Advertisement

Lok Sabha Elections: ಕಾಂಗ್ರೆಸ್‌ ಪರ ಬೇರೆ ಕ್ಷೇತ್ರದಲ್ಲೂ ಪ್ರಚಾರ; ಶಿವರಾಜ್‌ ಕುಮಾರ್‌

08:22 PM Mar 21, 2024 | Suhan S |

ಕುಂದಾಪುರ: ಶಿವಮೊಗ್ಗದಲ್ಲಿ ಗೀತಾ ಪರ ನಾನು ಈ ಬಾರಿ ಸಂಪೂರ್ಣ ಜತೆಗಿರುತ್ತೇನೆ. ಕಾಂಗ್ರೆಸ್‌ ಪರ ಶಿವಮೊಗ್ಗದೊಂದಿಗೆ ಬೇರೆ ಕ್ಷೇತ್ರದಲ್ಲೂ ಈ ಬಾರಿ ಪ್ರಚಾರ ಮಾಡುತ್ತೇನೆ. ಸ್ವಲ್ಪ ಶೂಟಿಂಗ್‌ ಇದೆ. ಅದು ಮುಗಿಸಿಕೊಂಡು ಮತ್ತೆ ಬರುತ್ತೇನೆ. ಗೀತಾ ಪರ ಪ್ರಚಾರಕ್ಕೆ ಚಿತ್ರರಂಗದವರೂ ಬರುತ್ತಾರೆ. ಫೀಲಂ ಚೇಂಬರ್‌ನವರು, ನಿರ್ಮಾಪಕರು, ನಿರ್ದೇಶಕರು ಬರುತ್ತಾರೆ. ಕಲಾವಿದರು ಯಾರೆಲ್ಲ ಬರುತ್ತಾರೆ ಗೊತ್ತಿಲ್ಲ, ಕರೆದರೆ ಖಂಡಿತ ಬರುತ್ತಾರೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

Advertisement

ಗುರುವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವಂಡ್ಸೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಎಲ್ಲ ಪಕ್ಷದಲ್ಲೂ ನನ್ನ ಅಭಿಮಾನಿಗಳಿದ್ದಾರೆ. ಎಲ್ಲರಿಗೂ ಅವರದ್ದೇ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ನಾವು ಹೇಳುವ ಮಾತುಗಳು ಅವರಿಗೆ ಮನವರಿಕೆ ಆದರೆ ನಮ್ಮ ಜತೆ ಬರ್ತಾರೆ. ಯಾರನ್ನೂ ಒತ್ತಡ ಹಾಕಿ, ಎಳೆದುಕೊಂಡು ಬರಲು ಆಗಲ್ಲ. ಮನಸಾರೆ ನಾನು ಅಭಿಮಾನಿಗಳ ಜತೆಗೆ ಇರುತ್ತೇನೆ ಎಂದವರು ತಿಳಿಸಿದರು.

ಅಪ್ಪಾಜಿ ಬಿಟ್ಟರೆ ಕರಾವಳಿಯಲ್ಲಿ ಅತೀ ಹೆಚ್ಚು ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವುದು ನಾನೇ. ಇಲ್ಲಿನ ಜನ ತುಂಬಾ ಇಷ್ಟ. ಕಾಣೆ, ಅಂಜಲ್‌, ಬೂತಾಯಿ ಎಲ್ಲವೂ ಇಷ್ಟ ಎಂದ ಅವರು, ಬೈಂದೂರು ಕ್ಷೇತ್ರದ ಎಲ್ಲ ಕಡೆಗೂ ಈ ಸಲ ಹೋಗುತ್ತೇನೆ ಎಂದವರು ಹೇಳಿದರು.

ಗೀತಾ ಖಂಡಿತ ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ. ಗೆದ್ದರೆ ಜನರಿಗೆ ಸುಲಭವಾಗಿ ಸಿಗುತ್ತಾರೆ. ಇದಕ್ಕೆ ನಾನು ಗ್ಯಾರಂಟಿ. ಶಕ್ತಿಧಾಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಬಗ್ಗೆಯೂ ಆಕೆಗೆ ಒಳ್ಳೆಯ ಕಾಳಜಿಯಿದೆ. ಹೆಣ್ಣು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು. ಇಂದಿರಾ ಗಾಂಧಿಯವರಿಗಿಂತ ದೊಡ್ಡ ಉದಾಹರಣೆ ಬೇಕಾ? ಹಿಂದೆ ಗೀತಾ ಜೆಡಿಎಸ್‌ನಿಂದ ಸೋತಿರಬಹುದು. ಆದರೆ ಈ 10 ವರ್ಷದಲ್ಲಿ ಹೊಸ ಮತದಾರರು ಬಂದಿದ್ದಾರೆ. ಹೊಸ ಐಡಿಯಾಗಳು ಬಂದಿವೆ. ಮತದಾರರು ಪ್ರಾಯೋಗಿಕವಾಗಿ ನೋಡುತ್ತಾರೆ. ಜನ ಕಾಂಗ್ರೆಸ್‌ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರು.

Advertisement

ಶಿವಮೊಗ್ಗ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್‌ ಶೆಟ್ಟಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next