Advertisement

ಸಂಭ್ರಮ, ಶ್ರದ್ಧೆ, ಭಕ್ತಿ, ಶಾಂತಿ, ಸೌಹಾರ್ದತೆಯ ಸಮ್ಮಿಲನ ಇದು ಬೆಂಗಳೂರಿನ ರಂಜಾನ್‌

09:11 AM May 21, 2019 | Lakshmi GovindaRaj |

ರಂಜಾನ್‌ ಎಂದರೆ ಬೆಂಗಳೂರಿನ ಪಾಲಿಗೆ ಊರ ಹಬ್ಬ. ಇಲ್ಲಿ ಜಾತಿ, ಧರ್ಮದ ಮೇರೆ ಮೀರಿ ಸಂಭ್ರಮ ಕಾಣಸಿಗುತ್ತದೆ. ಧರ್ಮದ ಮುಖ ನೋಡದೆ ದಾನ ಕೊಡಲಾಗುತ್ತದೆ. ಸ್ನೇಹ, ಶಾಂತಿ, ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದತೆಯ ಸಮ್ಮಿಲನವಾಗಿ ಇಲ್ಲಿ ರಂಜಾನ್‌ ಆಚರಿಸಲಾಗುತ್ತದೆ. ಇದಿಷ್ಟೇ ಅಲ್ಲ, ಉದ್ಯಾನನಗರಿಯ ರಂಜಾನ್‌ ಆಚರಣೆ ಹತ್ತು ಹಲವು ವಿಶಿಷ್ಟತೆಗಳನ್ನು ಒಳಗೊಂಡಿದೆ. ಅವೇನು ಎಂಬ ವಿವರ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ.

Advertisement

ಬೆಂಗಳೂರಿನಲ್ಲಿ ರಂಜಾನ್‌ ಅಂದಾಕ್ಷಣ ಶಿವಾಜಿನಗರದ ದಮ್‌ ಬಿರಿಯಾನಿ ಮತ್ತು ಸಮೋಸ, ರಸೆಲ್‌ ಮಾರ್ಕೆಟ್‌ನ ಖರ್ಜೂರ, ಕಮರ್ಶಿಯಲ್‌ ಸ್ಟ್ರೀಟ್‌ನ ಬಟ್ಟೆ ಇವುಗಳಷ್ಟೇ ನೆನಪಿಗೆ ಬರುತ್ತವೆ. ಆದರೆ, ಬೆಂಗಳೂರಿನ ರಂಜಾನ್‌ ಅದರಾಚೆಗೂ ಹಬ್ಬಿಕೊಂಡಿದೆ. ಇದರಲ್ಲಿ ಸಂಭ್ರಮ-ಸಡಗರದ ಜತೆಗೆ ಶ್ರದ್ಧೆ ಮತ್ತು ಭಕ್ತಿಯ ಸಮ್ಮಿಲನವಿದೆ, ಶಾಂತಿ ಮತ್ತು ಸೌಹಾರ್ದತೆಯ ನಿದರ್ಶನಗಳು ಕಾಣ ಸಿಗುತ್ತವೆ. ಬಡವರಿಗೆ ಸಹಾಯ ಮಾಡುವ, ಇತರರೊಂದಿಗೆ ಸಹಾನುಭೂತಿ ವ್ಯಕ್ತಪಡಿಸುವ ಉದಾತ್ತ ಮಾದರಿಗಳಿಗೆ ಬೆಂಗಳೂರಿನ ರಂಜಾನ್‌ ಸಾಕ್ಷಿಯಾಗುತ್ತದೆ. ಒಟ್ಟಿನಲ್ಲಿ ತಿಂಗಳ ಮಟ್ಟಿಗೆ “ಊರ ಹಬ್ಬದ’ ವಾತಾವರಣ ನೋಡಲು ಸಿಗುತ್ತದೆ. ಇದಲ್ಲದೇ ಆಗರ್ಭ ಶ್ರೀಮಂತರ ವೈಭೋಗದ ರಂಜಾನ್‌ ಒಂದು ಕಡೆಯಾದರೆ, ಕಡು ಬಡವರ ಸಂಕಷ್ಟದ ರಂಜಾನ್‌ ಮತ್ತೂಂದಡೆ.

