Advertisement

ತಪ್ಪು ಮಾಡದಂತೆ ಬದುಕಲು ಸಾಧ್ಯವಾಗಲಿಲ್ಲ…

11:19 PM Oct 23, 2021 | Team Udayavani |

ಮಹಾಭಾರತದಲ್ಲಿ- ಮೆಚ್ಚಬಹುದಾದ ಸ್ತ್ರೀ ಪಾತ್ರ ಗಳಿಗೆ ಕೊರತೆಯಿಲ್ಲ: ಸೌಂದರ್ಯಕ್ಕೆ ದ್ರೌಪದಿ ಯಿದ್ದಾಳೆ. ತಾಳ್ಮೆಗೆ ಗಾಂಧಾರಿಯಿದ್ದಾಳೆ. ನಿಷ್ಠೆಗೆ ಮಾದ್ರಿ ಸಿಗುತ್ತಾಳೆ. ಪಾತಿವ್ರತ್ಯದ ಮಾತಿಗೆ ಭಾನುಮತಿ ಉದಾಹರಣೆಯಾಗುತ್ತಾಳೆ. ಹಳೆಯ ತಲೆಮಾರು ಎಂದುಕೊಂಡರೆ, ಸತ್ಯವತಿಯ ಚಿತ್ರ ಕದಲುತ್ತದೆ. ಮನೋರಂಜನೆಯ ನಾಯಕಿ ಎಂದುಕೊಂಡರೆ- ಹಿಡಿಂಬೆ ಜತೆಯಾಗುತ್ತಾಳೆ. ದಾಸಿ ಎಂದರೆ ಸಾಕು- ವಿಧುರನ ತಾಯಿ ಕೈಮುಗಿಯುತ್ತಾಳೆ. ಉಹುಂ, ಇವರ್ಯಾರೂ ನನ್ನನ್ನು ಇನ್ನಿಲ್ಲದಂತೆ ಕಾಡುವುದಿಲ್ಲ. ನನ್ನ ಅನುಕಂಪಕ್ಕೆ, ಅವಸರದ ಬೈಗುಳಕ್ಕೆ ತುತ್ತಾಗುವುದಿಲ್ಲ. ಆದರೆ ಅವೆಲ್ಲಕ್ಕೂ ಕುಂತಿ ಪಾತ್ರಳಾಗುತ್ತಾಳೆ.

Advertisement

ಕುಂತಿಯ ಮೊದಲ ಹೆಸರು ಪೃಥೆ. ಆಕೆ ಶೂರರಾಜನ ಮಗಳು. ವಸುದೇವನ ತಂಗಿ, ಶ್ರೀಕೃಷ್ಣನ ಅತ್ತೆ! ಇವಳನ್ನು ಕುಂತಿ ಭೋಜನೆಂಬ ರಾಜ ದತ್ತು ತೆಗೆದುಕೊಂಡ. ಮುದ್ದಿನಿಂದ ಬೆಳೆಸಿದ. ಇದೇ ಕಾರಣದಿಂದ ಪೃಥೆ “ಕುಂತಿ’ಯಾದಳು. ಮುಂದೆ, ಸ್ವಯಂವರದಲ್ಲಿ ಪಾಂಡು ರಾಜನನ್ನು ವರಿಸಿದಳು. ಎರಡು ವರ್ಷದ ಬಳಿಕ, ಕುಂತಿಗಿಂತ ಮುದ್ದಾಗಿದ್ದ ಮಾದ್ರಿ ಎಂಬಾಕೆಯನ್ನೂ ಮದುವೆಯಾಗುತ್ತಾನೆ ಪಾಂಡುರಾಜ. ಆಗ, ಕುಂತಿಯೊಳಗೆ ಸವತಿ ಮಾತ್ಸರ್ಯ ಹೆಡೆಯಾಡಲಿಲ್ಲವೆ? ಈ ಮಾತಿಗೆ, ಆ ಕ್ಷಣದಲ್ಲಿ ಸಾಕ್ಷಿ ಸಿಗುವುದಿಲ್ಲ.

ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಕಥೆಯ ಅರ್ಥ ಎಲ್ಲರಿಗೂ, ಒಂದೊಂದು ವಯಸ್ಸಿನಲ್ಲಿ ಒಂದೊಂದು ತೆರನಾಗಿ ಆಗುತ್ತದೆ. “ಕುಂತಿಭೋಜ ಮಹಾರಾಜನ ಆಸ್ಥಾನಕ್ಕೆ ಒಮ್ಮೆ ದೂರ್ವಾಸ ಮುನಿಗಳು ಬಂದರು. ಉಗ್ರಕೋಪಿ ಎಂದೇ ಹೆಸರಾಗಿದ್ದ ದೂರ್ವಾಸರ ಸೇವೆಗೆ ದಾಸಿಯರನ್ನು ನಿಯೋಜಿಸಿದರೆ ಕಷ್ಟ. ಏಕೆಂದರೆ, ದಾಸಿ, ಒಂದೇ ಒಂದು ಚಿಕ್ಕ ತಪ್ಪು ಮಾಡಿದರೂ ಋಷಿ ಮುನಿಯಬಹುದು. ಆ ಸಿಟ್ಟಿನಲ್ಲೇ- “ರಾಜಾ, ನಿನ್ನ ಸಾಮ್ರಾಜ್ಯ ಹಾಳಾಗಲಿ’ ಎಂದು ಶಾಪ ಕೊಡಬಹುದು ಎಂದು ಯೋಚಿಸುವ ಕುಂತಿಭೋಜ, ಋಷಿಯ ಸೇವೆಗೆ ಮಗಳನ್ನೇ ಬಿಡುತ್ತಾನೆ. ಕುಂತಿಯ ಉಪಚಾರದಿಂದ ಸಂತುಷ್ಟರಾದ ದೂರ್ವಾಸರು- “ಭದ್ರೆ, ನಿನ್ನ ಸೇವೆಗೆ ಮೆಚ್ಚಿದೆ. ನಿನಗೆ ಐದು ವರಗಳನ್ನು ಕೊಡುತ್ತೇನೆ. ಒಂದೊಂದು ವರಕ್ಕೆ ಒಬ್ಬೊಬ್ಬ ದೇವತೆ ಒಲಿಯುತ್ತಾನೆ. ಕೇಳಿದ್ದನ್ನು ಕೊಡುತ್ತಾನೆ’ ಎನ್ನುತ್ತಾರೆ. ಮುಂದೆ “ದೊಡ್ಡವಳಾದ’ ಕುಂತಿ, ಆ ಕ್ಷಣದ ಉನ್ಮಾದ, ಆಸೆ ಮತ್ತು ಅವಸರವನ್ನು ಹತ್ತಿಕ್ಕಲಾರದೆ ದೂರ್ವಾಸರ ವರಗಳನ್ನು ನೆನಪಿಸಿಕೊಳ್ಳುತ್ತಾಳೆ. ಸೂರ್ಯನನ್ನು ಆಹ್ವಾನಿಸುತ್ತಾಳೆ. ಒಂದಿನಿತೂ ಸಂಕೋಚವಿಲ್ಲದೆ “ನನಗೊಂದು ಮಗು ಬೇಕು’ ಎಂದುಬಿಡುತ್ತಾಳೆ. ಸೂರ್ಯನಿಂದ ಅವಳು ಕರ್ಣನನ್ನು ಪಡೆದಳು

