Advertisement

ಬೈಂದೂರು: 2,870 ಕಿ.ಮೀ. ಕ್ರಮಿಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು

01:16 AM Jun 24, 2022 | Team Udayavani |

ಬೈಂದೂರು: ಐದು ದಿನಗಳ ಹಿಂದೆ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದು ಮಧ್ಯಪ್ರದೇಶಕ್ಕೆ ಪರಾರಿಯಾಗುವ ಯತ್ನದಲ್ಲಿದ್ದ ಕಳ್ಳರ ಜಾಡು ಹಿಡಿದ ಬೈಂದೂರು ಪೊಲೀಸರು 2,870 ಕಿ.ಮೀ. ಕ್ರಮಿಸಿ ಕಳವುಗೈದ ಚಿನ್ನಾಭರಣ ಸಮೇತ ಆರೋಪಿಗಳನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಚಿನ್ನಾಭರಣ ಮಾತ್ರವಲ್ಲದೆ ಆರೋಪಿಗಳು ಬಳಸಿದ್ದ ಬ್ರಿàಝಾ ಕಾರು, 2 ಮೊಬೈಲ್‌ ಫೋನ್‌ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

ಘಟನೆ ಹಿನ್ನೆಲೆ :

ಮಹಾರಾಷ್ಟ್ರದ ಥಾಣೆ ನಿವಾಸಿ ಈಶ್ವರ್‌ ದಲಿಚಂದ್‌ ಮುಂಬಯಿಯಲ್ಲಿ ಚಿನ್ನ ಖರೀದಿಸಿ ಉಡುಪಿ, ಮಂಗಳೂರು ಮೊದಲಾದೆಡೆ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು. ಅವರು ಮುಂಬಯಿಯಿಂದ ಬಸ್‌ನಲ್ಲಿ ಹೊರಟಿದ್ದು, ಜೂ. 16ರ ಬೆಳಗ್ಗೆ ಶಿರೂರು ನೀರYದ್ದೆ ಶಿವಸಾಗರ್‌ ಹೊಟೇಲ್‌ನಲ್ಲಿ ಉಪಹಾರಕ್ಕೆಂದು ಬಸ್‌ನಿಂದ ಎಲ್ಲರೂ  ಹೊಟೇಲ್‌ಗೆ  ತೆರಳಿದ್ದರು. ಆಗ ಅಪರಿಚಿತರ ತಂಡವೊಂದು 466.90 ಗ್ರಾಂ ತೂಕದ ಒಟ್ಟು 18 ಲ.ರೂ. ಮೌಲ್ಯದ ಚಿನ್ನಾಭರಣವಿದ್ದ ಸೂಟ್‌ಕೇಸ್‌ ಅನ್ನು ಬಸ್‌ನಿಂದ ಅಪಹರಿಸಿ ಕಾರಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರ 2 ವಿಶೇಷ ತಂಡ :

Advertisement

ದೂರು ದಾಖಲಾಗುತ್ತಿದ್ದಂತೆ ಡಿವೈಎಸ್‌ಪಿ ಶ್ರೀಕಾಂತ್‌ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದ ಎರಡು ವಿಶೇಷ ತಂಡ ರಚಿಸಲಾಗಿತ್ತು. ಗಂಗೊಳ್ಳಿ ಠಾಣಾಧಿಕಾರಿ ವಿನಯ್‌ ಹಾಗೂ ಬೈಂದೂರು ಠಾಣಾಧಿಕಾರಿ ಪವನ್‌ ನಾಯಕ್‌ ಮುಂದಾಳತ್ವದ ಪ್ರತ್ಯೇಕ ತಂಡಗಳನ್ನು ರಚಿಸಿ ಒಂದು ತಂಡ ಬೆಂಗಳೂರಿಗೆ ಹಾಗೂ ಇನ್ನೊಂದು ತಂಡ ಮುಂಬಯಿ ಕಡೆಗೆ ತೆರಳಿತ್ತು. ವಿವಿಧ ಟೋಲ್‌ಗೇಟ್‌ ಸಂಪರ್ಕ ಸಾಧಿಸಿ ವಾಹನಗಳ ವಿವರ ಪಡೆದು ಕಳವಿಗೆ ಬಳಸಿದ ವಾಹನದ ನಿಖರತೆ ಪತ್ತೆ ಹಚ್ಚಿ ಮಹಾರಾಷ್ಟ್ರ ಕ್ರೈಮ್‌ ಪೊಲೀಸ್‌ ಸಂಜೀವ ಪಾಟೀಲ್‌ ತಂಡದ ಸಹಕಾರದೊಂದಿಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಕಾರಿನಲ್ಲಿ ಮತ್ತಷ್ಟು ನಂಬರ್‌ ಪ್ಲೇಟ್‌ :

ಆರೋಪಿಗಳ ಕಾರಿನಲ್ಲಿ ಮತ್ತಷ್ಟು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆಯಾಗಿವೆ. ಶಿರೂರಿನಿಂದ ಭಟ್ಕಳಕ್ಕೆ ಸಾಗರ ಮಾರ್ಗವಾಗಿ ಸಾಗುವ ವೇಳೆ ಒಂದು ನಂಬರ್‌ ಪ್ಲೇಟ್‌ ಅನ್ನು ಹಾಡಹಳ್ಳಿ ಸಮೀಪ ಆರೋಪಿಗಳು ಎಸೆದಿದ್ದರು.

