Advertisement

ಬೆಳ್ತಂಗಡಿ ತಾಲೂಕಿನ 6 ಕಡೆಗಳಲ್ಲಿ ಕಾಳಜಿ ಕೇಂದ್ರ

09:24 AM May 29, 2022 | Team Udayavani |

ಬೆಳ್ತಂಗಡಿ: ತಾಲೂಕಿನಲ್ಲಿ ಮೂರು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹದ ಆಘಾತದಿಂದ ತಾಲೂಕು ಇನ್ನೂ ಹೊರ ಬಂದಿಲ್ಲ. ಈ ಸಾಲಿನ ಮುಂಗಾರು ಮಳೆ ಇನ್ನೇನು ಪ್ರಾರಂಭವಾಗಲಿದೆ. ಪ್ರಸ್ತುತ ಹವಾ ಮಾನ ವೈಪರೀತ್ಯದಿಂದ ಮಳೆಯೂ ಆಗುತ್ತಿರುವುದರಿಂದ ಹಿಂದಿನ ನೆರೆ ಪೀಡಿತ ಗ್ರಾಮಗಳನ್ನು ಆಧಾರವಾಗಿಸಿ ತಾಲೂಕಿನ 6 ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ತಾಲೂಕು ಆಡಳಿತ ಮುಂದಾಗಿದೆ.

Advertisement

ಮುನ್ನೆಚ್ಚರಿಕೆಯಾಗಿ ತಾಲೂಕು ಆಡಳಿತವು ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಇಂದಬೆಟ್ಟು, ಚಾರ್ಮಾಡಿ ಹಾಗೂ ಚಿಬಿದ್ರೆ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಮುಂದಾಗಿದ್ದು ಇದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದೆ. ನೆರೆ ಪೀಡಿತ ಗ್ರಾಮಕ್ಕೆ ಸಂಬಂಧಿಸಿದ ಜನರು ಆಯಾಯ ನೋಡೆಲ್‌ ಅಧಿಕಾರಿಗಳನ್ನು ಸಂಪರ್ಕಿಸಿ ಆಶ್ರಯ ಪಡೆಯಲು ಸಿದ್ಧತೆ ಕೈಗೊಳ್ಳಲಾಗಿದೆ.

ಸ್ಥಳ, ನೋಡೆಲ್‌ ಅಧಿಕಾರಿಗಳ ವಿವರ ಮಿತ್ತಬಾಗಿಲು ಗ್ರಾಮ

ಗಣೇಶ್‌ ನಗರದ ನಿವಾಸಿಗಳಿಗೆ ಮಿತ್ತಬಾಗಿಲು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ನೋಡೆಲ್‌ ಅಧಿಕಾರಿಯಾಗಿ ಪಂಚಾಯತ್‌ ರಾಜ್‌ ಉಪ ವಿಭಾಗದ ಎ.ಇ. ಹರ್ಷಿತ್‌ ಅವರನ್ನು ನೇಮಿಸಲಾಗಿದೆ ಸಂಪರ್ಕ ಸಂಖ್ಯೆ: 9480862433

ಕಡಿರುದ್ಯಾವರ ಗ್ರಾಮ

Advertisement

ಬೊಳ್ಳೂರು ಬೈಲು, ಉದ್ಯಾರ, ಕೊಯಮಜಲು, ನೂಜಿ ಪ್ರದೇಶದ ಮಂದಿಗೆ ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಕಜಕ್ಕೆ, ಮಲವಂತಿಗೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಕಡಿರುದ್ಯಾವರ ಕಾನರ್ಪದ ಮುಖ್ಯ ಶಿಕ್ಷಕಿ ಫಿಲೋಮಿನಾ ಅವರನ್ನು ನಿಯೋಜಿಸಲಾಗಿದೆ. ದೂರವಾಣಿ ಸಂಖ್ಯೆ: 9739719705.

ಮಲವಂತಿಗೆ ಗ್ರಾಮ

ಮಕ್ಕಿ, ಪರ್ಲ, ಇಳಿಯೂರುಕಂಡ, ಎಳನೀರು ಮಂದಿಗೆ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ದೇವನಾರಿ, ಇಂದಬೆಟ್ಟುವಿನಲ್ಲಿ ಕಾಳಜಿ ಕೇಂದ್ರಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಮಲವಂತಿಗೆ ಕಜಕ್ಕೆ ಶಾಲೆಯ ಮುಖ್ಯೋಪಾಧ್ಯಾಯ ಕುಮಾರಸ್ವಾಮಿ ಅವರನ್ನು ನೋಡೆಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ದೂರವಾಣಿ ಸಂಖ್ಯೆ: 9972747749.

