Advertisement

ಹಬ್ಬಗಳ ಆಚರಣೆಯಿಂದ ಮಾನವ ಅಂತಃಕರಣ ಪರಿಶುದ್ಧ 

11:21 PM Sep 09, 2021 | Team Udayavani |

ನಾವು ಪ್ರಾಚೀನ ಕಾಲದಿಂದಲೂ ಅನೇಕ ಹಬ್ಬ ಹರಿದಿನಗಳನ್ನು ವಿವಿಧ ಬಗೆಯಲ್ಲಿ ಆಚರಿಸುತ್ತಾ ಬಂದಿದ್ದೇವೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೇವಾತಾರಾಧನೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ.

Advertisement

ಹಬ್ಬ ಹರಿದಿನಗಳ ಆಚರಣೆಯಿಂದ ಮಾನವ ಜೀವನ ಪವಿತ್ರವಾಗಿ ಅಂತಃಕರಣ ಪರಿಶುದ್ಧವಾಗುತ್ತದೆ. ಮಾನ ವನು ದಾನವನಾಗದೆ ಆಧ್ಯಾತ್ಮಿಕ ಚಿಂತನೆ, ದೈವಭಕ್ತಿಯು ಜಾಗೃತವಾಗಿರಲು ಇದು ಸಾಧನವಾಗಿರುತ್ತದೆ. ನಮ್ಮ ಆಚ ರಣೆಗಳು ಧಾರ್ಮಿಕ, ಆಧ್ಯಾತ್ಮಿಕ ಹಿನ್ನೆಲೆಯಿಂದ ಶ್ರೇಷ್ಠವೆನಿ ಸಿವೆ. ದುರ್ಲಭವಾದ ಮಾನವ ಜನ್ಮದಲ್ಲಿ ಭಗವಂತನ ಅನು ಗ್ರಹವನ್ನು ಪಡೆಯುವುದೇ ಮುಖ್ಯ ಉದ್ದೇಶವಾಗಿರುವು ದರಿಂದ ನಮ್ಮ ಲೌಕಿಕ ಜೀವನದೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಂಡು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕು.

ಗಂಪತಿಯ ಆರಾಧನಾ ಪರಂಪರೆಯಲ್ಲಿ ಎಲ್ಲ ದೇವತೆಗಳಿಂದ ಭಿನ್ನವಾಗಿ ಜನಪ್ರಿಯ ದೇವತೆಯಾಗಿ ಶಿವನ ಅನುಗ್ರಹದಿಂದ ಆದಿಪೂಜಿತನಾಗಿರುವುದರಿಂದ ನಾವು ಆಚರಿಸುವ ಎಲ್ಲ ಕರ್ಮಾಂಗ­ಗಳಲ್ಲಿ ವಿಘ್ನ ನಿವಾರಕ ನಾದ ಗಣಪತಿಯನ್ನು ಆದಿಯಲ್ಲಿ ಪೂಜಿಸುತ್ತೇವೆ.

ವೇದವ್ಯಾಸರು ಮಹಾಭಾರತ ಲೇಖಕನಾಗಿ ಗಣಪತಿ ಯನ್ನು ಕರೆದಾಗ ಯಾವುದೇ ಕ್ಷಣದಲ್ಲಿ ಲೇಖನಿಗೆ ವಿಳಂಬ ವಿಲ್ಲದೆ ಕಥೆಯನ್ನು ವಿವರಿಸಲು ಗಂಪತಿಯು ಶರತ್ತನ್ನು ವಿಧಿಸಿದಾಗ ಪ್ರತಿಯಾಗಿ ವೇದವ್ಯಾಸ ತಿಳಿಯದೇ ಅರ್ಥ ಮಾಡಿಕೊಳ್ಳದೆ ಬರೆಯಬಾರದೆಂದು ನಿರ್ಬಂಧ ಹೇರಿದರು. ಪರಸ್ಪರ ಒಪ್ಪಂದದಿಂದ ಮಹಾಭಾರತದ ಬರೆಹಗಾರ ನಾದನು. ಹೀಗೆ ವ್ಯಾಸಕೃತ ಗ್ರಂಥಗಳನರಿತು ಲೇಖಕಾಗ್ರಣೆ ಯಾಗಿ ವೇದವ್ಯಾಸರ ಕೃಪಾಕಟಾಕ್ಷಕ್ಕೆ ಪಾತ್ರನಾದನು.