ಇಬ್ಬರು ಹೆಂಡಿರಿದ್ದರೂ ಗಂಧರ್ವರ ಶಾಪಕ್ಕೆ ಗುರಿಯಾಗಿ ಮಕ್ಕಳನ್ನು ಪಡೆಯುವ ಯೋಗವಿಲ್ಲದೆ ನರಳುತ್ತಾನೆ ಪಾಂಡುರಾಜ. ಆಗ ಕುಂತಿಯೇ ಅವನನ್ನು ಸಮಾಧಾನಿ ಸುತ್ತಾಳೆ. ಈ ಹಿಂದೆ, ದೂರ್ವಾಸರು ತನಗೆ ನೀಡಿದ ವರಗಳ ಬಗೆಗೆ ತಿಳಿಸುತ್ತಾಳೆ. “ನೀವು ಒಪ್ಪಿಗೆ ನೀಡಿದರೆ, ಅವುಗಳ ಸದುಪಯೋಗವಾಗಲಿ ಪ್ರಭೂ’ ಎನ್ನುತ್ತಾಳೆ. ಪಾಂಡುರಾಜನ ಒಪ್ಪಿಗೆ ಪಡೆದೇ ಧರ್ಮರಾಯ, ಭೀಮ, ಅರ್ಜುನರನ್ನು ಪಡೆಯುತ್ತಾಳೆ. ಈ ಮಕ್ಕಳ ಕಲರವದಿಂದ ಕುಣಿದಾಡುವ ಸಂದರ್ಭದಲ್ಲಿ ಅಪ್ಪಿತಪ್ಪಿ ಕೂಡ ಯೌವನದ ಹುಚ್ಚು ಆವೇಶದಲ್ಲಿ ಹಿಂದೊಮ್ಮೆ ತಾನು ಮಾಡಿದ ತಪ್ಪಿನ ಬಗ್ಗೆ ಹೇಳುವುದಿಲ್ಲ ಕುಂತಿ. ಮುಂದೆ, ನನಗೂ ತಾಯಿಯಾಗುವ ಬಯಕೆ ಎಂದು ಮಾದ್ರಿ ಹೇಳಿಕೊಂಡಾಗ, ದೂರ್ವಾಸರು ಹೇಳಿಕೊಟ್ಟಿದ್ದ ಮಂತ್ರದಲ್ಲಿ ಒಂದನ್ನು ಅವಳಿಗೂ ಹೇಳಿಕೊಡುತ್ತಾಳೆ.

ಇದನ್ನೂ ಓದಿ:ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

Advertisement

ಮಾದ್ರಿ ಸುಂದರಿಯಷ್ಟೇ ಅಲ್ಲ, ಜಾಣೆ ಕೂಡ. ಯುಧಿಷ್ಠಿರ, ಭೀಮ, ಅರ್ಜುನರಷ್ಟೇ ತೇಜಸ್ಸಿನಿಂದ ಕೂಡಿದ ಮಕ್ಕಳೇ ತನಗೂ ಬೇಕೆಂದು ಆಕೆ ಯೋಚಿಸುತ್ತಾಳೆ. ಒಂದೇ ವರಕ್ಕೆ ಅವಳಿ ಮಕ್ಕಳನ್ನು ಪಡೆಯುತ್ತಾಳೆ.

ಮಹಾಭಾರತದ ಕಥೆಯ ರೋಚಕತೆ ಇರುವುದೇ ಇಲ್ಲಿ. ಮಾದ್ರಿಗೆ ಒಂದೇ ಮಂತ್ರದ ಫಲವಾಗಿ ಇಬ್ಬರು ಮಕ್ಕಳಾಗಿಬಿಟ್ಟರು ಎಂದು ಅಸೂಯೆಪಡುವ ಕುಂತಿ, ಮುಂದೆ ಪಾಂಡು-ಮಾದ್ರಿಯ ಅಕಾಲ ನಿಧನದ ಬಳಿಕ ಆ ಮಕ್ಕಳನ್ನೂ ತನ್ನ ಮಡಿಲಿಗೆ ಹಾಕಿಕೊಳ್ಳುತ್ತಾಳೆ. ಮಾದ್ರಿ ಗಿಂತ ಹೆಚ್ಚಿನ ಮಮತೆ ತೋರಿ ಅವರನ್ನು ಸಲಹುತ್ತಾಳೆ.

