Advertisement

ವರದಿ ಪಡೆದು ಅಭ್ಯರ್ಥಿ ಆಯ್ಕೆ: ಡಿ.ಕೆ. ಶಿವಕುಮಾರ್‌

12:30 AM May 21, 2022 | Team Udayavani |

ಉಡುಪಿ: ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಆಯಾ ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ವರಿಷ್ಠರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾ
ಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಉಪ್ಪುಂದದ ಶ್ರೀ ದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ಶುಕ್ರವಾರ ಹರಕೆ ಚಂಡಿಯಾಗ ಮುಗಿಸಿ, ಉಡುಪಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವು ವಿಚಾರ ಮತ್ತು ಅಭ್ಯರ್ಥಿಗಳ ಆಯೆಯ ತೀರ್ಮಾನ ಮಾಡಲು ವರಿಷ್ಠರ ಕರೆಯಂತೆ ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿಗೆ ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಲಿದ್ದೇವೆ ಎಂದರು.

ಬಿಜೆಪಿಯವರು 150 ಅಲ್ಲ 224 ಸೀಟುಗಳನ್ನು ಬೇಕಾದರೂ ಗೆಲ್ಲಲಿ ಎಂದು ವ್ಯಂಗ್ಯವಾಡಿದ ಅವರು, ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಸಿದ್ಧಪಡಿಸಲಿದ್ದು, ಕರಾವಳಿ ಪ್ರತಿಭಾನ್ವಿತ ಯುವ ಜನರು ದೂರದ ಮುಂಬಯಿ, ದುಬಾೖ ವಲಸೆಯನ್ನು ತಪ್ಪಿಸಿ ಕರಾವಳಿಯಲ್ಲೇ ನೆಲೆ ನಿಲ್ಲಲು ಉದ್ಯಮ-ಉದ್ಯೋಗಕ್ಕೆ ದೂರದೃಷ್ಟಿ ಯೋಜನೆ ರೂಪಿಸಲಾಗುವುದು ಎಂದರು.

ಪ್ರಮೋದ್‌ ಮಧ್ವರಾಜ್‌ಗೆ ಪಶ್ಚಾತ್ತಾಪ ಖಚಿತ
ಕಾಂಗ್ರೆಸ್‌ ತ್ಯೇಜಿಸಿ ಬಿಜೆಪಿ ಸೇರಿರುವ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಲಿದ್ದಾರೆ. ಅವರ ಕುಟುಂಬಕ್ಕೆ ಪಕ್ಷ ಎಲ್ಲವನ್ನು ನೀಡಿತ್ತು. ಕಾಂಗ್ರೆಸ್‌ನಲ್ಲಿದ್ದಾಗ ವೇದಿಕೆ ಮೇಲೆ ನನ್ನ ಪಕ್ಕ ಕೂರುತ್ತಿದ್ದರೂ ಈಗ ಕೆಳಗಡೆ ಕೂರುವ ಸ್ಥಿತಿ ಬಂದಿದೆ. ದೊಡ್ಡ ತಪ್ಪು ಮಾಡಿರುವ ಭಾವನೆ ಮುಂದಿನ ದಿನಗಳಲ್ಲಿ ಅವರನ್ನು ಕಾಡಲಿದೆ ಎಂದರು.

ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣ ಇದ್ದರೆ ಬಿಜೆಪಿಯಲ್ಲಿ ಉತ್ತಮ ಗಾಳಿ ಪಡೆದುಕೊಳ್ಳಲಿ. ಬಲವಂತ, ಬ್ಲ್ಯಾಕ್‌ಮೇಲ್ ಮಾಡುವವರು ಪಕ್ಷದಿಂದ ಹೊರ ನಡೆಯಬಹುದು. ನಾನು ಇಲ್ಲದಿದ್ದರೂ ಕಾಂಗ್ರೆಸ್‌ ನಡೆಯುತ್ತದೆ. ಪಕ್ಷದ ನಾಯಕತ್ವ, ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರು ಉಳಿಯುತ್ತಾರೆ. ಉಡುಪಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರನ್ನು ಮೆಚ್ಚಬೇಕು, ಪ್ರಮೋದ್‌ ಅವರು ಬಿಜೆಪಿ ಸೇರಿದರೂ ಒಬ್ಬ ಕಾರ್ಯಕರ್ತನೂ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿಲ್ಲ. ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರ ಜತೆಗಿದೆ. ಜಿಲ್ಲಾ ಕಾಂಗ್ರೆಸ್‌ ಸಮಿತಿ ವರದಿಯನ್ನು ಪಡೆದು ಶಾಸ ಕಾಂಗ ಪಕ್ಷದ ನಾಯಕರು, ವರಿಷ್ಠರು ಚರ್ಚಿಸಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಶಾಸ ಕ ಯು.ಆರ್‌. ಸಭಾಪತಿ, ಮುಖಂಡರಾದ ಭಾಸ್ಕರರಾವ್‌ ಕಿದಿಯೂರು, ಕುಶಲ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಬಿ. ಅಣ್ಣಯ್ಯ ಸೇರಿಗಾರ್‌, ಕೃಷ್ಣಮೂರ್ತಿ ಕಿನ್ನಿಮೂಲ್ಕಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ರೋಶನ್‌ ಶೆಟ್ಟಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next