ಹೀಗೆ ಗಣಪತಿಯ ಹುಟ್ಟು, ಏಕದಂತನಾದ ಬಗ್ಗೆ ಅವನಿಗೆ ಸಂಬಂಧಿಸಿದ ಅನೇಕ ವಿಚಾರಗಳಲ್ಲಿ ಬೇರೆ ಬೇರೆ ಪುರಾಣಗಳಲ್ಲಿ ವಿಭಿನ್ನ ರೀತಿಯ ಕಥಾನಕಗಳನ್ನು ಕಾಣಬಹುದು. ಆದರೂ ನಮ್ಮ ಬದುಕಿಗೆ ಬೇಕಾದ ತತ್ತ್ವಗಳನ್ನು ಗ್ರಹಿಸುವವರು ನಾವಾಗಬೇಕು, ಗೌಣ ವಿಷಯಗಳನ್ನು ಬಿಡಬೇಕು. ಗಣ ಪತಿಯ ವಿಚಾರದಲ್ಲಿ ಭಿನ್ನತೆಯನ್ನು ಕಂಡರು ಆರಾಧನೆಯ ವಿಷಯದಲ್ಲಿ ಶ್ರದ್ಧಾಭಕ್ತಿಯ ದೇವತೆಯಾಗಿ ಸಾರ್ವ ಜನಿಕವಾಗಿ ಎಲ್ಲರಿಂದಲೂ ಪೂಜಿಸಲ್ಪಡು­ತ್ತಾನೆ. ಯಾಕೆಂದರೆ “ಕಲೌ ದುರ್ಗಾ ವಿನಾಯಕ’ ಎಂಬಂತೆ ಕಲಿಯುಗದಲ್ಲಿ ಆರಾಧಿಸುವ ಭಕ್ತರ ಇಷ್ಟಾರ್ಥ ಗಳನ್ನು ಕ್ಷಿಪ್ರ ಪ್ರಸಾದನಾಗಿ ಶೀಘ್ರ ಈಡೇರಿಸುತ್ತಾನೆ.

Advertisement

ಗಣಪತಿಯನ್ನು ಈ ರೀತಿ ಉಪಾಸನೆ ಮಾಡಬೇಕು: ಕೆಂಪು ಬಟ್ಟೆಯನ್ನು, ಕೆಂಬಣ್ಣದ ಶರೀರವನ್ನು ರಕ್ತಬಣ್ಣದ ಶರೀರ ವನ್ನು, ರಕ್ತ ಬಣ್ಣದ ಮಾಲೆಯನ್ನು ಧರಿಸಿದ ದೊಡ್ಡ ಹೊಟ್ಟೆಯ, ಆನೆ ಮೊಗದ ನಾಲ್ಕು ಕೈಗಳಿಂದ ದಂತ, ಪಾಶ, ಅಂಕುಶ, ಅಭಯ ಮುದ್ರೆಗಳನ್ನು ಧರಿಸಿದ ವಿಘ್ನನಿವಾರಕ ನನ್ನು ಉಪಾಸನೆ ಮಾಡಿದಾಗ ಕ್ಷಿಪ್ರವಾಗಿ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ದಂಪತಿ ಶುದ್ಧವಾದ ಬಟ್ಟೆಗಳನ್ನು ಧರಿಸಿ ಶ್ರದ್ಧಾಭಕ್ತಿಯಿಂದ ಕಲ್ತೋಕ್ತ ಪೂಜೆ ಮಾಡಿದಾಗ ಮಾಡಿದವರಿಗೆ ನೂರ್ಮಡಿ ಫಲ ದೊರಕುತ್ತದೆ ಎಂಬ ಶಾಸ್ತ್ರ ವಚನ ಹಾಗೂ ನೈಮಿಪಾರಣ್ಯದಲ್ಲಿ ಮುನಿಗಳು ಸೂತ ಪುರಾಣಿಕರಲ್ಲಿ ಈ ರೀತಿಯಲ್ಲಿ ಕೇಳಿದರು. ಎಲೈ ಸೂತರೇ ಮನುಷ್ಯರ ಕಾರ್ಯಗಳಿಗೆ ಉಂಟಾಗುವ ವಿಘ್ನ ನಿವಾರಣೆ, ಅರಸರಿಗೆ ಶತ್ರು ಜಯ, ಮಾನಸಿಕ ನೆಮ್ಮದಿ, ಸಕಲ ಸಂಪತ್ತು ಹೇಗೆ ದೊರಕುತ್ತದೆಂದು ಪ್ರಶ್ನಿಸಿ­ದಾಗ ಸೂತ ಪುರಾಣಿಕರು ಹೇಳಿದರು.