ಈ ಎರಡೂ ವಿರೋಧಾಭಾಸಗಳ ರಂಜಾನ್‌ ಬೆಂಗಳೂರಲ್ಲಿ ಕಾಣ ಸಿಗುತ್ತದೆ. ಫ್ರೆಜರ್‌ಟೌನ್‌, ಬೆನ್ಸನ್‌ಟೌನ್‌, ಶಿವಾಜಿನಗರ, ಆರ್‌.ಟಿ.ನಗರ, ಶಾಂತಿನಗರ, ಬಿಟಿಎಂ ಲೇಔಟ್‌, ಜಯನಗರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಬಸವನಗುಡಿ ಮತ್ತಿತರ ಕಡೆ ಶ್ರೀಮಂತಿಕೆಯ ವೈಭವದ ರಂಜಾನ್‌ ಕಂಡು ಬಂದರೆ, ಇದೇ ಪ್ರದೇಶಗಳ ಬಡವರು ಹೆಚ್ಚಾಗಿರುವ ಕೆಲವು ಜನವಸತಿ ಪ್ರದೇಶಗಳು ಸೇರಿದಂತೆ ಶಿವಾಜಿನಗರದ ಕೆಲವು ಭಾಗಗಳು, ಮೈಸೂರು ರಸ್ತೆ, ಟ್ಯಾನರಿ ರಸ್ತೆ, ಬಿಸ್ಮಿಲ್ಲಾನಗರ, ನೀಲಸಂದ್ರ, ಗುರಪ್ಪನಪಾಳ್ಯ, ತಿಲಕ್‌ನಗರ, ಇಲಿಯಾಸ್‌ ನಗರ, ಮಿನ್ಹಾಜ್‌ನಗರ, ಗೋರಿಪಾಳ್ಯ, ಕೆ.ಆರ್‌.ಮಾರ್ಕೆಟ್‌, ಕಲಾಸಿಪಾಳ್ಯ, ಆವಲಹಳ್ಳಿ ಮತ್ತಿತರ ಕಡೆ ಬಹುಪಾಲು ಜನ ಕಷ್ಟದಲ್ಲಿ ರಂಜಾನ್‌ ಆಚರಿಸುತ್ತಿರುವುದು ಕಾಣಬಹುದು.