ಹೀಗೆ, ಒಂದಲ್ಲ ಒಂದು ತುಮುಲದಲ್ಲಿ ಸಿಕ್ಕಿಕೊಂಡ ಕುಂತಿ, ಅಮಾಯಕಿಯ ಪೋಸ್‌ ಕೊಡುತ್ತಲೇ ಕೆಡುಕು ಕಂಡರೂ ಕಾಣದಂತೆ ಉಳಿದುಬಿಡುತ್ತಾಳೆ. ದ್ರೌಪದಿ ಯನ್ನು ಐದು ಜನರೂ ಹಂಚಿಕೊಳ್ಳಿ ಎಂದು ಹೇಳಿದಳಲ್ಲ, ಅದು ಮಹಾಭಾರತದ ಕಥೆಯ ಲೆಕ್ಕಾಚಾರಕ್ಕೆ “ಸರಿ’ಎಂಬಂತೆ ಕಾಣಬಹುದು. ಆದರೆ, ಒಂದು ಹೆಣ್ಣು, ಐದು ಮಂದಿಗೆ ಹೆಂಡತಿಯಾದಾಗ ಅನುಭವಿಸಬೇಕಾದ ತಳಮಳವಿದೆಯಲ್ಲ; ಅದನ್ನು ಓರ್ವ ಹೆಣ್ಣಾಗಿ ಕುಂತಿಯೇಕೆ ಅರ್ಥ ಮಾಡಿಕೊಳ್ಳಲಿಲ್ಲ? ಅಕಸ್ಮಾತ್‌ ಆಗಿಹೋದ ಪ್ರಮಾದವನ್ನು ಸರಿಮಾಡಲು ಏಕೆ ಮುಂದಾಗಲಿಲ್ಲ? ತನ್ನಿಂದಾದ ಈ ತಪ್ಪಿಗಾಗಿ ಆಕೆ ಕೊರಗಿದ, ಪಶ್ಚಾತ್ತಾಪಪಟ್ಟ ಅಥವಾ ಏಕಾಂತದಲ್ಲಿ ದ್ರೌಪದಿಯನ್ನು ಕಂಡು ಕ್ಷಮೆಯಾಚಿಸಿದ ವಿವರಣೆಗಳು ಮಹಾಭಾರತದಲ್ಲಿ ಸಿಗುವುದಿಲ್ಲ.

ಇವನ್ನೆಲ್ಲ ಗಮನಿಸಿದರೆ, ಕುಂತಿಯದು ಕಠಿನ ಮನಸ್ಸು. ಮಹಾಭಾರತದ ಕಥೆಯಲ್ಲಿ ಆಕೆ ಆಗಾಗ “ಕರ್ಣನ’ ನೆಪದಲ್ಲಿ ಮೂಛೆì ತಪ್ಪುವುದು, ಏಕಾಂತದಲ್ಲಿ ಬಿಕ್ಕಳಿಸುವುದೆಲ್ಲ ನಾಟಕ ಅನ್ನಿಸಿಬಿಡುವುದುಂಟು. ಇಂಥ ಅನುಮಾನಗಳಿಗೆಲ್ಲ- ಕರ್ಣನೊಂದಿಗೆ ಆಕೆ ಮುಖಾಮುಖೀಯಾದ ಸಂದರ್ಭದಲ್ಲಿ ಉತ್ತರ ಸಿಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ನಾನು ಅಥವಾ ಅರ್ಜುನ -ಇಬ್ಬರಲ್ಲಿ ಒಬ್ಬರು ಸಾಯಬಹುದು ಎಂದು ಕರ್ಣ ಹೇಳಿದಾಗ – “ಹಾ’ ಎಂದು ಚೀರಿ ಕುಸಿಯುತ್ತಾಳೆ. ಆಗ ಕರ್ಣ- “ಅಮ್ಮಾ, ನಾನು ಸಾಯಬಹುದು ಎಂದರೇ ಚೀರುವ ನಿನ್ನ ಹೃದಯ, ನನ್ನನ್ನು ಗಂಗೆಯಲ್ಲಿ ತೇಲಿಬಿಟ್ಟಾಗ ಕಲ್ಲಾಗಿತ್ತೇಕೆ?’ ಅನ್ನುತ್ತಾನೆ. ಆಗ ಕುಂತಿ ಹೇಳುತ್ತಾಳೆ: “ಕರ್ಣಾ, ನಿನ್ನನ್ನು ಪಡೆದೆನಲ್ಲ? ಆಗ ಲೋಕಾಪವಾದದ ಭಯ ಕಾಡಿತು. ಸತ್ತುಹೋಗೋಣ ಅಂದುಕೊಂಡೆ. ಆಗಲಿಲ್ಲ. ನಾನು ಸಾವಿಗೆ ಹೆದರಲಿಲ್ಲ. ತಪ್ಪಿಗೆ ಹೆದರಿದ್ದೆ. ದೊಡ್ಡ ಮನೆತನದ ಹೆಂಗಸರು ತಪ್ಪು ಮಾಡದಂತೆ ಬದುಕಬೇಕು. ನಿನ್ನ ದುರ್ಬಲ ತಾಯಿಯಿಂದ ಅದು ಸಾಧ್ಯವಾಗಲಿಲ್ಲ…’