ಭಾರತ ಯುದ್ಧಾರಂಭದಲ್ಲಿ ಕೌರವ, ಪಾಂಡವರ ದಳಗಳು ಯುದ್ಧಕ್ಕೆ ಸಿದ್ಧರಾಗಿ ನಿಂತಾಗ ನಿರ್ವಿಘ್ನವಾಗಿ ಯುದ್ಧದಿಂದ ಜಯ ಸಿದ್ಧಿಯಾಗಲು ಯಾವ ದೇವರನ್ನು ಪೂಜಿಸಬೇಕು? ಹೇಗೆ ನಮಗೆ ರಾಜ್ಯ ದೊರಕೀತು ಎಂದು ಧರ್ಮರಾಜನು ಭಗವಂತನನ್ನು ಕೇಳಲು ಶ್ರೀ ಕೃಷ್ಣ ಭಾದ್ರಪದ ಶುಕ್ಲ ಪಕ್ಷದ ಚತುರ್ಥಿಯಲ್ಲಿ ಅಥವಾ ಯಾವ ದಿನದಲ್ಲಿ ಭಕ್ತಿ ಹುಟ್ಟುತ್ತದೋ ಆಗ ಆ ದಿನದಲ್ಲಿ ಗಣಪತಿಯನ್ನು ಪೂಜಿಸಲು ಸೂಚಿಸಿದನು. ಆದುದರಿಂದ ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ, ಸಡಗರದಿಂದ ಅಂದು ಆಚರಿಸುತ್ತಾರೆ ಅದು ಗಣಪತಿಯ ಜನ್ಮದಿನವೂ ಆಗಿರುತ್ತದೆ. ಈ ಪೂಜೆಯನ್ನು ಆರಂಭಿಸುವ ಮೊದಲು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಉಪವಾಸದಿಂದ ಇದ್ದು, ಸ್ನಾನ ಮಾಡಿ ನಿರ್ಮಲ ಚಿತ್ತರಾಗಿ ಶುದ್ಧವಾದ ಬಟ್ಟೆಯನ್ನು ಧರಿಸಿ, ದಂಪತಿಗಳು ಚಿನ್ನ ಅಥವಾ ಬೆಳ್ಳಿಯ ಗಣಪತಿ ಪ್ರತಿಮೆಗಳನ್ನು ಮಾಡಿಸಿ ಅಥವಾ ಮೃಣ್ಮಯ ವಾದ ವಿಗ್ರಹಗಳನ್ನು ನಿರ್ಮಿಸಿ ಪೂಜಿಸಬೇಕು ಅಥವಾ ರಂಗೋಲಿಯಲ್ಲಿ ಅಷ್ಟದಳ ಪದ್ಮವನ್ನು ಬರೆದು ತಟ್ಟೆಯಲ್ಲಿ ಧಾನ್ಯದ ಮೇಲೆ ಕಲಶ ಸ್ಥಾಪನೆ ಮಾಡಿ, ಗಣಪತಿಯನ್ನು ಆವಾಹಿಸಿ, ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಿ, ವಿವಿಧ ಜಾತಿಯ ಪತ್ರೆಗಳು ಹಾಗೂ ಹೂಗಳಿಂದ ಕಲೊ³àಕ್ತ ಪೂಜೆ ಮಾಡಿಸಬೇಕು. 21 ನಾಮಗಳಿಂದ ಗರಿಕೆಯಿಂದ ಅರ್ಚನೆ ಮಾಡಿಸಬೇಕು. ವಿವಿಧ ಜಾತಿಯ ಹಣ್ಣುಗಳನ್ನು 21ಮೋದಕ­ಗಳನ್ನು ಮಾಡಿಸಿ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ದಾನವನ್ನು ನೀಡಿ ಭೋಜನ ಬಡಿಸಬೇಕು.