ಎಥ್ನಿಕ್‌ ಟಚ್‌, ಮಾಡರ್ನ್ ಟ್ರೆಂಡ್‌: ಈ ಬಾರಿಯ ರಂಜಾನ್‌ ಹಬ್ಬದ ಉಡುಗೆ ತೊಡುಗೆಗಳಲ್ಲಿ ಎಥ್ನಿಕ್‌ ಟಚ್‌ ಹಾಗೂ ಮಾಡರ್ನ್ ಟ್ರೆಂಡ್‌ ಎರಡೂ ಒಟ್ಟೊಟ್ಟಿಗೆ ಕಾಣುತ್ತಿವೆ. ರಂಜಾನ್‌ ಬಟ್ಟೆ ಖರೀದಿಗೆ ಕಮರ್ಷಿಯಲ್‌ ಸ್ಟ್ರೀಟ್‌ ಗ್ರಾಹಕರನ್ನು ಕೈಬಿಸಿ ಕರೆಯುತ್ತಿದೆ. ಹೆಣ್ಣು ಮಕ್ಕಳ ಆಧುನಿಕ ಫ್ಯಾಷನ್‌ನ ಶರಾರಾ, ಘಾಗ್ರಾ, ಲಾಂಗ್‌ ಕಟ್‌, ಗೌನ್‌, ಫ‌ರಾಕ್‌, ನೆಟ್‌ ಫ್ರಾಕ್‌ ಜತೆಗೆ ಸಾಂಪ್ರದಾಯಿಕ ಸೆಲ್ವಾರ್‌-ಕಮೀಜ್‌ ಮತ್ತು ಗಂಡು ಮಕ್ಕಳ ಅಫ್ಘಾನಿ ಸೂಟ್‌, ಜುಬಾr ಶೇರ್ವಾನಿ ಈ ಬಾರಿಯ ಪ್ರಮುಖ ಆಕರ್ಷಣೆ. ಉಳಿದಂತೆ ಜುಬ್ಟಾ-ಕುರ್ತಾ, ಪ್ಯಾಂಟ್‌-ಶರ್ಟ್‌ ವ್ಯಾಪಾರವೂ ಜೊರು ನಡೆದಿದೆ. ಮಾರ್ಕೆಟ್‌ನಲ್ಲಿ 500ರಿಂದ 50 ಸಾವಿರ ರೂ.ವರೆಗಿನ ಡ್ರೆಸ್‌ಗಳು ಸಿಗುತ್ತವೆ. ಕೊಳ್ಳುವವರ ಅಭಿರುಚಿಗೆ ಮತ್ತು ಜೇಬಿನ ತೂಕಕ್ಕೆ ತಕ್ಕಂತೆ ಬಟ್ಟೆಗಳು ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಸಿಗುತ್ತವೆ. ದೆಹಲಿ, ಗುಜರಾತ್‌, ಸೂರತ್‌, ಕಾನ್ಪುರ, ಬನಾರಸ್‌ನಿಂದ ಇಲ್ಲಿಗೆ ಬಟ್ಟೆಗಳು ಬರುತ್ತವೆ. ಈ ವಾರದಿಂದ ರಂಜಾನ್‌ ವ್ಯಾಪಾರ ಇನ್ನಷ್ಟು ಜೊರಾಗಲಿದೆ ಎಂದು ಗುಲನ್‌ ಬಟ್ಟೆ ಅಂಗಡಿ ಮಾಲೀಕ ಚಾಂದ್‌ ಪಾಷಾ ಹೇಳುತ್ತಾರೆ.

Advertisement

ಶಾಹಿ ತುಕಡಾ-ಹೈದರಾಬಾದಿ ಹಲೀಮ್‌: ಖಾದ್ಯ ಪ್ರೀಯರಿಗೆ ರಂಜಾನ್‌ ಅಂದರೆ ಬಲು ಇಷ್ಟ. ಶಿವಾಜಿನಗರ, ಫ್ರೆಜರ್‌ಟೌನ್‌, ಟ್ಯಾನರಿ ರಸ್ತೆ, ಕೆ.ಆರ್‌. ಮಾರ್ಕೆಟ್‌, ಬನ್ನೇರುಘಟ್ಟ ರಸ್ತೆ, ಕೊರಮಂಗಲ ಮತ್ತಿತರ ಕಡೆ ರಂಜಾನ್‌ ತಿಂಗಳಲ್ಲಿ ಖಾದ್ಯ ಪ್ರಪಂಚವೇ ತೆರೆದುಕೊಂಡಿರುತ್ತದೆ. ಶಿವಾಜಿನಗರದ ಸಮೋಸ ಫ‌ುಲ್‌ ಫೇಮಸ್‌. ಜೊತೆಗೆ ಸಿಹಿ ಖಾದ್ಯಗಳಾದ ಅಫ್ಲಾತೂನ್‌, ಶಾಹಿ ತುಕಡಾ, ಖವಾ ನಾನ್‌, ಖುಬಾನಿ ಮಿಟ್ಟಾ, ಗಾಜರ್‌ ಕ ಹಲ್ವಾ, ಫಾಲುದಾ. ತಿನ್ನುಗರ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಧಮ್‌ ಬಿರಿಯಾನಿ ಜತೆಗೆ ಹೈದರಾಬಾದ್‌ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳಾದ ಮೊಗ್ಲೆ„ ಚಿಕನ್‌, ಪತ್ತರ್‌ ಗೋಷ್‌, ಚಿಕನ್‌ ಕಡಾಯಿ, ಇರಾನಿ ಚಿಕನ್‌, ಹೈದರಾಬಾದಿ ಹಲೀಮ್‌ಗಳು ರಂಜಾನ್‌ ಆಕರ್ಷಣೆಯಾಗಿರುತ್ತವೆ.

