Advertisement

ಫೀಲ್ಡಿಗಿಳಿದ ಯೋಧರು;ಕೋವಿಡ್‌ 3ನೇ ಅಲೆಗೆ ಸಿಎಪಿಎಫ್ ನಿಂದ ಸಿದ್ಧತೆ ಶುರು

12:56 AM Jan 03, 2022 | Team Udayavani |

ಹೊಸದಿಲ್ಲಿ: ಒಮಿಕ್ರಾನ್‌ ರೂಪಾಂತರಿ ಸೇರಿದಂತೆ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿರುವುದು ದೇಶಾದ್ಯಂತ 3ನೇ ಅಲೆಯ ಪ್ರವೇಶದ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ(ಸಿಎಪಿಎಫ್) ಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದೆ.

Advertisement

ರೆಮಿಡಿಸಿವಿರ್‌ ಸೇರಿದಂತೆ ಅಗತ್ಯ ಔಷಧಗಳ ದಾಸ್ತಾನು, ಆಮ್ಲಜನಕ ಸಿಲಿಂಡರ್‌ಗಳ ಪೂರೈಕೆಗೆ ಕ್ರಮ ಹಾಗೂ ದಕ್ಷಿಣ ದಿಲ್ಲಿಯಲ್ಲಿರುವ ಜಗತ್ತಿನ ಅತೀ ದೊಡ್ಡ ತಾತ್ಕಾಲಿಕ ಕೋವಿಡ್‌ ಕೇರ್‌ ಕೇಂದ್ರ ಸೇರಿದಂತೆ ದೇಶದ ವಿವಿಧ ಕೇಂದ್ರಗಳಿಗೆ ಮರುಜೀವ ನೀಡುವ ಕೆಲಸವನ್ನು ಸಿಎಪಿಎಫ್ ಯೋಧರು ಶುರು ಮಾಡಿದ್ದಾರೆ.

ಅರೆಸೇನಾ ಪಡೆಗಳಲ್ಲೇ 19 ಕೊರೊನಾ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಈ ಕಾರ್ಯಗಳು ಚುರುಕು ಪಡೆದಿವೆ. ದಿಲ್ಲಿಯ ಛತ್ತರ್‌ಪುರದಲ್ಲಿರುವ ಸರ್ದಾರ್‌ ಪಟೇಲ್‌ ಕೋವಿಡ್‌ ಸೆಂಟರ್‌ ಕೂಡ 3ನೇ ಅಲೆಗೆ ಸಜ್ಜಾಗಿದೆ. ಐಟಿಬಿಪಿ ಮತ್ತು ಅರೆಸೇನಾ ಪಡೆಯ ವೈದ್ಯರು, ಅರೆವೈದ್ಯಕೀಯ ಸಿಬಂದಿ ಮತ್ತು ದಿಲ್ಲಿ ಸರಕಾರ ಜಂಟಿಯಾಗಿ ಈ ಕೇಂದ್ರವನ್ನು ನಿರ್ವಹಿಸಲಿದೆ.

ಮುಂಬಯಿಯಲ್ಲಿ 8,063 ಕೇಸ್‌: ವಾಣಿಜ್ಯ ನಗರಿ ಮುಂಬಯಿಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ 8,063 ಮಂದಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ರವಿವಾರ 50 ಒಮಿಕ್ರಾನ್‌ ಪ್ರಕರಣ ಕಂಡುಬಂದಿದ್ದು, ಒಟ್ಟು ಒಮಿಕ್ರಾನ್‌ ಸೋಂಕಿತರ ಸಂಖ್ಯೆ 510ಕ್ಕೇರಿದೆ. ಮಹಾರಾಷ್ಟ್ರದಲ್ಲಿ 11,866 ಹೊಸ ಕೊರೊನಾ ಕೇಸುಗಳು ದೃಢಪಟ್ಟಿದೆ. 9 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ದಿಲ್ಲಿಯಲ್ಲಿ 3,194 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ. ಕೇರಳದಲ್ಲಿ ರವಿವಾರ 45 ಮಂದಿಗೆ ಒಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 152ಕ್ಕೇರಿದೆ.

ಆತಂಕ ಬೇಕಾಗಿಲ್ಲ; ಏಮ್ಸ್‌ ಮುಖ್ಯಸ್ಥ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಹೊರತುಪಡಿಸಿದಂತೆ ಉಳಿದವರು ಒಮಿಕ್ರಾನ್‌ ರೂಪಾಂತರಿ ಬಗ್ಗೆ ಆತಂಕ ಪಡಬೇಕಾದ ಅಗತ್ಯವೇ ಇಲ್ಲ. ಇದೊಂದು ಅಲ್ಪ ತೀವ್ರತೆಯ ರೂಪಾಂತರಿಯಾಗಿದೆ ಎಂದು ಏಮ್ಸ್‌ ಮುಖ್ಯಸ್ಥ ಡಾ| ರಣದೀಪ್‌ ಗುಲೇರಿಯಾ ಹೇಳಿದ್ದಾರೆ. ಒಮಿಕ್ರಾನ್‌ ಶ್ವಾಸನಾಳದ ಮೇಲ್ಭಾಗದ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಶ್ವಾಸಕೋಶದ ಮೇಲಲ್ಲ. ಹೀಗಾಗಿಯೇ ಒಮಿಕ್ರಾನ್‌ ಸೋಂಕಿತರಲ್ಲಿ ಆಕ್ಸಿಜನ್‌ ಸ್ಯಾಚುರೇಶನ್‌ ಮಟ್ಟ ಇಳಿಕೆಯಾಗುವ, ಗಂಭೀರ ಸಮಸ್ಯೆ ಉಂಟಾಗುವ ಉದಾಹರಣೆಗಳು ಕಡಿಮೆ. ಕೇವಲ ಅತಿಯಾದ ಜ್ವರ, ನೆಗಡಿ, ಗಂಟಲು ನೋವು, ಮೈಕೈ ನೋವು, ತಲೆನೋವು ಕಾಣಿಸಿಕೊಳ್ಳುತ್ತವೆ ಅಷ್ಟೆ ಎಂದೂ ಗುಲೇರಿಯಾ ಹೇಳಿದ್ದಾರೆ.

