ವಿಜಯಪುರ : ನಗರದ ಬಸವೇಶ್ವರ ವೃತ್ತದಲ್ಲಿರುವ ಬಿ ಎಸ್ ಎನ್ ಎಲ್ ಕಚೇರಿ ಮೇಲೆ ಶುಕ್ರವಾರ ರಾತ್ರಿ ದೆಹಲಿಯಿಂದ ಬಂದಿರುವ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದೆಹಲಿ ಸಿಬಿಐ ಕಚೇರಿಯ ಐದು ಅಧಿಕಾರಿಗಳ ತಂಡ ವಿಜಯಪುರ ನಗರದಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದೆ ಎಂದು ಪ್ರಾಥಮಿಕ ಹಂತದ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೂ ಫೈಬರ್ ಕೇಬಲ್ ಸಂಪರ್ಕ ನೀಡಬೇಕಿದ್ದ ವಿಜಯಪುರ ಬಿಎಸ್ಎನ್ಎಲ್ ಅಧಿಕಾರಿಗಳು, ಕೆಲವೇ ಕೆಲವು ಗ್ರಾ.ಪಂ.ಗಳಿಗೆ ಮಾತ್ರ ಸಂಪರ್ಕ ನೀಡಿ, ಬಹುತೇಕ ಗ್ರಾ.ಪಂ. ಗಳಿಗೆ ಪೈಬರ್ ಕೇಬಲ್ ಸಂಪರ್ಕ ಕಲ್ಪಿಸದೇ ಪೂರ್ಣ ಕೆಲಸ ಮುಗಿಸಿದ್ದಾಗಿ ಬಿಲ್ ಪಾವತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಫೈಬರ್ ಕೇಬಲ್ ಅಳವಡಿಕೆಯ ಗುತ್ತಿಗೆದಾರರಿಂದ ಹಣ ಪಡೆದು ಅಧಿಕಾರಿಗಳು ಭಾರಿ ಪ್ರಮಾಣದ ಅಕ್ರಮ ಎಸಗಿದ ಆರೋಪ ಕೇಳಿ ಬಂದಿದೆ. ಈ ಆರೋಪದ ತನಿಖೆಗೆ ಇಳಿದಿರುವ ಸಿಬಿಐ ಅಧಿಕಾರಿಗಳ ತಂಡ ಶುಕ್ರವಾರ ರಾತ್ರಿ ಬಿಎಸ್ಎನ್ಎಲ್ ಕಛೇರಿ ಮೇಲೆ ದಾಳಿ ನಡೆಸಿದೆ.
ಬಿ ಎಸ್ ಎನ್ ಎಲ್ ಕೇಂದ್ರ ಕಚೇರಿಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದ್ದು, ಕಛೇರಿಯ ಬಾಗಿಲಿಗೂ ಕೀಲಿ ಹಾಕಿರುವ ಸಿಬಿಐ ಅಧಿಕಾರಿಗಳು, ಎರಡನೇ ಮಹಡಿಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಮಹತ್ವದ ದಾಖಲೆಗಳ ಶೋಧದಲ್ಲೂ ತೊಡಗಿದ್ದಾರೆ.
ಆದರೆ ಈ ಕುರಿತು ಮಾಧ್ಯಮಗಳಿಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿದ ಸಿಬಿಐ ತಂಡ, ಬಿಎಸ್ಎನ್ಎಲ್ ಕಛೇರಿ ಪ್ರವೇಶಕ್ಕೆ ನಿರ್ಬಂಧ ಹೇರಿದೆ.