ಮಸೀದಿ ದರ್ಶನ: ಮಸೀದಿ ಮತ್ತು ಮುಸ್ಲಿಮರ ಬಗೆಗಿನ ಅಪನಂಬಿಕೆಗಳನ್ನು ದೂರ ಮಾಡಲು ಹಾಗೂ ಸೌಹಾರ್ದತೆ-ಸಹಬಾಳ್ವೆಯ ಸಂದೇಶ ಸಾರುವ ಉದ್ದೇಶದಿಂದ ನಗರದ ಅನೇಕ ಸಂಘ-ಸಂಸ್ಥೆಗಳಿಂದ ವತಿಯಿಂದ ಹಾಗೂ ಕೆಲವು ಕಡೆ ಮಸೀದಿಗಳಲ್ಲಿ ರಂಜಾನ್‌ ತಿಂಗಳಲ್ಲಿ ಬಹುಧರ್ಮಿಯರನ್ನೊಳಗೊಂಡ “ಸೌಹಾರ್ದ ಇಫ್ತಾರ್‌’ ಕೂಟಗಳನ್ನು ಏರ್ಪಡಿಸಲಾಗುತ್ತದೆ. ಅನೇಕ ಕಡೆ ಮಸೀದಿ ದರ್ಶನ ಕಾರ್ಯಕ್ರಮದ ಮೂಲಕ ಅನ್ಯ ಧರ್ಮಿಯರನ್ನು ಮಸೀದಿಗೆ ಕರೆಸಿ ಮುಸ್ಲಿಮರು ರಂಜಾನ್‌ ಆಚರಣೆ ಹೇಗೆ ಮಾಡುತ್ತಾರೆ ಎಂಬುದನ್ನು ತೋರಿಸಿಕೊಡಲಾಗುತ್ತದೆ. ಅದರಂತೆ ಈ ಬಾರಿ ಕೊರಮಂಗಲದ ಮಸ್ಜಿದೆ ಮಾಮೂರ್‌, ಡಿಕನ್‌ಸನ್‌ ರಸ್ತೆಯ ಮಸ್ಜಿದೆ ನೂರ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಆಲೋಚನೆಯಿದೆ ಎಂದು ಸಂಘಟಕ ತನ್ವೀರ್‌ ಅಹ್ಮದ್‌ ತಿಳಿಸಿದ್ದಾರೆ.