ಇಂಥ ಮಾತುಗಳನ್ನು ಕೇಳಿ ಪಾಪ, ಅಮಾಯಕಿ ಕುಂತಿ ಎಂದುಕೊಳ್ಳುವ ವೇಳೆಗೇ ಕುಂತಿಯ ಮತ್ತೊಂದು ಮಾತು ಕೇಳಿಸುತ್ತದೆ: “ಕರ್ಣಾ, ತೊಟ್ಟ ಬಾಣವನ್ನು ತೊಡಬೇಡ. ಪಾಂಡವರನ್ನು ಕೊಲ್ಲಬೇಡ!’ ಕೈತಪ್ಪಿದ ಮಗ ದಶಕಗಳ ಅನಂತರ ಸಿಕ್ಕಾಗಲೂ ಅವನು ಗೆದ್ದುಬರಲಿ ಎಂದು ಬಯಸುವುದೇ ಇಲ್ಲ ಕುಂತಿ. ಇವನ್ನೆಲ್ಲ ನೆನಪಿಸಿ ಕೊಂಡಾಗ, ಅವಳು ನಿರ್ದಯಿ ಅನ್ನಿಸುವುದುಂಟು. ಆದರೆ, ಮಹಾಭಾರತದ ಕಥೆ ಗಮನಿಸಿದರೆ ಕುಂತಿ ಮಾಡಿದ್ದೆಲ್ಲ ಸರಿ ಅನಿಸುತ್ತದೆ. ಒಂದು ವೇಳೆ ಕರ್ಣನನ್ನು ಗಂಗೆಯಲ್ಲಿ ತೇಲಿಬಿಟ್ಟು ತಪ್ಪು ಮಾಡಿದೆ ಎಂಬ ಸಂಕಟದಿಂದಲೇ ಆಕೆ ಸತ್ತು ಹೋಗಿದ್ದರೆ “ಮಹಾಭಾರತವೇ’ ನಡೆ ಯುತ್ತಿರಲಿಲ್ಲ. ದ್ರೌಪದಿಯನ್ನು “ಹಂಚಿಕೊಳ್ಳಿ’ ಎನ್ನದಿದ್ದರೆ ಪಾಂಡವರಲ್ಲಿ ಒಗ್ಗಟ್ಟೂ ಇರುತ್ತಿರಲಿಲ್ಲ. ದ್ರೌಪದಿ, ಅರ್ಜುನನ ಹೆಂಡತಿಯಷ್ಟೇ ಆಗಿದ್ದರೆ ವಸ್ತ್ರಾಪಹರಣ ಆಗುತ್ತಿರಲಿಲ್ಲ. ದುಶ್ಯಾಸನ- ದುರ್ಯೋಧನರ ವಧೆಗೆ ಪ್ರಮುಖ ಕಾರಣವೂ ಸಿಗುತ್ತಿರಲಿಲ್ಲ…

ಆದರೆ ಕುಂತಿಯ ಈ ಘನಕಾರ್ಯವನ್ನು “ಲೋಕ’ ಅರ್ಥಮಾಡಿಕೊಳ್ಳಲೇ ಇಲ್ಲ. ಪಾಪ ಕುಂತಿ…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next