Advertisement

ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರ ಬೆಳೆಯುವಲ್ಲಿ ಚಾಮರಾಜನಗರ ಜಿಲ್ಲೆಯ ಕೊಡುಗೆ ಅಪಾರ

09:06 PM Nov 29, 2023 | Team Udayavani |

ಚಾಮರಾಜನಗರ: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ ಮಹದೇವ ಶಂಕನಪುರ ಹೇಳಿದರು.

Advertisement

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದಿಂದ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆಗೆ ತನ್ನದೇ ಆದ ಅಸ್ಮಿತೆಯಿದೆ. ಅರಣ್ಯ ಪ್ರದೇಶ ಹಾಗೂ ವನ್ಯಜೀವಿಗಳನ್ನು ಹೊಂದಿರುವ ನಮ್ಮ ಜಿಲ್ಲೆ ಭಾರತದದಲ್ಲಿ ಹೆಚ್ಚು ಅರಣ್ಯ ಪ್ರದೇಶ ಉಳ್ಳ ಜಿಲ್ಲೆಗಳಲ್ಲಿ ಒಂದಾಗಿದೆ. ಕಪ್ಪುಶಿಲೆ, ರೇಷ್ಮೆ, ಶ್ರೀಗಂಧ, ಜಾನಪದ ಮಹಾಕಾವ್ಯಗಳಿಂದ ಗುರುತಿಸಿಕೊಳ್ಳುತ್ತದೆ ಎಂದರು.

ನಮ್ಮ ಜಿಲ್ಲೆಯ ಮಲೆ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ನಮ್ಮ ಜಿಲ್ಲೆಯ ಹೆಮ್ಮೆಯಾಗಿವೆ. ಮಲೆ ಮಹದೇಶ್ವರ ಕಾವ್ಯ ಫಿನ್ಲೆಂಡಿನ ಕಲೇವಾಲ ಬಿಟ್ಟರೆ ಜಗತ್ತಿನ ಎರಡನೇ ಸುದೀರ್ಘ ಮಹಾಕಾವ್ಯಗಳಾಗಿದೆ. ಇದನ್ನು ಕೊಡುಗೆಯಾಗಿ ಕೊಟ್ಟವರು ಅನಕ್ಷರಸ್ಥರೆನಿಸಿದ ತಂಬೂರಿ ಮತ್ತು ಕಂಸಾಳೆ ಗಾಯಕರು ಎಂದು ತಿಳಿಸಿದರು.

ವರನಟ ಡಾ. ರಾಜ್‌ಕುಮಾರ್ ಅವರು ನಮ್ಮ ಜಿಲ್ಲೆಯ ಕಲಾವಿದರು. ಅವರು ಮತ್ತು ಅವರ ಪುತ್ರರಿಂದ ನಮ್ಮ ಜಿಲ್ಲೆಗೆ ಕೀರ್ತಿ ಹೆಮ್ಮೆ ಬಂದಿದೆ. ಜಿಲ್ಲೆಯ ಹಲವಾರು ಲೇಖಕರು, ವಿದ್ವಾಂಸರು ಸಾಹಿತ್ಯ ಕೃಷಿ ಮಾಡಿ ಕೊಡುಗೆ ನೀಡಿದ್ದಾರೆ. ಕನ್ನಡ, ಸಂಸ್ಕೃತ, ತಮಿಳು ಭಾಷೆಗಳಲ್ಲಿ 965 ಶಾಸನಗಳು ನಮ್ಮ ಜಿಲ್ಲೆಯಲ್ಲಿ ದೊರೆತಿವೆ ಎಂದರು.

ಇದನ್ನೂ ಓದಿ: Farmers ಜಮೀನಿನ ದಾಖಲೆ ಸರಿಮಾಡಲು ಪಹಣಿ ಒಟ್ಟುಗೂಡಿಸಿದೆ: ಸಚಿವ ಕೃಷ್ಣ ಭೈರೇಗೌಡ

Advertisement

ತೋಂಟದ ಸಿದ್ದಲಿಂಗಯತಿಗಳು, ಪೂಜ್ಯಪಾದರು, ನಾಗಾರ್ಜುನ, ದೇವಚಂದ್ರ ಸಂಚಿಯ ಹೊನ್ನಮ್ಮ, ಮುಪ್ಪಿನ ಷಡಕ್ಷರಿ, ನಿಜಗುಣ ಶಿವಯೋಗಿಗಳು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮೌಖಿಕ, ಜನಪದ ಕ್ಷೇತ್ರಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಮಹದೇವ ಶಂಕನಪುರ ತಿಳಿಸಿದರು.

ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಇದು ಇಷ್ಟಕ್ಕೇ ಸೀಮಿತವಾಗಬಾರದು. ಒಂದು ಭಾಷೆಯನ್ನು ಉಳಿಸಿ, ಬೆಳೆಸಲು ಅದನ್ನು ಕನ್ನಡಿಗರು ಬಳಸಬೇಕು. ಮಾತಾಡಬೇಕು. ಬರೆಯಬೇಕು ಎಂದು ಅವರು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ. ವರಪ್ರಸಾದ್, ಹರಿದುಹಂಚಿಹೋಗಿದ್ದ ಕರ್ನಾಟಕ 1956ರಲ್ಲಿ ಏಕೀಕರಣಗೊಂಡಿತು. ಮೈಸೂರು ರಾಜ್ಯ ಎಂಬ ಹೆಸರನ್ನು 1973ರ ನ.1ರಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡೆಂದು ಕವಿರಾಜಮಾರ್ಗಕಾರ ಹೇಳುತ್ತಾನೆ. ಆದರೆ ಇಂದು ಆತಂಕದ ಪರಿಸ್ಥಿತಿ ಇದೆ. ರಾಜ್ಯೋತ್ಸವವನ್ನು ನವೆಂಬರ್‌ನಲ್ಲಿ ಮಾತ್ರ ಆಚರಿಸದೇ ನಿತ್ಯೋತ್ಸವವಾಗಿ ಆಚರಿಸಬೇಕು ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎ.ಎಂ. ಶಿವಸ್ವಾಮಿ ಜನಪದ ಗೀತೆಗಳನ್ನು ಹಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಹದೇವಪ್ಪ, ಸಹ ಪ್ರಾಧ್ಯಾಪಕರಾದ ಉಮೇಶ್, ಎಸ್ ಗುಣ, ರೂಪಶ್ರೀ, ಜಮುನಾ, ವಿದ್ಯಾರ್ಥಿನಿ ವರ್ಷಾ ಹತ್ವಾರ್ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next