ಇಂದಬೆಟ್ಟು ಗ್ರಾಮ

ನೇತ್ರಾವತಿ ನಗರದ ವಾಸಿಗಳು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ದೇವನಾರಿ, ಇಂದಬೆಟ್ಟು ಆಶ್ರಯ ಪಡೆಯಬಹುದಾಗಿದ್ದು, ಇಂದಬೆಟ್ಟುವಿನ ದೇವನಾರಿ ಶಾಲೆ ಮುಖ್ಯೋಪಾಧ್ಯಾಯ ಕಿಶೋರ್‌ ಅವರನ್ನು ನೇಮಿಸಲಾಗಿದೆ. ಸಂಪರ್ಕ ಸಂಖ್ಯೆ: 7259547798.

ಚಾರ್ಮಾಡಿ ಗ್ರಾಮ

ಹೊಸ್ಮಠ, ಕೊಳಂಬೆ, ಪರ್ಲಾಣಿ, ಕಾಟಾಜೆ, ಅಂತರ ಮಂದಿಗೆ ಹಾಗೂ ಚಿಬಿದ್ರೆಯ ಅನಾರು, ನಳಿಲು ಪ್ರದೇಶದ ಮಂದಿಗೆ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಚಾರ್ಮಾಡಿಯಲ್ಲಿ ಆಶ್ರಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಲ್ಲಿಗೆ ಲೋಕೋಪಯೋಗಿ ಇಲಾಖೆಯ ಎಇಇ ಶಿವಪ್ರಸಾದ್‌ ಅಜಿಲ ಅವರನ್ನು ನೇಮಿಸಲಾಗಿದ್ದು, ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 9448153223. ಈಗಾಗಲೇ ನಮೂದಿಸಿರುವ ಕಾಳಜಿ ಕೇಂದ್ರಗಳಲ್ಲಿ ತಲಾ 50ರಷ್ಟು ಮಂದಿಗೆ ಆಶ್ರಯ ಒದಗಿಸಲು ಸಿದ್ಧತೆ ಕೈಗೊಂಡಿದ್ದು, ಊಟ, ತಿಂಡಿ ಸಹಿತ ಅಗತ್ಯ ನೆರವಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ತಾಲೂಕು ಆಡಳಿತ ಒದಗಿಸಲಿದೆ. ಉಪತಹಶೀಲ್ದಾರ್‌ ರವಿ ಕುಮಾರ್‌ ಅವರನ್ನು ಉಸ್ತುವಾರಿ ನೋಡೆಲ್‌ ಅಧಿಕಾರಿಯಾಗಿಯೂ ನೇಮಿಸಲಾಗಿದೆ.

ಪರಿಶೀಲನೆ

ಈಗಾಗಲೇ ನೆರೆ ಆಶ್ರಿತ ಮಿತ್ತ ಬಾಗಿಲು, ಗಣೇಶ ನಗರಗಳಿಗೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಸಹಿತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮುನ್ನೆಚ್ಚರಿಕೆ ಕ್ರಮ

ಪ್ರವಾಹದ ವರ್ಷ 2018-2019ರಲ್ಲಿ ಒಟ್ಟು 420 ಹಾನಿ ಪ್ರಕರಣದಡಿ 60,30,265 ರೂ., 2020-21ರ ಪ್ರಾಕೃತಿಕ ವಿಕೋಪದಡಿ 209 ಪ್ರಕರಣದಡಿ 57,10,532 ರೂ. ಪರಿಹಾರ ನೀಡಲಾಗಿದೆ. 2021-22ರಲ್ಲಿ 273 ಹಾನಿ ಪ್ರಕರಣದಡಿ 1,12,05,146 ರೂ. ಅನುದಾನವನ್ನು ತಾಲೂಕು ಆಡಳಿತದಿಂದ ನೀಡಲಾಗಿದೆ. ಹೀಗಾಗಿ ಮುಂಗಾರು ಪೂರ್ವ ನೆರೆ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಾಗಿ ಕಾಳಜಿ ಕೇಂದ್ರ ತೆರೆಯಲು ಉದ್ದೇಶಿಸಿದೆ. ಮಹೇಶ್‌ ಜೆ., ತಹಶೀಲ್ದಾರ್‌, ಬೆಳ್ತಂಗಡಿ

ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next