Advertisement

24ಕ್ಕೆ ಕೇಬಲ್‌ ಸಂಪರ್ಕ ಬಂದ್‌: 80 ಲಕ್ಷ  ಸಂಪರ್ಕಗಳಲ್ಲಿ ವ್ಯತ್ಯಯ

12:35 AM Jan 19, 2019 | |

ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್‌) ಹೊಸದರ ನಿಗದಿ ನಿಯಮವನ್ನು ಖಂಡಿಸಿ ದಕ್ಷಿಣ ಭಾರತ ಆಪರೇಟರ್ಸ್‌ ಅಸೋಸಿಯೇಷನ್‌ನಿಂದ ಜ.24ರಂದು ಬಂದ್‌ ಹಮ್ಮಿಕೊಂಡಿದ್ದು, ಈ ವೇಳೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಕೇಬಲ್‌ ಸೇವೆಗಳು ಬಂದ್‌ ಆಗಲಿವೆ. ಅಲ್ಲದೆ ರಾಜ್ಯದ 80 ಲಕ್ಷಕ್ಕೂ ಹೆಚ್ಚಿನ ಕೇಬಲ್‌ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕೇಬಲ್‌ ಆಪರೇಟರ್ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ಅವರು, ಟ್ರಾಯ್‌ನ ಹೊಸ ನಿಯಮದಿಂದ ಕೇವಲ ಕೇಬಲ್‌ ಆಪರೇಟರ್ಗೆ ನಷ್ಟವಾಗುತ್ತಿಲ್ಲ. ವಿಭಿನ್ನ, ಪ್ರತ್ಯೇಕ ದರಗಳಿಂದ ವೀಕ್ಷಕರಿಗೂ ಹೊರೆಯೂ ಆಗುತ್ತಿದೆ. ಈ ಹಿಂದೆ ನಗರ ಭಾಗದ ಗ್ರಾಹಕರು 300ರೂ., ಗ್ರಾಮೀಣ ಗ್ರಾಹಕರು 150 ರೂ. ನೀಡಿ 400 ಕ್ಕೂ ಹೆಚ್ಚಿನ ಚಾನೆಲ್‌ಗ‌ಳನ್ನು ಪಡೆಯುತ್ತಿದ್ದರು. ಟ್ರಾಯ್‌ ಹೊಸ ನೀತಿಯಿಂದ ಈಗ ಎಲ್ಲಾ ಗ್ರಾಹಕರು ಜಿಎಸ್‌ಟಿ ಸೇರಿ 154 ರೂ. ಕಡ್ಡಾಯವಾಗಿ ಪಾವತಿಸಬೇಕಿದೆ. ಆನಂತರ ತಮ್ಮ ಇಚ್ಚೆಯ ಚಾನೆಲ್‌ಗ‌ಳಿಗೆ ಪ್ರತ್ಯೇಕ ಶುಲ್ಕ ಹಾಗೂ ತೆರಿಗೆ ನೀಡಬೇಕಿದೆ. ಇನ್ನು ಉಚಿತವಾಗಿ ನೀಡುತ್ತಿರುವ 100 ಚಾನೆಲ್‌ಗ‌ಳಲ್ಲಿ 24 ದೂರದರ್ಶನ ಚಾನೆಲ್‌ ಗಳು, ಸುದ್ದಿ ಚಾನೆಲ್‌ಗ‌ಳೇ ಇವೆ. ಮನೋರಂಜನೆ, ಕ್ರೀಡಾ ಚಾನೆಲ್‌ಗ‌ಳು ಸಾಕಷ್ಟು ಕಡಿಮೆ ಇವೆ. ಅಲ್ಲದೇ ಪ್ರಸ್ತುತ ಕೇಬಲ್‌ ಆಪರೇಟರ್ ನೀಡುತ್ತಿರುವಷ್ಟು ಚಾನೆಲ್‌ಗ‌ಳನ್ನು ಈ ಹೊಸ ನಿಯಮದಡಿ ಪಡೆದರೆ ತಿಂಗಳ ಶುಲ್ಕ ಒಂದು ಸಾವಿರ ರೂ. ದಾಟುತ್ತದೆ. ಇವೆಲ್ಲವನ್ನೂ ಪ್ರಶ್ನಿಸಿ ನಿಯಮದಲ್ಲಿ ತಿದ್ದುಪಡಿ ತರಲು ಈ ಬಂದ್‌ ಮಾಡುತ್ತಿದ್ದೇವೆ ಎಂದರು.

ಈ ಹಿಂದೆ ಕೇಬಲ್‌ ಅಪರೇಟರ್ಗಳೇ ಶೇ.5ರಷ್ಟು ತೆರಿಗೆ ಕಟ್ಟುತ್ತಿದ್ದರು. ಆದರೆ, ಈಗ ಶುಲ್ಕದ ಜತೆ ಶೇ.18ರಷ್ಟು ಜಿಎಸ್‌ಟಿ ಕಟ್ಟಬೇಕಾಗಿದೆ. ಕನ್ನಡ ಚಾನೆಲ್‌ಗ‌ಳ ಪೈಕಿ ಎಲ್ಲಾ ನ್ಯೂಸ್‌ ಚಾನೆಲ್‌ಗ‌ಳು ಮಾತ್ರ ಉಚಿತವಿದ್ದು, ಉಳಿದ ಎಲ್ಲಾ ಮನೋರಂಜನಾ ಚಾನೆಲ್‌ಗ‌ಳಿಗೆ ಪ್ರತ್ಯೇಕ ಶುಲ್ಕ ನೀಡಬೇಕಿದೆ. ಇದು ಗ್ರಾಹಕ ವಿರೋಧಿ ನಡೆ ಎಂದರು. ಬಂದ್‌ಗೆ ಎಲ್ಲಾ ರಾಜ್ಯಗಳ ಜಿಲ್ಲಾ, ತಾಲೂಕುವಾರು ಆಪರೇಟರ್ ಬೆಂಬಲ ನೀಡಿದ್ದಾರೆ. ಜ.24ರಂದು ದಕ್ಷಿಣ ಭಾರತ ಕೇಬಲ್‌ ಸೇವೆ ಸಂಪೂರ್ಣ ಬಂದ್‌ ಆಗಲಿದೆ. ಈ ಬಂದ್‌ ಗ್ರಾಹಕರು ಹಿತಕ್ಕೆ ಮಾಡುತ್ತಿದ್ದು, ಅವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇನ್ನು ಟ್ರಾಯ್‌ ಗ್ರಾಹಕ ಹಾಗೂ ಕೇಬಲ್‌ ಆಪರೇಟರ್ ವಿರೋಧಿ ನಿಯಮಗಳಲ್ಲಿ ತಿದ್ದುಪಡಿ ತರದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಪೂರ್ಣ ಕೇಬಲ್‌ ಬಂದ್‌ ಮಾಡಿ ನಿರಂತರವಾಗಿ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next