Advertisement

ಆರೋಗ್ಯದ ಬಗ್ಗೆ ಕಾಳಜಿ ತೋರಿ

06:15 AM Mar 15, 2019 | Team Udayavani |

ಬೆಂಗಳೂರು: ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುವಂತೆ ಚಿತ್ರನಟ ಶಿವರಾಜ್‌ಕುಮಾರ್‌ ಜನತೆಯಲ್ಲಿ ಮನವಿ ಮಾಡಿದರು. ನಗರದ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಅಂಗವೂ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Advertisement

ಮೂತ್ರಪಿಂಡ ಕಾಯಿಲೆ ಬಗ್ಗೆ ಸಾಕಷ್ಟು ಜಾಗರುಕರಾಗಿರಬೇಕು. ಮೂತ್ರಪಿಂಡ ಚೆನ್ನಾಗಿ ಕೆಲಸ ಮಾಡಿದರೆ ಮಾತ್ರ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ. ಆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆರೋಗ್ಯದ ಬಗ್ಗೆ ನನಗೆ ಹೆಚ್ಚಿನ ಅರಿವಿಲ್ಲ. ಆದರೂ ಪುತ್ರಿ ಮತ್ತು ಅಳಿಯ ಇಬ್ಬರೂ ವೈದ್ಯರಾಗಿದ್ದು ಅವರ ಮೂಲಕ ಅಲ್ಪಮಟ್ಟಿನ ಆರೋಗ್ಯ ತಿಳಿವಳಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಸಾಕಷ್ಟು ಒಡನಾಟವಿದೆ: ರಾಮಯ್ಯ ಆಸ್ಪತ್ರೆಗೂ ನಮ್ಮ ಕುಟುಂಬಕ್ಕೂ ಸಾಕಷ್ಟು ಒಡನಾಟವಿದೆ. ಈ ಆಸ್ಪತ್ರೆಗೆ ಬಂದರೆ ಸುರಕ್ಷತಾ ಭಾವ ಉಂಟಾಗುತ್ತದೆ. ಅಪ್ಪಾಜಿ (ಡಾ.ರಾಜ್‌ಕುಮಾರ್‌), ಅಮ್ಮ ಹಾಗೂ ನಾನು ಕೂಡ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ರಾಮಯ್ಯ ಆಸ್ಪತ್ರೆ ಮತ್ತಷ್ಟು ಜನಸೇವೆಯನ್ನು ಮಾಡಲಿ ಎಂದು ಆಶಿಸಿದರು.

ರಾಮಯ್ಯ ಮೆಮೋರಿಯಲ್‌ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್‌ ಶೆಟ್ಟಿ, ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾ.ಮಹೇಶ್‌, ಗೋಕುಲ ಶಿಕ್ಷಣ ಪ್ರತಿಷ್ಠಾನದ (ವೈದ್ಯಕೀಯ) ಮುಖ್ಯ ಕಾರ್ಯನಿರ್ವಾಹಕ ಎಂ.ಆರ್‌.ಶ್ರೀನಿವಾಸಮೂರ್ತಿ, ರಾಮಯ್ಯ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಎಂ. ವೈ.ರಾವ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next