Advertisement
“”ಅಮ್ಮಾ, ಇದು ನಿನ್ನ ಕಾಲವಲ್ಲ. ನೀನು ಮದುವೆಯಾದ ಕಾಲದಲ್ಲಿ ಹಾಗಿದ್ದಿರಬಹುದು. ಅದೂ ಹದಿನೈದಿಪ್ಪತ್ತು ಜನರಿದ್ದ ಮನೆ. ಗಂಡನಿಗೂ ಹೆಂಡತಿಗೂ ಹತ್ತು, ಹದಿನೈದು ವರ್ಷದ ಅಂತರ ಬೇರೆ. ನೀವು, ತಾವು, ಅವರು ಅಂತಲೇ ಕರೆಯುತ್ತ ಇದ್ದೀರಿ. ಈಗ ನೋಡು. ನನಗೂ ಕಿಶನ್ಗೂ ಇರುವುದು ಒಂದೇ ವರ್ಷದ ವ್ಯತ್ಯಾಸ. ನಮ್ಮ ನಮ್ಮಲ್ಲಿ, “ಹೀಗೆ ಕೂಗು’, “ಹಾಗೇ ಕರೆ’ ಎಂಬ ಕಂಡೀಶನ್ ಇಲ್ವೇ ಇಲ್ಲ. ಸ್ನೇಹಿತರ ಹಾಗಿದ್ದೇವೆ. ಅಲ್ಲದೆ ನಾವಿಬ್ಬರು ಸಮಾನ ವಿದ್ಯಾವಂತರು. ಒಂದೇ ರೀತಿಯ ನೌಕರಿ ಮಾಡುತ್ತಿದ್ದೇವೆ”
Related Articles
Advertisement
“”ಹೊಡೆದರೆ, ಬಡಿದರೆ, ಉಪವಾಸ ಕೆಡವಿದರೆ ಅದು ಗಂಡನ ಪರಮಾಧಿಕಾರ. ಸಹನೆ, ತಾಳ್ಮೆ ಹೆಂಡತಿಗೆ ಮುಖ್ಯವೇ ಹೊರತು ಗಂಡನಿಗೂ ಇರಲಿ ಅಂತ ಬೋಧಿಸಿದವರಿಲ್ಲ. ಮಾತಿಗೆ ಎದುರಾಡಬೇಡ, ನೀನು ಉಪವಾಸವಿದ್ದರೂ ಪರವಾಗಿಲ್ಲ; ಗಂಡ, ಮಕ್ಕಳು, ಹಿರಿಯರಿಗೆ ಬಡಿಸಿ ಎರಡು ಲೋಟನೀರು ಕುಡಿದು ಹೊಟ್ಟೆ ತುಂಬಿಸ್ಕೋ ಎಂದು ಹೇಳಿದ ಹೆತ್ತವರೆಲ್ಲ ಸರಿದುಹೋದರು. ನಾವುಗಳೆಲ್ಲ ಇದ್ದುದನ್ನು ಹಂಚಿ ಉಣ್ಣುವಾ ಅನ್ನುವ ಮನೋಭಾವದವರು. ಇದು ನಮ್ಮ ವಿಚಾರ. ನೀವು ಮಗ, ಮಗಳು ಭೇದವಿಲ್ಲದೆ ವಿದ್ಯೆ ಕೊಡಿಸಿದ್ದೀರಿ ಅಲ್ವಾಮ್ಮ?”