Advertisement

ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

ಸುಪ್ರೀಂ ಕೋರ್ಟ್‌ನಲ್ಲಿ 2 ವಾರ ಕಾಲ ಭೌತಿಕ ವಿಚಾರಣೆ ಇಲ್ಲ
ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮತ್ತೆ ವರ್ಚುವಲ್‌ ವಿಚಾರಣೆಯತ್ತ ಮುಖ ಮಾಡಿದೆ. ಮುಂದಿನ 2 ವಾರಗಳ ಕಾಲ ಭೌತಿಕ ವಿಚಾರಣೆ ನಡೆಸದೇ ಇರಲು ನಿರ್ಧರಿಸಿದೆ. 2 ವಾರಗಳ ಬಳಿಕ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ.

3ನೇ ಡೋಸ್‌ ಶೇ.88 ಪರಿಣಾಮಕಾರಿ
ಕೊರೊನಾ ಲಸಿಕೆಯ ಮೂರನೇ ಡೋಸ್‌ ಒಮಿಕ್ರಾನ್‌ ರೂಪಾಂತರಿಯ ವಿರುದ್ಧ ಶೇ.88 ರಷ್ಟು ಪರಿಣಾಮಕಾತ್ವ ಹೊಂದಿದೆ ಎಂದು ಯುಕೆಯಲ್ಲಿ ನಡೆಸಲಾದ ಅಧ್ಯಯನವೊಂದರಿಂದ ತಿಳಿದುಬಂದಿದೆ. ಬೂಸ್ಟರ್‌ ಡೋಸ್‌ ವ್ಯಕ್ತಿಯ ಪ್ರತಿಕಾಯವನ್ನು ಹೆಚ್ಚಳ ಮಾಡುತ್ತದೆ. ಎರಡನೇ ಡೋಸ್‌ಗೆ ಹೋಲಿಸಿದರೆ 3ನೇ ಡೋಸ್‌ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಯುಕೆ ಆರೋಗ್ಯ ಭದ್ರತಾ ಸಂಸ್ಥೆಯ ವರದಿ ಹೇಳಿದೆ. ಜತೆಗೆ, ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದು ಅಥವಾ ತುರ್ತು ನಿಗಾ ಘಟಕಕ್ಕೆ ದಾಖಲಾಗುವ ಪ್ರಮಾಣ ಶೇ.50ಕ್ಕಿಂತ ಕಡಿಮೆಯಿದೆ ಎಂಬ ಸಮಾಧಾನಕರ ವಿಚಾರವನ್ನೂ ವರದಿ ತಿಳಿಸಿದೆ.

ಮಧ್ಯಪ್ರದೇಶಕ್ಕೆ 3ನೇ ಅಲೆ ಬಂದಾಯಿತು!
“ರಾಜ್ಯಕ್ಕೆ ಕೊರೊನಾ ಮೂರನೇ ಅಲೆ ಬಂದಾಗಿದೆ. ಇನ್ನೇನಿದ್ದರೂ ಎಚ್ಚರಿಕೆಯಿಂದ ಇರುವುದಷ್ಟೇ ನಮಗಿರುವ ದಾರಿ.’ ಹೀಗೆಂದು ಹೇಳಿರುವುದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌. ಜನರ ಸಕ್ರಿಯ ಪಾಲುದಾರಿಕೆ ಇದ್ದರಷ್ಟೇ ಸೋಂಕಿನ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಲು ಸಾಧ್ಯ. 3ನೇ ಅಲೆಯನ್ನು ಎದುರಿಸಲು ಎಲ್ಲ ರೀತಿಯ ಕ್ರಮಗಳನ್ನು ಸರಕಾರ ಕೈಗೊಂ ಡಿದೆ. ಆದರೆ ಜನರು ಎಲ್ಲ ನಿಯಮಗಳನ್ನೂ ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದೂ ಚೌಹಾಣ್‌ ಮನವಿ ಮಾಡಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬಹುತೇಕ ಸೋಂಕಿತರಲ್ಲಿ ರೋಗಲಕ್ಷಣವೇ ಇಲ್ಲ ಅಥವಾ ಅಲ್ಪಪ್ರಮಾಣದ ಲಕ್ಷಣಗಳಷ್ಟೇ ಇವೆ. ಆಸ್ಪತ್ರೆಗೆ ಸೇರಬೇಕಾದ ಅಗತ್ಯವೂ ಕಂಡುಬಂದಿಲ್ಲ. ಹೀಗಾಗಿ ಅನಗತ್ಯ ಆತಂಕ ಬೇಕಾಗಿಲ್ಲ.
– ಅರವಿಂದ ಕೇಜ್ರಿವಾಲ್‌, ದಿಲ್ಲಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next