ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವಂತೆ ನೂತನ ಮುಖ್ಯ ಕಾರ್ಯದರ್ಶಿ ಯಾರಾಗುತ್ತಾರೆ ಎಂಬ ಲೆಕ್ಕಾಚಾರ ಆರಂಭಗೊಂಡಿದೆ.
ಹಾಲಿ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರ ಅವಧಿ ಜೂನ್ 30ಕ್ಕೆ ಕೊನೆಗೊಳ್ಳಲಿದ್ದು,ಮುಂದಿನ ಮುಖ್ಯಕಾರ್ಯದರ್ಶಿ ಹುದ್ದೆಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾಗಿರುವ ಟಿ.ಎಂ. ವಿಜಯಭಾಸ್ಕರ್ ಮತ್ತು ಡಿ.ವಿ. ಪ್ರಸಾದ್ ಅವರ ಹೆಸರು ಮುಂಚೂಣಿಯಲ್ಲಿದೆ.
ಆದರೆ, ಸದ್ಯ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದ ರ್ಶಿಯಾಗಿರುವ 1982ರ ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿ ಲತಾ ಕೃಷ್ಣರಾವ್ ಸೇವಾ ಹಿರಿತನ ಹೊಂದಿದ್ದಾರೆ. ಆದರೆ, ಅವರು ಸೆಪ್ಟೆಂಬರ್ಗೆ ನಿವೃತ್ತಿಯಾಗಲಿದ್ದಾರೆ. ಅವರ ಸೇವಾ ಅವಧಿ ಕೇವಲ 3 ತಿಂಗಳು ಇರಲಿದೆ. ಅದೇ ಬ್ಯಾಚ್ನ ಮತ್ತೂಬ್ಬ ಹಿರಿಯ ಐಎಎಸ್ ಅಧಿಕಾರಿ ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿಯಾಗಿರುವ ಕರ್ನಾಟಕ ಕೇಡರ್ನ ಎಸ್.ಕೆ. ಪಟ್ಟನಾಯಕ್ ಅವರೂ ಸೇವಾ ಹಿರಿತನ ಹೊಂದಿದ್ದು, ಅವರ ಸೇವಾವಧಿಯೂ ಸೆಪ್ಟೆಂಬರ್ಗೆ ಅಂತ್ಯವಾಗಲಿದೆ.
ಅವರ ನಂತರದ ಸ್ಥಾನದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 1983 ಬ್ಯಾಚ್ನ ಟಿ.ಎಂ. ವಿಜಯಭಾಸ್ಕರ್ ಇದ್ದು ಅವರ ಸೇವಾವಧಿ ಇನ್ನೂ ಎರಡು ವರ್ಷ ಇರುವುದರಿಂದ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಅವರೊಂದಿಗೆ 1984ರ ಬ್ಯಾಚ್ನ ಹಿರಿಯ ಅಧಿಕಾರಿ ಅಭಿವೃದ್ಧಿ ಆಯುಕ್ತರಾಗಿರುವ ಡಿ.ವಿ. ಪ್ರಸಾದ್ ಅವರ ಹೆಸರೂ ಮುಖ್ಯಕಾರ್ಯದರ್ಶಿ ಹುದ್ದೆಗೆ ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರ ರತ್ನಪ್ರಭಾ ಅವರನ್ನೇ ಮತ್ತೂಂದು ಮೂರು ತಿಂಗಳು ಮುಂದುವರಿಸುತ್ತಾ ಅಥವಾ ಬೇರೆಯವರನ್ನು ನೇಮಕ ಮಾಡುತ್ತಾ ಎಂಬುದನ್ನು ಕಾದು ನೋಡಬೇಕು.