ಹ್ಯೂಮನ್‌ ವೆಲ್‌ಫೇರ್‌ ಫೌಂಡೇಷನ್‌ನ ಮಾನವೀಯ ಸೇವೆ: ರಂಜಾನ್‌ ಸಂಭ್ರಮದಲ್ಲಿ ಬಡವರೂ ಭಾಗಿಯಾಗಬೇಕು ಎಂಬ ಉದ್ದೇಶದಿಂದ “ಹ್ಯೂಮನ್‌ ವೆಲ್‌ಫೇರ್‌ ಫೌಂಡೇಷನ್‌’ ತನ್ನ “ವಿಷನ್‌-2026′ ಅಡಿಯಲ್ಲಿ ಪ್ರತಿ ವರ್ಷ ರಂಜಾನ್‌ ತಿಂಗಳಲ್ಲಿ ಬಡವರು, ನಿರ್ಗತಿಕರಿಗೆ “ಇಫ್ತಾರ್‌ ಕಿಟ್‌’ಗಳನ್ನು ವಿತರಿಸುತ್ತದೆ. ಅಕ್ಕಿ, ಬೇಳೆ, ರಾಗಿ, ಗೋಧಿ, ಜೋಳ, ಅಡುಗೆ ಎಣ್ಣೆ, ಖರ್ಜೂರ, ಶಾವಿಗೆ ಮತ್ತಿತರ ಪಡಿತರ ಪದಾರ್ಥಗಳನ್ನು ಒಳಗೊಂಡ ತಲಾ 2,800 ರೂ.ಗಳ ಕಿಟ್‌ ಅನ್ನು ಒಂದು ಕುಟುಂಬಕ್ಕೆ ನೀಡಲಾಗುತ್ತದೆ. ಇದಲ್ಲದೇ ಐ ಕೇರ್‌ ಫೌಂಡೇಷನ್‌, ಅಂಜುಮನ್‌ ಖುದ್ದಾಮುಲ್‌ ಮುಸ್ಲಿಮೀನ್‌, ಜಾಮಿಯಾ ಬಿಲಾಲ್‌, ಬಝೆ ನಿಸ್ವಾ, ಒನ್‌ ನೇಷನ್‌ 1001 ಸ್ಟೈಲ್ಸ್‌, ಸೇರಿದಂತೆ ನಗರದ ನೂರಾರು ಸ್ವಯಂಸೇವಾ ಸಂಸ್ಥೆಗಳು ಈ ರೀತಿಯ ರಂಜಾನ್‌ ಕಿಟ್‌ಗಳನ್ನು ವಿತರಿಸುತ್ತವೆ. ಕೆಲವು ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು, ಕಾರ್ಪೊರೇಟರ್‌ಗಳು, ಸ್ಥಳೀಯ ರಾಜಕೀಯ ಮುಖಂಡರು ಬಡವರಿಗೆ ಸಹಾಯಹಸ್ತ ಚಾಚುತ್ತಾರೆ. ಯಾವುದೇ ಬಡ ಕುಟುಂಬ ರಂಜಾನ್‌ ಸಂಭ್ರಮದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಇಫ್ತಾರ್‌ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎಂದು ಹ್ಯೂಮನ್‌ ವೆಲ್‌ಫೇರ್‌ ಫೌಂಡೇಷನ್‌ನ ಸಂಯೋಜಕ ಸೈಯದ್‌ ಇರ್ಫಾನ್‌ ಹೇಳುತ್ತಾರೆ.

ವಲಸಿಗರಿಗೆ “ಸಹರಿ’ ವ್ಯವಸ್ಥೆ: ರಾಮಮೂರ್ತಿನಗರದ ಕೌದೇನಹಳ್ಳಿಯ ಮೆಕ್ಕಾ ಮಸೀದಿ ವತಿಯಿಂದ ಕಳೆದ 10 ವರ್ಷಗಳಿಂದ ಬೆಂಗಳೂರಿಗೆ ಹೊರಗಿನಿಂದ ಬಂದವರಿಗಾಗಿ ಸಹರಿ (ಉಪವಾಸ ಆರಂಭಿಸುವ) ಮತ್ತು ಇಫ್ತಾರ್‌ (ಉಪವಾಸ ಮುಕ್ತಾಯಗೊಳಿಸುವ) ವ್ಯವಸ್ಥೆ ಮಾಡಲಾಗುತ್ತಿದೆ. ವಿಶೇಷವಾಗಿ ಉದ್ಯೋಗ ಅರಿಸಿ ಉತ್ತರ ಭಾರತದಿಂದ, ನೆರೆಯ ತಮಿಳುನಾಡು ಮತ್ತು ರಾಜ್ಯದ ಉತ್ತರ ಕರ್ನಾಟಕ ಭಾಗದಿಂದ ಬಂದ ಹೆಚ್ಚು ಜನರು ಈ ಪ್ರದೇಶದಲ್ಲಿದ್ದಾರೆ. ರಂಜಾನ್‌ ತಿಂಗಳಲ್ಲಿ ಅವರಿಗೆ ಸಹರಿ ಮತ್ತು ಇಫ್ತಾರ್‌ ವ್ಯವಸ್ಥೆ ಇರುವುದಿಲ್ಲ. ಅವರ ಅನುಕೂಲಕ್ಕಾಗಿ ಮಸೀದಿ ಕಮಿಟಿ ವತಿಯಿಂದ ಇಫ್ತಾರ್‌ ವೇಳೆ ಹಣ್ಣು-ಹಂಪಲು, ಗಂಜಿ ಹಾಗೂ ಸಹರಿ ವೇಳೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಈ ರಂಜಾನ್‌ ತಿಂಗಳಲ್ಲಿ ಪ್ರತಿ ದಿನ ನೂರಾರು ಜನ ಇದರ ಉಪಯೋಗ ಪಡೆದುಕೊಳ್ಳುತ್ತಾರೆ ಎಂದು ಮೆಕ್ಕಾ ಮಸೀದಿ ಟ್ರಸ್ಟ್‌ನ ಪದಾಧಿಕಾರಿ ಅಮ್ಜದ್‌ ಖಾನ್‌ ಹೇಳುತ್ತಾರೆ.