ಅಧ್ಯಾತ್ಮದಲ್ಲಿ ಪ್ರಪಂಚದ ಮೂಲವಾದ ಸಂಖ್ಯೆ 25 ಪಂಚವಿಧ ಅಂತಃಕರಣಗಳು ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು ಪಂಚ ತನ್ಮಾತ್ರಗಳು (ಗುಣ ಗಳು): ಪಂಚ ಮಹಾಭೂತಗಳು ಹೀಗೆ 25 ರಲ್ಲಿ 21ನೆಯ ಆಕಾಶಕ್ಕೆ ಅಧಿಪತಿ ಗಣಪತಿ. ಅವನು ಆಕಾಶ ತತ್ತ್ವಕ್ಕೆ ಅಭಿಮಾನಿ ದೇವತೆ, ಆಕಾಶದ ಗುಣ ಶಬ್ದ ವಿದ್ಯಾಭಿಮಾನಿ ದೇವತೆಯೂ ಹೌದು. ಹಾಗಾಗಿ ಅವನಿಗೆ 21 ಸಂಖ್ಯೆ ಪ್ರಿಯವಾಗಿದೆ. 21 ಮೋದಕ, 21 ಪತ್ರೆ, 21 ಹೂಗಳು, 21 ಗರಿಕೆಗಳು ಇತ್ಯಾದಿ.

ಗಣಪತಿಯ ಆರಾಧನೆಯಿಂದ ಧರ್ಮರಾಜನು ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆದನು. ಗಣ ಪತಿಯನ್ನು ಆರಾಧಿಸದ ಕೌರವೇಂದ್ರನು ಸಹೋದರ ರೊಂದಿಗೆ ನಾಶ ಹೊಂದಿದನು. ಮಹಾರುದ್ರನು ತ್ರಿಪುರ ಸಂಹಾರಕ್ಕಾಗಿ, ಶ್ರೀ ರಾಮನು ಸೀತಾನ್ವೇಷಣೆಗಾಗಿ, ಸೀತಾ ದರ್ಶನಕ್ಕಾಗಿ ಹನುಮಂತನು, ಗಂಗೆಯನ್ನು ಭೂಮಿಗೆ ತರಿಸಲು ಭಗೀರಥನು, ಅಮೃತವನ್ನು ಪಡೆಯಲು ಪಕ್ಷಿ ರಾಜನಾದ ಗರುಡನು, ದಮಯಂತಿಯು ನಳ ಮಹಾ ರಾಜನನ್ನು ಪಡೆಯಲು, ಶ್ರೀಕೃಷ್ಣನು ಜಾಂಬವತಿಯನ್ನು, ಸ್ಯಮಂತಕ ಮಣಿಯನ್ನು ಪಡೆದು ತನ್ನ ಮೇಲಿನ ಅಪವಾದ ವನ್ನು ಕಳೆದುಕೊಂಡನು. ವೃತ್ತಾಸುರನ ಸಂಹಾರಕ್ಕಾಗಿ ಇಂದ್ರನು ಗಣಪತಿಯನ್ನು ಪೂಜಿಸಿದನು.

ಗಣಪತಿಯ ಆರಾಧನೆಯಿಂದ ಸಜ್ಜನರು ತಮ್ಮ ಕಾರ್ಯ ಗಳಲ್ಲಿ ಇಷ್ಟಾರ್ಥಸಿದ್ಧಿಯಾಗಿ ಯಶಸ್ಸನ್ನು ಕಾಣು ತ್ತಾರೆ. ದುರ್ಜನರ ಕಾರ್ಯಗಳಿಗೆ ವಿಘ್ನಗಳಿಂದ ತಡೆ ಯುಂಟಾಗುತ್ತದೆ. ಆದುದರಿಂದ ಗಣಪತಿಯು ವಿಘ್ನಕಾರಕನೂ, ವಿಘ್ನನಾಶಕನೂ ಆಗಿದ್ದಾನೆ. ಲೋಕದ ಜನತೆ  ದೇವತಾರಾಧನೆಯಿಂದ ಆಯುರಾರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಪಡೆಯುವಂತಾಗಲಿ.

 

-ಕೆ. ಸೂರ್ಯನಾರಾಯಣ ಉಪಾಧ್ಯಾಯ

ಧರ್ಮದರ್ಶಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಸಿ  

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next