Advertisement

ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯ ಕರ್ನಾಟಕ ಹಸಿರು: ಸಿಎಂ ಬೊಮ್ಮಾಯಿ

06:21 PM Nov 23, 2022 | Team Udayavani |

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ರೂ ನೀಡಿದೆ. ಇದರಿಂದ ಮಧ್ಯ ಕರ್ನಾಟಕ ಹಸಿರಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಮಾಡಿರುವುದು ಬಿಜೆಪಿ ಸರ್ಕಾರ. ಅದನ್ನು ಪೂರ್ಣಗೊಳಿಸುವುದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಬುಧವಾರ ಜಗಳೂರು ಬಿಜೆಪಿ ಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರ ಕನಸಿನ ಡಬಲ್ ಇಂಜಿನ್ ಸರಕಾರ ಬರಬೇಕು ಎನ್ನುವುದು ಜನರ ಸಂಕಲ್ಪವಾಗಿದೆ. ಜಗಳೂರು ತಾಲೂಕಿಗೆ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ನೀರು ಲಭಿಸುವಂತೆ ಮಾಡಿದ್ದೆ. ಈ ಭಾಗದ 57 ಕೆರೆಗಳಿಗೆ 660 ಕೋಟಿ ರೂ.ಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಮಂಜೂರು ಮಾಡಿದ್ದಾರೆ. ನಮ್ಮ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆ ಅಡಿ 45 ಸಾವಿರ ಎಕರೆಗೆ ಹನಿನೀರಾವರಿ ಒದಗಿಸಲು 1400 ಕೋಟಿ ರೂ. ಅನುದಾನ ನೀಡಿ, ಯೋಜನೆಯನ್ನು ಚಾಲನೆಗೊಳಿಸಲಾಗುತ್ತಿದೆ ಎಂದರು.

ಮನೆಮೆನಗೆ ನೀರು ಕೊಡುವ ಯೋಜನೆ
ಜಲಜೀವನ್ ಮಿಷನ್ ಯೋಜನೆಯಡಿ 9000 ಕೋಟಿರೂ. ಅನುದಾನದಲ್ಲಿ ರಾಜ್ಯದ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದ್ದು, ಈ ವರ್ಷ 14 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಇದು ನಮ್ಮ ಸರ್ಕಾರದ ಬದ್ದತೆ. ಭಾಜಪದ ನಮ್ಮ ಸರ್ಕಾರದ 3 ವರ್ಷ ಅವಧಿಯಲ್ಲಿ ಒಟ್ಟು 30 ಲಕ್ಷ ಮನೆಗಳಿಗೆ ಕುಡಿಯು ನೀರು ಒದಗಿಸಿರುವುದು ಡಬಲ್ ಇಂಜಿನ್ ಸರ್ಕಾರದ ಶಕ್ತಿಯಾಗಿದೆ .154 ಗ್ರಾಮಗಳಿಗೆ 482 ಕೋಟಿ ರೂ. ಮನೆಮೆನಗೆ ನೀರು ಕೊಡುವ ಯೋಜನೆ ಮಾಡಲಾಗಿದೆ ಎಂದರು.

