Advertisement

PM Modi ಜೊತೆ ಚರ್ಚೆಗೆ ಬಿಜೆಪಿ ಮುಖಂಡರು ಸಮಯ ನಿಗದಿಪಡಿಸಲಿ: ಎಂ.ಬಿ ಪಾಟೀಲ ಆಗ್ರಹ

02:33 PM Sep 19, 2023 | Team Udayavani |

ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಬಿಜೆಪಿಯವರಿಗೆ ತಮ್ಮದೇ ಪ್ರಧಾನಮಂತ್ರಿಯನ್ನು ಭೇಟಿ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಜಲಸಂಪನ್ಮೂಲ ಸಚಿವರೂ ಆದ ಕೈಗಾರಿಕಾ ಸಚಿವ ಎಂ‌‌.ಬಿ. ಪಾಟೀಲ ಮಂಗಳವಾರ ಕೇಳಿದ್ದಾರೆ.

Advertisement

ಮಳೆಯ ತೀವ್ರ ಕೊರತೆಯಿಂದಾಗಿ ನಮ್ಮ ರಾಜ್ಯದಲ್ಲೇ ಕುಡಿಯುವ ನೀರಿಲ್ಲ. ಅದರಲ್ಲೂ, ಬೆಂಗಳೂರಿಗೆ ತುಂಬಾ ಸಮಸ್ಯೆಯಾಗುವ ಪರಿಸ್ಥಿತಿ ಇದೆ. ಹೀಗಿರುವಾಗ, ತಮಿಳುನಾಡಿಗೆ ನೀರು ಹರಿಸಬೇಕು ಎಂಬ ಆದೇಶ ಪಾಲಿಸಲು ಅಸಾಧ್ಯವಾಗುತ್ತದೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಈಗಾಗಲೇ ಸರ್ವಪಕ್ಷ ಸಭೆ ನಡೆಸಿದ್ದಾರೆ. ಚರ್ಚೆಗಾಗಿ ಪ್ರಧಾನಮಂತ್ರಿಯವರ ಸಮಯ ಕೇಳಿದ್ದರೂ ಅವರಿನ್ನೂ ಸಮಯ ಕೊಟ್ಟಿಲ್ಲ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಬಿಜೆಪಿಯ ಇತರ ಸಂಸದರು ಇವರೆಲ್ಲಾ ಸೇರಿ ಪ್ರಧಾನಿಯವರ ಜೊತೆ ಚರ್ಚೆಗೆ ಸಮಯ ನಿಗದಿಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ನಮ್ಮ ಪರಿಸ್ಥಿತಿಯನ್ನು ಕೇಂದ್ರದ ಕಾನೂನು ಸಚಿವರಿಗೆ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು. ಕಾವೇರಿ ನೀರು ಹಂಚಿಕೆ ಸಂಬಂಧ ಸಂಕಷ್ಟ ಸಂದರ್ಭಕ್ಕೆ ಅನ್ವಯವಾಗುವ ಸೂತ್ರ ಇಲ್ಲದಿರುವುದು ತೊಡಕಾಗಿದೆ. ನೀರು ಹರಿಸಲು ಅಸಾಧ್ಯವಾದ ಪರಿಸ್ಥಿತಿ ಇರುವುದರಿಂದ ಸುಪ್ರೀಂಕೋರ್ಟ್ ಮೊರೆ ಹೋಗದೆ ಬೇರೆ ದಾರಿ ಇಲ್ಲ ಎಂದರು.

ನಾಡಿನ ನೆಲ, ಜಲದ ವಿಷಯಗಳು ಬಂದಾಗ ವಿಪಕ್ಷಗಳೂ ಸೇರಿದಂತೆ ನಾವೆಲ್ಲರೂ ಸೇರಿ ಸಂಘಟಿತ ಪ್ರಯತ್ನ ಮಾಡಬೇಕಾಗುತ್ತದೆ. ಈ ವಿಷಯದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ನುಡಿದರು.

Advertisement

ನೆಲ, ಜಲದ ವಿಷಯ ಬಂದಾಗ ತಮಿಳುನಾಡಿನವರು ಹೇಗೆ ಒಗ್ಗಟ್ಟಾಗಿ ಧ್ವನಿ ಎತ್ತುತ್ತಾರೋ ನಾವು ಕೂಡ ಅದೇ ತರಹ ಮಾಡಬೇಕು. ಆದರೆ ನಮ್ಮಲ್ಲಿ ಇದಕ್ಕೆ ಸಂಬಂಧಿಸಿದಂತೆ ಎಲ್ಲೋ ಸ್ವಲ್ಪ ಅಪವಾದ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ನೀರು ಹರಿಸುವುದನ್ನು ನಾವಾಗಿಯೇ ನಿಲ್ಲಿಸಿ ಕೋರ್ಟಿನ ಮುಂದೆ ಹೋದರೆ ಆಗ ಕೋರ್ಟು ಅದನ್ನು ಬೇರೆ ರೀತಿ ಭಾವಿಸುವುದು ಈ ಹಿಂದೆ ಹಲವಾರು ಸಲ ನಮ್ಮ ಅನುಭವಕ್ಕೆ ಬಂದಿದೆ. ಇಂತಹ ಸೂಕ್ಷ್ಮಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪಾಟೀಲ ವಿವರಿಸಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕಾದ ವಿಷಯವನ್ನು ಯಾರೂ ಹಗುರವಾಗಿ ತೆಗೆದುಕೊಂಡಿಲ್ಲ. ಜಲ ಸಂಪನ್ಮೂಲ ಸಚಿವರಾದ ಡಿಸಿಎಂ ಡಿ.ಕೆ ಶಿವಕುಮಾರ್ ಅವರಗಲೀ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲೀ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ನ್ಯಾಯಾಲಯದ ಮುಂದಕ್ಕೆ ಸ್ಪಷ್ಟವಾದ ಮಾಹಿತಿಯನ್ನು ಒದಗಿಸುವುದು ಮುಖ್ಯ. ಅದಕ್ಕಾಗಿ ಅಧಿಕಾರಿಗಳು ಸ್ಥಳಕ್ಕೆ ಹೋಗುತ್ತಾರೋ ಅಥವಾ ಆನ್ ಲೈನ್ ನಂತಹ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಾರೋ ಎನ್ನುವುದು ಮುಖ್ಯವಲ್ಲ. ನ್ಯಾಯಾಲಯಕ್ಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವುದಷ್ಟೇ ಮುಖ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next