Advertisement
ಸಾಲ ಮನ್ನಾ ಸೇರಿದಂತೆ ಬಜೆಟ್ನಲ್ಲಿ ಘೋಷಿಸಿದ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನಕ್ಕಿಂತ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಅಂದಾಜು ಮಾಡಿದೆ. ಈ ಪೈಕಿ ಸ್ವಲ್ಪ ಮೊತ್ತವನ್ನು ವಿವಿಧ ಇಲಾಖೆಗಳಲ್ಲಿ ಹಿಂದಿನ ವರ್ಷಗಳಲ್ಲಿ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡು ಬ್ಯಾಂಕ್ಗಳಲ್ಲಿ ಠೇವಣಿಯಾಗಿಟ್ಟಿರುವ ಮೊತ್ತವನ್ನು ಆರ್ಥಿಕ ಇಲಾಖೆಗೆ ವಾಪಸ್ ಪಡೆದು ಹೊಂದಾಣಿಕೆ ಮಾಡಬಹುದು. ಆದರೂ ಕನಿಷ್ಠ 10 ಸಾವಿರ ಕೋಟಿ ರೂ. ಹೆಚ್ಚುವರಿ ಸಂಪನ್ಮೂಲ ಬೇಕಾಗಿದ್ದು, ಇದನ್ನು ಸರಿಹೊಂದಿಸಲು ಒಂದೋ ಸಾಲದ ಮೊತ್ತ ಹೆಚ್ಚಿಸಬೇಕು ಇಲ್ಲವೇ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಕಡಿತಗೊಳಿಸಬೇಕು ಎನ್ನುತ್ತಾರೆ ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು.
ಆದರೆ, ಅಷ್ಟೊಂದು ಹೆಚ್ಚುವರಿ ಹೊರೆಯಾಗಿದ್ದರೂ ಸಂಪನ್ಮೂಲ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯತ್ನ ಮಾಡಿಲ್ಲ. ಡೀಸೆಲ್, ಮದ್ಯ, ವಿದ್ಯುತ್ ಬಳಕೆ ಮತ್ತು ವಾಹನ ತೆರಿಗೆ ಹೆಚ್ಚಳದ ಮೂಲಕ ಹೆಚ್ಚುವರಿಯಾಗಿ 3177 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹಾಕಿ ಕೊಳ್ಳಲಾಗಿದೆ. ಉಳಿದಂತೆ ಕೇಂದ್ರದ ಸಹಾಯಧನದಲ್ಲಿ 437 ಕೋಟಿ ರೂ. ಹೆಚ್ಚುವರಿ ನಿರೀಕ್ಷೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಸಂಪನ್ಮೂಲ ಸಂಗ್ರಹಕ್ಕೆ ಬೇರೆ ಮಾರ್ಗಗಳನ್ನು ತೋರಿಸಿಲ್ಲ.
Related Articles
Advertisement
ಇರುವ ದಾರಿಗಳೇನು?:ವಿವಿಧ ಇಲಾಖೆಗಳಲ್ಲಿ ಹಿಂದಿನ ವರ್ಷಗಳಲ್ಲಿ ವೆಚ್ಚ ಮಾಡದೆ ಬಾಕಿ ಉಳಿಸಿಕೊಂಡು ಬ್ಯಾಂಕ್ಗಳಲ್ಲಿ ಠೇವಣಿಯಾಗಿಟ್ಟಿರುವ ಮೊತ್ತವನ್ನು ಆರ್ಥಿಕ ಇಲಾಖೆಗೆ ವಾಪಸ್ ಪಡೆದು ಹೊಂದಾಣಿಕೆ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು, ಹಣವನ್ನು ಆರ್ಥಿಕ ಇಲಾಖೆಗೆ ಹಿಂತಿರುಗಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಗರಿಷ್ಠ 5 ಸಾವಿರ ಕೋಟಿ ರೂ. ಬರಬಹುದು ಎಂಬ ನಿರೀಕ್ಷೆಯಿದೆ. ಇನ್ನು 2018-19ನೇ ಸಾಲಿನಲ್ಲಿ ಒಟ್ಟು 47,134 ಕೋಟಿ ಸಾಲ ಮಾಡುವ ಪ್ರಸ್ತಾಪ ಮಾಡಲಾಗಿದ್ದು, ಇದರಿಂದ ವರ್ಷಾಂತ್ಯಕ್ಕೆ ರಾಜ್ಯದ ಒಟ್ಟಾರೆ ಸಾಲದ ಮೊತ್ತ 2,92,220 ಕೋಟಿ ರೂ.ಗೆ ಏರಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಬೇಕಾದರೆ 50 ಸಾವಿರ ಕೋಟಿ ರೂ. ಗಡಿ ದಾಟಿ ಸಾಲದ ಮೊತ್ತ ಹೆಚ್ಚಿಸಬೇಕು ಇಲ್ಲವೇ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನ ಕಡಿತಗೊಳಿಸಿ ಅದನ್ನು ಬಳಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಹಣಕಾಸು ಇಲಾಖೆ ಅಧಿಕಾರಿಗಳು. ಪ್ರದೀಪ್ ಕುಮಾರ್ ಎಂ.