ಪರಿಶಿಷ್ಟ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ
ನಮ್ಮ ಸರ್ಕಾರ ಬಂದ ಮೇಲೆ ವಾಲ್ಮೀಕಿ ಕುಲಕ್ಕೆ ಶೇ 3 ರಿಂದ ಶೇ 7 ರಷ್ಟು ಮೀಸಲಾತಿಯನ್ನು ಹೆಚ್ಚಿಸಿದೆ. ಪರಿಶಿಷ್ಟ ಸಮುದಾಯಗಳಿಗೆ 15 ರಿಂದ 17 ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದು ಭಾಜಪ ಸರ್ಕಾರ. ವಾಲ್ಮೀಕಿ ಕುಲದವರ ಕಷ್ಟದ ಬದುಕು ನಮಗೆ ಗೊತ್ತಿದೆ. ಉದ್ಯೋಗ, ಶಿಕ್ಷಣದಲ್ಲಿ ವಂಚಿತರಾಗಿದ್ದಾರೆ. ಅವರಿಗೆ ನ್ಯಾಯವನ್ನು ನೀಡುವ ಬದ್ಧತೆಯಿಂದ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಬರುವ ದಿನಗಳಲ್ಲಿ ಅವರ ಬದುಕು ಬದಲಾವಣೆಯಾಗಿ ಅವಕಾಶಗಳು ದೊರೆತು ಶಿಕ್ಷಣದಿಂದ ಮುಂದುವರೆಯುತ್ತಾರೆ. ಎಸ್.ಸಿ.ಎಸ್.ಟಿ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ಹೃದಯ ಶ್ರೀಮಂತಿಕೆಯಿದ್ದಾಗ ಮಾತ್ರ ಇಂಥ ಯೋಚನೆಗಳು ಬರುತ್ತವೆ. ಬರುವ ದಿನಗಳಲ್ಲಿ ಸ್ವಾವಲಂಬಿ, ಸ್ವಾಭಿಮಾನದ ಬದುಕು ಬದುಕಲಿದ್ದಾರೆ. ಐತಿಹಾಸಿಕ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಇಷ್ಟು ವರ್ಷಗಳ ಕಾಲ ಜನಾಂಗವನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿದ್ದು, ಶಿಕ್ಷಣ, ಉದ್ಯೋಗದಿಂದ ವಂಚಿತರನ್ನಾಗಿಟ್ಟಿದ್ದರು. ಕಾಂಗ್ರೆಸ್ಸಿನಿಂದಲೇ ಎಸ್ಸಿ ಎಸ್ಟಿ ಉದ್ಧಾರವಾಗುವುದೆಂದು ಕೂಗು ಹಾಕುತ್ತಿದ್ದರು. ಆದರೆ ಕಾಲ ಬದಲಾವಣೆಯಾಗಿದೆ. ಚಿಂತನೆ ಬದಲಾಗಿದೆ. ಈ ಜನಾಂಗದ ಯುವಕರು ಬದಲಾಗಿದ್ದು, ತಮ್ಮ ಹಕ್ಕಿನ ಬಗ್ಗೆ ಅರಿವಿದೆ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಬದುಕಬೇಕು. ದುಡಿಮೆ ಮಾಡಿ ಬದುಕಬೇಕು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಆದ್ದರಿಂದಲೇ ಈ ತೀರ್ಮಾನ ಮಾಡಲಾಗಿದೆ ಎಂದರು.

ಸ್ವಾವಲಂಬಿ ಜೀವನ ನಡೆಸಲು ನೆರವು
ನಮ್ಮ ರೈತಾಪಿ ವರ್ಗದವರ ಮಕ್ಕಳಿಗೆ ಶಿಕ್ಷಣ ನೀಡಲು ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿ ಗ್ರಾಮದಲ್ಲಿ 2 ಸಂಘಗಳಿಗೆ 5 ಲಕ್ಷ ರೂ.ಗಳನ್ನು ನೀಡುವ ಸ್ತ್ರೀಸಾಮಾರ್ಥ್ಯ ಯೋಜ‌ನೆ ಜಾರಿಗೊಳಿಸಲಾಗುತ್ತಿದೆ. 5 ಲಕ್ಷ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗದಲ್ಲಿ ತೊಡಗಿಸುವ ಯೋಜನೆ ಇದಾಗಿದೆ. ಪ್ರತಿ ಗ್ರಾಮದಲ್ಲಿ ಎರಡು ಯುವಕ ಸಂಘಕ್ಕೆ ಸ್ವಾಮಿ ವಿವೇಕಾನಂಧ ಯೋಜನೆಯಡಿ 5 ಲಕ್ಷ ರೂ.ಗಳ ಸಾಲಸೌಲಭ್ಯ ನೀಡಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು. ಸ್ವಾವಲಂಬಿ ಜೀವನ ನಡೆಸಲು ಇದರಿಂದ ಅನುಕೂಲವಾಗಲಿದೆ ಎಂದರು.

