Advertisement

ಕೇಂದ್ರ ಯೋಜನೆ ಲಾಭ ಕಾಂಗ್ರೆಸ್‌ಗೆ: ಆರೋಪ

07:00 AM Dec 30, 2017 | Team Udayavani |

ಬೆಂಗಳೂರು : ಅನ್ನಭಾಗ್ಯ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬಡವರಿಗೆ ಸುಳ್ಳು ಹೇಳಿ ವಂಚಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

Advertisement

ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒಂದು ಯೂನಿಟ್‌ಗೆ 7 ಕೆ.ಜಿ ಉಚಿತ ಅಕ್ಕಿ ನೀಡುವುದನ್ನು ರಾಜ್ಯ ಸರ್ಕಾರದ ಸಾಧನೆಯೆಂದು ಬಣ್ಣಿಸಿಕೊಳ್ಳಲಾಗುತ್ತಿದೆ. ಅನ್ನಭಾಗ್ಯದ ಅಕ್ಕಿ ಖರೀದಿಸಲು ಕೇಂದ್ರ ಸರ್ಕಾರದಿಂದ ಒಂದು ಕೆ.ಜಿ.ಗೆ 29.64 ರೂ. ಭರಿಸಲಾಗುತ್ತದೆ. ರಾಜ್ಯ ಸರ್ಕಾರ 3 ರೂ. ಮಾತ್ರ ಹಾಕಿ, 32.64 ರೂ.ಗೆ ಒಂದು ಕೆ.ಜಿ.ಯಂತೆ ಅಕ್ಕಿ ಖರೀದಿಸುತ್ತಿದೆ.

ಮೂರು ವರ್ಷದಲ್ಲಿ ಅನ್ನಭಾಗ್ಯದ ಅಕ್ಕಿ ಖರೀದಿಸಲು ಕೇಂದ್ರದಿಂದ 24,107.81 ಕೋಟಿ ರೂ. ನೀಡಲಾಗಿದೆ. ರಾಜ್ಯ ಸರ್ಕಾರ ಮಾಡಿರುವ ವೆಚ್ಚ  2,994.13 ಕೋಟಿ ರೂ. ಮಾತ್ರ ಎಂದು ರಾಜ್ಯ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ ಮತ್ತು ಸಹ ವಕ್ತಾರ ಎಸ್‌.ಪ್ರಕಾಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈ ಯೋಜನೆಯ ಶ್ರೇಯಸ್ಸನ್ನು ಕೇಂದ್ರದೊಂದಿಗೆ ಹಂಚಿಕೊಳ್ಳಬೇಕಿತ್ತು. ಆದರೆ, ರಾಜಕೀಯ ದುರುದ್ಧೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ರಾಜ್ಯ ಸರ್ಕಾರದ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವಾಸ್ತವಾಂಶವನ್ನು ಮರೆಮಾಚಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಕೇಂದ್ರ ಸರ್ಕಾರದ ಹಲವು ಯೋಜನೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರ ಕಲ್ಯಾಣಕ್ಕಿಂತ ಅವರ ರಾಜಕೀಯ ಕಲ್ಯಾಣವೇ ಮುಖ್ಯವಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next