Advertisement

ತೋಡಿಗೆ ಬಿದ್ದ ಬಾಲಕನ ರಕ್ಷಿಸಿದ ಆಮ್ನಿ ಚಾಲಕ

04:00 AM Jun 28, 2018 | Team Udayavani |

ಉಪ್ಪಿನಂಗಡಿ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ 10ರ ಹರೆಯದ ಬಾಲಕನೋರ್ವ ಅಯತಪ್ಪಿ ತೋಡಿಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಸಮಯ ಪ್ರಜ್ಞೆ ಮೆರೆದ ಆಮ್ನಿ ಚಾಲಕನೋರ್ವ ತೋಡಿಗೆ ಧುಮುಕಿ ಬಾಲಕನನ್ನು ರಕ್ಷಿಸಿದ ಘಟನೆ ಬುಧವಾರ ಸಂಜೆ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಭೋವುಮಜಲು ಎಂಬಲ್ಲಿ ಸಂಭವಿಸಿದೆ.

Advertisement

ಕುಪ್ಪೆಟ್ಟಿ ಭೋವುಮಜಲು ನಿವಾಸಿ ಸಲೀಂ ಅವರ ಮಗ ಉಪ್ಪಿನಂಗಡಿ ಜ್ಞಾನಭಾರತಿ ವಿದ್ಯಾ ಸಂಸ್ಥೆಯಲ್ಲಿ 5ನೇ ತರಗತಿಯಲ್ಲಿ ಕಲಿಯುತ್ತಿರುವ ಅಫ್ನಾನ್‌ (10) ರಕ್ಷಣೆಗೆ ಒಳಗಾದ ಬಾಲಕನಾಗಿದ್ದಾನೆ. ಈತ ಎಂದಿನಂತೆ ಶಾಲೆ ಬಿಟ್ಟು ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಾಹನದಿಂದ ಇಳಿಯುತ್ತಿದ್ದಂತೆ ರಸ್ತೆಯಂಚಿಗೆ ಬಂದ ಇನ್ನೊಂದು ವಾಹನದಿಂದ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದ ವೇಳೆ ಬಾಲಕ ರಸ್ತೆ ಬದಿಯ ತೋಡಿಗೆ ಬಿದ್ದಿದ್ದಾನೆ. ಆ ಸಮಯದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ತೋಡಿನಲ್ಲಿ ನೀರಿನ ಹರಿವು ತೀವ್ರವಾಗಿದ್ದು ಬಾಲಕ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಈ ದೃಶ್ಯ ಕಂಡ ಆಮ್ನಿ ಚಾಲಕ ಕುಪ್ಪೆಟ್ಟಿ ನಿವಾಸಿ ಅರ್ಫಾನ್‌ ತತ್‌ ಕ್ಷಣ ತೋಡಿಗೆ ಧುಮುಕಿ ಬಾಲಕನನ್ನು ಹಿಡಿದು ಮೇಲಕ್ಕೆತ್ತಿ ಕುಡಿದ ನೀರನ್ನು ವಾಂತಿ ಮಾಡಿಸುವ ಮೂಲಕ ಬಾಲಕನ್ನು ರಕ್ಷಿಸಿದ್ದಾರೆ. ಆಮ್ನಿ ಚಾಲಕನ ಸಮಯ ಪ್ರಜ್ಞೆ ಬಾಲಕನ ಜೀವ ರಕ್ಷಣೆಗೆ ಕಾರಣವಾಗಿರುವುದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next