Advertisement

ಯಾವ ಸರ್ಕಾರವೂ ಕುರಿಗಾಹಿಗಳನ್ನು ತಿರುಗಿ ನೋಡಿಲ್ಲ
ಈ ಬಾರಿ ಕುರಿಗಾರರ ಪ್ರತಿ ಸಂಘಕ್ಕೆ 5 ಲಕ್ಷ ರೂ.ಗಳನ್ನು ಒದಗಿಸಿ. 20 ಕುರಿಗಳನ್ನು ನೀಡಲಾಗುವುದು. ಇದಕ್ಕಾಗಿ 354 ಕೋಟಿ ರೂ.ಗಳ ಅನುದಾನ ನೀಡಲಾಗುವುದು. ಕಾಡಿನಲ್ಲಿ ಇರುವ ಜನರಿಗೆ ಸಹಾಯ ಮಾಡುವ ತೀರ್ಮಾನ ಮಾಡಿದ್ದೇವೆ. ಇದುವರೆಗೂ ಯಾವ ಸರ್ಕಾರವೂ ಅವರತ್ತ ತಿರುಗಿ ನೋಡಿರಲಿಲ್ಲ. ಸಿದ್ದರಾಮಯ್ಯ ಯಾಕೆ ಈ ಕೆಲಸ ಮಾಡಲಿಲ್ಲ‌. ಜನಾಂಗದವರ ಬಗ್ಗೆ ಅವರಿಗೆ ಚಿಂತನೆ ಇಲ್ಲವೇ ಎಂದು ಪ್ರಶ್ನಿಸಿದರು. ಈ ಯೋಜನೆ ಘೋಷಿಸಿದಾಗ ದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದರು. ನಾನು ಇದನ್ನು ಸವಾಲಾಗಿ ಸ್ವೀಕರಿಸಿ ಮಾಡಿಯೇ ತೀರುತ್ತೇನೆ ಎಂದಿದ್ದೇನೆ ಎಂದರು.

ಮುಂದಿನ ತಿಂಗಳು 23 ಕಸುಬುಗಳಿಗೆ ವಿಶೇಷ ಯೋಜನೆ ಘೋಷಣೆ
23 ಕಸುಬುಗಳಿಗೆ ಬ್ಯಾಂಕಿನ ಸಾಲ ನೀಡುವ ವಿನೂತನ ಯೋಜನೆಯನ್ನು ಬರುವ ತಿಂಗಳು ಘೋಷಿಸಲಾಗುವುದು. ಎಲ್ಲಾ ವರ್ಗದ ಜನರಿಗೆ ಸಮಾನ ಗೌರವ, ಅವಕಾಶ, ಶಿಕ್ಷಣ, ಕಾಯಕ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲಾ ವರ್ಗದ ಜನರ ಪಾಲನ್ನು ಪಡೆಯುತ್ತಿದ್ದೇವೆ. ದಾವಣಗೆರೆ ಜಿಲ್ಲೆ ಮಹತ್ವದ ಜಿಲ್ಲೆ ಚಿತ್ರದರ್ಗ, ದಾವಣಗೆರೆ ಅಭಿವೃದ್ಧಿಯಾಗಬೇಕು ಎಂಬ ಪರಿಕಲ್ಪನೆ. ನಾವು ತುಮಕೂರು ದಾವಣಗೆರೆ ರೈಲ್ವೆಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ರೈಲ್ವೆ ಸಚಿವರು ತಿಳಿಸಿದ್ದು. ಜನವರಿಯಲ್ಲಿ ಕೆಲಸ ಪ್ರಾರಂಭವಾಗುತ್ತಿದೆ. 1 ಸಾವಿರ ಎಕರೆಯಲ್ಲಿ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವಿಮಾನನಿಲ್ದಾಣಕ್ಕೆ ಸ್ಥಳ ನೀಡದಿದರೆ ವಿಮಾನನಿಲ್ದಾಣವೂ ಬರಲಿದೆ. 3500 ಕೋಟಿ ಗಳಲ್ಲಿ ನೀರಾವರಿ, ಮೂಲಭೂತ ಸೌಕರ್ಯ ಸಮಗ್ರ ಅಭಿವೃದ್ಧಿಗೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲಾಗುವುದು. ಬರಡು ನಾಡು ಹಸಿರು ನಾಡಾಗಬೇಕು. ಆ ಬದ್ಧತೆಯಿಂದ ಕೆಲಸ ಮಾಡುವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಭಾಜಪಕ್ಕೆ ಅಧಿಕಾರಕ್ಕೆ ಬರಬೇಕು ಎಂದರು.