“”ಹಿಂದಿನ ಗಂಡಸರ ಹಾಗೆ ದರ್ಪ, ದಬ್ಟಾಳಿಕೆ, ಅಧಿಕಾರಶಾಹಿ ಮನೋಭಾವ ತಗ್ಗಿ ಹೋಗಿ ಪತ್ನಿ ತನ್ನ ಜೀವನ ಸಂಗಾತಿಯೆ ಹೊರತು ಬಿಟ್ಟಿ ಸಿಕ್ಕ ದಾಸಿಯಲ್ಲ ಎಂಬ ಅರಿವು ವಿದ್ಯೆ, ಸಂಸ್ಕಾರವಿರುವ ಕುಟುಂಬಗಳಲ್ಲಿ ಪಡಿಮೂಡಿದೆ. ಹೆಣ್ಣು ಮಕ್ಕಳೆಂದರೆ ನಿವಾರಣೆ, ಅಸಡ್ಡೆ, ತಾತ್ಸಾರ ಮಾಡಿ ಮಾಡಿದ್ದರ ಪರಿಣಾಮ ಈಗ ಲಗ್ನಕ್ಕೆ ಕನ್ಯೆ ಅಲಭ್ಯವಾಗಿದ್ದು. ಹಿಂದಿನ ದಿನಗಳ ಹಿಂಜರಿಕೆ, ಭೀತಿ, ಕೀಳರಿಮೆ ಇಂದಿನ ಯುವತಿಯರಲಿಲ್ಲ. ಅದು ಉತ್ತಮ ಡೆವಲಪ್ಮೆಂಟ್ ವಿದ್ಯೆ ವ್ಯಕ್ತಿತ್ವವನ್ನು ಎತ್ತಿ ಹಿಡಿದು ಬೆಳೆಸಿದೆ”
“”ನಮ್ಮ ದಾಂಪತ್ಯದಲ್ಲಿ ನಾವು ಚೆನ್ನಾಗಿದ್ದೇವೆ. ಸಹಜವಾಗಿರೋಣ, ಕೃತಕತೆ, ಮೇಲು, ಕೀಳು, ಬಹುವಚನದ ಗೌರವ ಬೇಕಿಲ್ಲ; ನೀನು ನನಗೆ ನೀವು ಎಂದು ಕರೆದರೆ ನಾನೂ ನಿನ್ನ ಬಹುವಚನದಲ್ಲೇ ಕರೀತೇನೆ ಅಂದಿದ್ದಾನೆ ನನ್ನ ಪತಿ. ಅವನ ತಾಯ್ತಂದೆಗೂ ಅದೇ ಹಿತ. ನೀವು ಪ್ರೀತಿಯಿಂದ ಹೊಂದಿಕೊಂಡಿರುವುದು ಮುಖ್ಯವೇ ಹೊರತು ಏಕವಚನ, ಬಹುವಚನ ಅದೆಲ್ಲ ಪುರಾತನ ಕಾಲದಲ್ಲಿ ಮಾಡಿಟ್ಟ ಅಲಿಖೀತ ಕಾನೂನುಗಳು. ಬದಲಾವಣೆ ಬದುಕಿನ ಧರ್ಮ ಅಂದಿದ್ದಾರೆ ಬಲ್ಲವರು”
“”ಸೋ, ಅಮ್ಮಾ, ಅಪ್ಪನಿಗೂ ಹೇಳು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಹೇಗೆ ಕರೀತಾಳೆ ಪತ್ನಿ ಎನ್ನುವುದಕ್ಕಿಂತ ಮುಖ್ಯ ಅವರು ಹೇಗೆ ದಾಂಪತ್ಯದಲ್ಲಿ ಹೊಂದಿಕೊಳ್ತಾರೆ ಎನ್ನುವುದು” “”ಅಂದಿನ ಕಾಲದ ಹಾಗೆ ಹತ್ತು, ಹದಿನೈದು ವರ್ಷದ ವಯಸ್ಸಿನ ಅಂತರವಿರುವ ಪತಿ, ಪತ್ನಿಗೆ ಹೊಂದಾಣಿಕೆಗೆ ಸುದೀರ್ಘ ಸಮಯ ಬೇಕಾಗಬಹುದು. ಆದರೆ ಸಮವಯಸ್ಕ ಪತಿ, ಪತ್ನಿಗೆ ಸ್ನೇಹಿತರ ಹಾಗಿನ ಬದುಕು ಒಂದಾಗಿ ನಿಲ್ಲಲು ಕಲಿಸುತ್ತದೆ. ಸಹಜೀವನದ ಅಮೋದ, ಪ್ರಮೋದ ಬೊಗಸೆ ತುಂಬ ಸವಿಯುತ್ತೇವೆ. ನೀವು, ನಿಮಗೆ, ನಿಮ್ಮನ್ನು ಎಂದು ಕರೆದರೆ ನಮಗಿಬ್ಬರಿಗೂ ಅದು ಒಪ್ಪಿಗೆಯಿಲ್ಲ. ಏಕವಚನದಿಂದ ಪ್ರೀತಿ, ಆತ್ಮೀಯತೆ, ಸಾಮರಸ್ಯ ಹೆಚ್ಚುತ್ತದೆ ಹೊರತು ಆ ಕಾರಣಕ್ಕೆ ತಗ್ಗುವುದಿಲ್ಲ”
ಕೃಷ್ಣವೇಣಿ ಕಿದೂರು