ಪ್ರಪಂಚದ ಖರ್ಜೂರಗಳು ಬೆಂಗಳೂರಲ್ಲಿ: ಖರ್ಜೂರ ತಿಂದು ಇಫ್ತಾರ್‌ (ಉಪವಾಸ ಪೂರ್ಣ) ಮಾಡುವುದು ಮುಸ್ಲಿಮರ ಧಾರ್ಮಿಕ ಮತ್ತು ಭಾವನಾತ್ಮಕ ನಂಬಿಕೆ. ಖರ್ಜೂರ ಹಾಗೂ ಡ್ರೈಫ‌ೂಟ್‌ ಮಾರಾಟಕ್ಕೆ ರಸೆಲ್‌ ಮಾರ್ಕೆಟ್‌ನ “ಡೆಲಿಶಿಯೆಸ್‌’ ತುಂಬಾ ಫೇಮಸ್‌. ಪ್ರಪಂಚದ ವಿವಿಧೆಡೆಯ 300 ಬಗೆಯ ಖರ್ಜೂರಗಳು ರಂಜಾನ್‌ ವೇಳೆ ಬೆಂಗಳೂರಿನಲ್ಲಿ ಸಿಗುತ್ತವೆ. ಈ ಪೈಕಿ ಬೆಸ್ಟ್‌ ಆಫ್ ದಿ ಬೆಸ್ಟ್‌ 64 ಬಗೆಯ ಖರ್ಜೂರಗಳು ಒಂದೇ ಸೂರಿನಡಿ “ಡೆಲಿಶಿಯೆಸ್‌’ ನಲ್ಲಿ ಸಿಗುತ್ತವೆ. ಈ ಬಾರಿ 6 ದೇಶಗಳಿಂದ 4 ಬಗೆಯ ಖರ್ಜೂರಗಳು ಹೊಸದಾಗಿ ಬಂದಿವೆ. ಸೌದಿ ಅರೇಬಿಯಾ, ಜೋರ್ಡಾನ್‌, ಮಧ್ಯ ಏಷ್ಯಾ, ಟುನಿಶಿಯಾ, ಸೌತ್‌ ಆಫ್ರಿಕಾದ ಖರ್ಜೂರಗಳು ವಿಶೇಷ ಆಕರ್ಷಣೆ. ಅಜ್ವಾ, ಮಬ್ರೂಮ್‌, ಕಲಿಠ, ಸುಗಾಯಿ, ಸುಕ್ರಿ, ಅಂಬರ್‌ ಇವು ನಮ್ಮಲ್ಲಿ ಸಿಗುವ ಖರ್ಜೂರಗಳ ವಿಧಗಳಲ್ಲಿ ಪ್ರಮುಖವಾದವು. ಕೆ.ಜಿ.ಗೆ 100ರಿಂದ 4,500 ರೂ.ವರೆಗೆ ಬೆಲೆ ಇದೆ. ರಂಜಾನ್‌ ವ್ಯಾಪಾರ ಚೆನ್ನಾಗಿದೆ ಎಂದು ಡೆಲಿಶಿಯಸ್‌ ಮಳಿಗೆ ಮಾಲೀಕ ಮಹ್ಮದ್‌ ಇದ್ರೀಸ್‌ ಚೌದ್ರಿ ಹೇಳುತ್ತಾರೆ.