50 ಸಾವಿರ ಮತಗಳ ಅಂತರದಲ್ಲಿ ರಾಮಚಂದ್ರಪ್ಪ ಅವರನ್ನು ಗೆಲ್ಲಿಸಿ
ಶಾಸಕ ರಾಮಚಂದ್ರ ಅವರನ್ನು ಬಿಜೆಪಿಗೆ ಕರೆತಂದದ್ದು ನಾನು ಮತ್ತು. ಸಿದ್ದಶ್ವರಪ್ಪ ಅವರು. ಕೆಲಸಗಳಾಗುತ್ತಿಲ್ಲ ಎಂದು ಒದ್ದಾಡುತ್ತಿದ್ದ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಭಾಜಪಕ್ಕೆ ಬಂದರು. ಜಗಳೂರಿನ ಹಳ್ಳಿ ಹಳ್ಳಿಗೆ ನಾನು ಬಂದಿದ್ದೇನೆ. ಈ ಜನಕ್ಕೆ ನೀರನ್ನು ಕೊಡುವ ಸಂಕಲ್ಪ ಮಾಡಿದ್ದೆ. ಈ ಮಧ್ಯ ಕರ್ನಾಟಕ ಭಾಗ ಅಭಿವೃದ್ಧಿ ಮಾಡುವ ಸೌಭಾಗ್ಯ ದೊರೆತಿದೆ. ರಾಮಚಂದ್ರಪ್ಪ ಪ್ರೀತಿಯಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ತಾಲ್ಲೂಕಿನ ಅಭಿವೃದ್ಧಿಗಾಗಿ 24 ಗಂಟೆಗಳ ಕಾಲ ಜನರಲ್ಲಿ ಬೆರೆತು ಕೆಲಸ ಮಾಡುತ್ತಿದ್ದಾರೆ. ಈ ಬಾರಿ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಇಂದೇ ರಾಮಚಂದ್ರಪ್ಪನವರ ವಿಜಯೋತ್ಸವ. ವಿಧಾನ ಸಭೆಯಲ್ಲಿ ಮತ್ತೊಮ್ಮೆ ಬಿಜೆಪಿ ಬರಬೇಕು. ಸುಭಿಕ್ಷ ನಾಡು ಕಟ್ಟುವ ಕೆಲಸ ಮಾಡುತ್ತೇವೆ. ನಿಮ್ಮ ಸಂಕಲ್ಪವೇ ನಮ್ಮ ವಿಜಯಸಂಕಲ್ಪ. ಚಿತ್ರದರ್ಗ, ದಾವಣಗೆರೆ ಜಿಲ್ಲೆ ಅತ್ಯಂತ‌ ಅಭಿವೃದ್ದಿಯಾಗಬೇಕು. ನವ ಕರ್ನಾಟಕದ ಮೂಲಕ ನವ ಭಾರತ ಕಟ್ಟುವುದು ನಮ್ಮ ಸಂಕಲ್ಪ. ಜನರ ಸಂಕಲ್ಪವೇ ನಮ್ಮ ಸಂಕಲ್ಪ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next