನ್ನು ಕೊಡುವಂತಹ ಕೆಲಸ ಪತ್ರಕರ್ತರಿಂದ ಆಗಬೇಕು, ಸತ್ಯದ ಮಾರ್ಗದಲ್ಲಿ ಪತ್ರಕರ್ತರು ಸಾಗಬೇಕು ಎಂದು ಸಲಹೆ ನೀಡಿದರು.

ಎಲ್ಲರೂ ಪತ್ರಕರ್ತರಾಗಲು ಸಾಧ್ಯವಿಲ್ಲ. ಪತ್ರಕರ್ತರ ಮೇಲೆ ಸಮಾಜ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದು, ನಮ್ಮ ಧ್ವನಿಯಾಗಿ ಕೆಲಸವನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ. ನೊಂದವರ, ದೀನದಲಿತರ, ಸಮಾಜಮುಖಿಯಾಗಿ, ಮಾನವೀಯ ದೃಷ್ಟಿಯಿಂದ ಕೆಲಸಮಾಡಲು ಯಾರಿಗೆ ಸಾಧ್ಯವಿಲ್ಲವೋ ಅವರಿಗೆ ಉತ್ತಮ ಪತ್ರಕರ್ತನಾಗಲು ಸಾಧ್ಯವಿಲ್ಲ. ಸುದ್ದಿ ಮಾಡುವ ಧಾವಂತದಲ್ಲಿ ನಮ್ಮ ವಿವೇಚನೆಯನ್ನು, ತಾಳ್ಮೆಯನ್ನು ಕಳೆದುಕೊಳ್ಳಬಾರದು, ವಿಶ್ವಾಸಾರ್ಹತೆ ಬಹಳ ಮುಖ್ಯವಾಗಬೇಕು. ನ್ಯಾಯಾಧೀಶರು ಕೂಡ ಮಾಧ್ಯಮದ ಎದುರು ನ್ಯಾಯಕ್ಕಾಗಿ ಬಂದಿದ್ದ ನಿದರ್ಶನವೂ ಸಹ ಇದೆ. ಪತ್ರಕರ್ತ ತನ್ನ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರೆ ಸಮಾಜ ನೆಮ್ಮದಿಯಾಗಿ ಇರುತ್ತದೆ ಎಂದರು.

Advertisement

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮಹತ್ತರವಾದುದು. ಪತ್ರಕರ್ತರು ಅಧಿಕಾರಿಶಾಹಿಯ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತವು ಅಗತ್ಯ ಸಹಕಾರವನ್ನು ಮಾಧ್ಯಮಗಳಿಗೆ ನೀಡಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಮಾತನಾಡಿ, ಸಂವಿಧಾನದ 4ನೇ ಅಂಗವಾದ ಪತ್ರಿಕಾರಂಗ ಸದಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಪತ್ರಕರ್ತರು ಇಲ್ಲದೆ ಹೋದರೆ ಪ್ರಜಾಪ್ರಭುತ್ವಕ್ಕೆ ಮನ್ನಣೆ ದೊರೆಯುತ್ತಿರಲಿಲ್ಲ. ಮುಂದೆಯೂ ಮಾಧ್ಯಮಗಳು ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ಸದಾ ಎಚ್ಚರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಲು ಪತ್ರಿಕೆಗಳು ಸಹಕಾರಿಯಾಗಿದ್ದವು. ಇಂದಿನ ಕಾಲಘಟ್ಟದಲ್ಲಿ ಬಹುಬೇಗ ಸುದ್ದಿಯನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಸಾರ್ವಜನಿಕವಾಗಿ ಉತ್ತಮ ಆಡಳಿತ ನಿರ್ವಹಣೆಗೆ ಮಾಧ್ಯಮ ಸಹಕಾರಿಯಾಗಿದೆ. ಕೋವಿಡ್ ಸಂದರ್ಭದಲ್ಲೂ ಮಾಧ್ಯಮ ಕಾರ್ಯನಿರ್ವಹಿಸಿದೆ ಎಂದು ಪ್ರಶಂಸಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಡಿ.ವಿ.ಗುಂಡಪ್ಪನವರು ಕಟ್ಟಿದ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 90 ವಷರ್ಗಳ ಇತಿಹಾಸವಿದೆ. 107 ಜನ ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟರು. ಅವರ ಕುಟುಂಬಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಸರ್ಕಾರದಿಂದ ನೆರವು ದೊರಕಿಸಿದೆ. ಪತ್ರಕರ್ತರಿಗೆ ಮಾಸಾಶನ, ಆಯುಷ್ಮಾನ್ ಕಾರ್ಡ್ ವಿತರಣೆ ಹಾಗೂ ಬಸ್ ಪಾಸ್ ಸಮಸ್ಯೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದರು.

ಜಿಲ್ಲಾ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಎಚ್.ಎಸ್. ಚಂದ್ರಶೇಖರ್, ಎಂ. ಲಿಂಗಪ್ಪ, ಗೂಳೀಪುರ ನಂದೀಶ, ಕೆ. ಗೋವಿಂದ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಆಶಾ ನಟರಾಜು, ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್, ರಾಷ್ಟ್ರೀಯ ಮಂಡಳಿ ಸದಸ್ಯ ಲಕ್ಕೂರು ಪ್ರಸಾದ್, ಪ್ರಶಸ್ತಿಗಳ ಸ್ಥಾಪಕರಾದ ಆರ್. ಪುಟ್ಟಮಲ್ಲಪ್ಪ, ಎಚ್.ಎಸ್. ಗಂಗಾಧರ್, ಹೊಸೂರು ಜಗದೀಶ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next