ರಂಜಾನ್‌: ಆತ್ಮಶುದ್ಧಿ-ದೇವ ಸಂಪ್ರೀತಿ: ಮನುಕುಲದ ಮಾರ್ಗದರ್ಶನಕ್ಕಾಗಿ ದೇವರು ಪವಿತ್ರ ಕುರಾನ್‌ ಗ್ರಂಥ ಭೂಲೋಕಕ್ಕೆ ಅವತರಿಣಿಸಿದ್ದು ರಂಜಾನ್‌ ತಿಂಗಳಲ್ಲಿ. ದೇವನ ಈ ಅನುಗ್ರಕ್ಕೆ ಕೃತಜ್ಞತೆ ಸಲ್ಲಿಸಲು ಮುಸ್ಲಿಮರು ರಂಜಾನ್‌ ತಿಂಗಳಲ್ಲಿ 30 ದಿನಗಳ ಕಾಲ ಉಪವಾಸ ಆಚರಿಸುತ್ತಾರೆ. ಆತ್ಮಶುದ್ಧಿ ಮತ್ತು ದೇವ ಸಂಪ್ರೀತಿಗೆ ಪಾತ್ರವಾಗಲು ಅತ್ಯಂತ ಪ್ರಶಸ್ತ ತಿಂಗಳು ಇದಾಗಿದೆ. ಇದಲ್ಲದೇ ಪ್ರತಿಯೊಬ್ಬ ಶ್ರೀಮಂತ ತನ್ನ ಸಂಪತ್ತಿನಲ್ಲಿ ಬಡವರಿಗೆ ಪಾಲು ಕೊಡುವ “ಜಕಾತ್‌’ (ಕಡ್ಡಾಯ ದಾನ) ಸಹ ಈ ತಿಂಗಳಲ್ಲಿ ನೀಡಲಾಗುತ್ತದೆ. ಸಹನೆ, ಸಹಬಾಳ್ವೆ, ಸಹಾನುಭೂತಿ, ಮಾನವೀಯತೆ, ಉದಾರತೆ ರಂಜಾನ್‌ ತಿಂಗಳು ನಮಗೆ ಕಲಿಸಿಕೊಡುವ ಜೀವನ ಪಾಠಗಳು.

ಭಾವೈಕ್ಯತೆಯ ಇಫ್ತಾರ್‌ ಕೂಟ: ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಹೆಗ್ಗುರುತು. ಭಾವೈಕತ್ಯೆಯ ಸಂದೇಶ ಸಾರಲು ಸಿಐಎಸ್‌ ವೆಲ್‌ಫೇರ್‌ ಟ್ರಸ್ಟ್‌ ವತಿಯಿಂದ ಭಾನುವಾರ ಇನ್‌ಫೆಂಟ್ರಿ ರಸ್ತೆಯ ವೈಟ್‌ ಮ್ಯಾನರ್‌ನಲ್ಲಿ ಬಹುಧರ್ಮಿಯರ ಇಫ್ತಾರ್‌ ಕೂಟ ಏರ್ಪಡಿಸಲಾಗಿತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್‌, ಜೈನ ಮತ್ತು ಪಾರ್ಸಿ ಮತಗಳ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಈ ಬಹುಧರ್ಮಿಯರ ಇಫ್ತಾರ್‌ ಕೂಟದಲ್ಲಿ ಪಾಲ್ಗೊಂಡು ಏಕತೆಯ ಸಂದೇಶ ಸಾರಿದರು. ವಿವಿಧ ಧರ್ಮಗಳ ಶ್ರವಣದೋಷವುಳ್ಳ ಜನರು ಇಫ್ತಾರ್‌ ಕೂಟದ ವಿಶೇಷ ಆಕರ್ಷಣೆಯಾಗಿದ್ದರು.

* ರಫೀಕ್ ಅಹ್ಮದ್

Advertisement

Udayavani is now on Telegram. Click here to join our channel and stay updated with the latest news.

Next