ಆರೋಪಿಗಳು ಪರಿಚಿತರೇ? :

ಆರೋಪಿಗಳು ಮತ್ತು ಚಿನ್ನಾಭರಣ ಕೊಂಡೊಯ್ಯುತ್ತಿದ್ದ ವ್ಯಕ್ತಿ ಪರಸ್ಪರ ಪರಿಚಿತರೇ ಎಂಬ ಸಂಶಯ ಕಾಡಲಾರಂಭಿಸಿದೆ. ಮುಂಬಯಿ ಯಿಂದ ಹೊರಟ ಈಶ್ವರ್‌ ಚಿನ್ನ ಸಾಗಿಸುತ್ತಿರುವ ವಿಚಾರ ಆರೋಪಿಗಳಿಗೆ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅದೂ ಅಲ್ಲದೆ ಆರೋಪಿಗಳು ಇಷ್ಟೊಂದು ವ್ಯವಸ್ಥಿತ ರೀತಿಯ ತಂತ್ರಗಾರಿಕೆ ನಡೆಸಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆ ನಡೆಸಿರಲೇಬೇಕು. ಯಾವುದೋ ಒಂದು ಕಡೆಯಿಂದ ಆರೋಪಿಗಳಿಗೆ ಮತ್ತು ಚಿನ್ನ ಸಾಗಿಸುವ ವ್ಯಕ್ತಿಗೆ ಅಥವಾ ಚಿನ್ನ ಸಾಗಿಸಲು ಸೂಚಿಸಿದ ವ್ಯಕ್ತಿಗೆ ಸಂಪರ್ಕ ಇರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ರಾತ್ರಿ ಪ್ರಯಾಣಿಸುತ್ತಿರಲಿಲ್ಲ :

ಆರೋಪಿಗಳು ಬೇಕೆಂದೇ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣಿಸಿದ್ದರು ಎಂದು ಪೊಲೀಸರಿಗೆ ತನಿಖೆಯ ವೇಳೆ ಗೊತ್ತಾಗಿದೆ. ನೇರವಾಗಿ ಮಧ್ಯಪ್ರದೇಶಕ್ಕೆ ಹೋದರೆ ಗೊತ್ತಾಗುತ್ತದೆ ಎಂದು ಬೇರೆ ಬೇರೆ ರಾಜ್ಯಗಳಿಗೆ ಸುತ್ತಾಡಿ ಬೇಕೆಂದೇ ಸಮಯ ಕಳೆಯುತ್ತಿದ್ದರು ಮತ್ತು ರಾತ್ರಿಯ ವೇಳೆ ಪೊಲೀಸ್‌ ತಪಾಸಣೆ ಇರುವುದರಿಂದ ನಗರ ಪ್ರದೇಶಗಳಲ್ಲಿ ಹೊಟೇಲ್‌ ಕೊಠಡಿಗಳಲ್ಲಿ ತಂಗುತಿದ್ದರು ಎಂಬುದಾಗಿ ತನಿಖೆಯ ವೇಳೆ ಗೊತ್ತಾಗಿದೆ.

ಪೊಲೀಸರ ಹಗಲಿರುಳು ಶ್ರಮ :

ಕೆಲವೇ ದಿನಗಳ ಹಿಂದೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಕದ್ದು ಪರಾರಿ ಯಾದ ಆರೋಪಿಯನ್ನು ಮಹಾರಾಷ್ಟ್ರದಿಂದ ಬಂಧಿಸಿ ಕರೆತರಲಾಗಿತ್ತು. ಅದಾದ ಬಳಿಕ ನಡೆದ ದೊಡ್ಡ ಪ್ರಕರಣ ಇದಾಗಿದೆ. ಕೇವಲ ನಾಲ್ಕು ದಿನದಲ್ಲಿ ಕಳವುಗೈದ ಸಂಪೂರ್ಣ ಚಿನ್ನ ಸಮೇತ ಆರೋಪಿಗಳನ್ನು ಬಂಧಿಸುವಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಆನಂದ ಕಾಯ್ಕಿಣಿ ಅವರ ತಂಡದ ಹಗಲಿರುಳು ಕಾರ್ಯಾಚರಣೆ ಪ್ರಮುಖವಾಗಿದೆ.

ಎಸ್ಪಿ ವಿಷ್ಣುವರ್ಧನ್‌ ಮಾರ್ಗದರ್ಶನ, ಎಎಸ್ಪಿ  :

ಎಸ್‌.ಟಿ. ಸಿದ್ದಲಿಂಗಪ್ಪ‌, ಉಪಾಧೀಕ್ಷಕ ಶ್ರೀಕಾಂತ ಕೆ. ಸೂಚನೆಯಂತೆ, ತಂಡದಲ್ಲಿ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಠಾಣಾಧಿಕಾರಿ ಪವನ್‌ ನಾಯಕ್‌, ಗಂಗೊಳ್ಳಿ ಠಾಣಾಧಿಕಾರಿ ವಿನಯ್‌, ಆರಕ್ಷಕರಾದ ಮೋಹನ್‌ ಪೂಜಾರಿ ಶಿರೂರು, ನಾಗೇಂದ್ರ ಬೈಂದೂರು, ಶ್ರೀಧರ, ನಾಗೇಶ್‌ ಗೌಡ, ಸುಜಿತ್‌ ಕುಮಾರ್‌, ಶ್ರೀನಿವಾಸ ಉಪ್ಪುಂದ, ಪ್ರಿನ್ಸ್‌ ಶಿರೂರು, ಚಂದ್ರ ಮೊದಲಾದವರಿದ್ದರು.

ಅಲ್ಲಲ್ಲಿ  ಕಾರಿನ ನಂಬರ್‌ ಪ್ಲೇಟ್‌ ಬದಲಾವಣೆ :

ದೇಶಾದ್ಯಂತ ವ್ಯವಸ್ಥಿತ ಜಾಲ ಹೊಂದಿದ್ದ ಕಳ್ಳರು ಸಾಕಷ್ಟು ಮಾಸ್ಟರ್‌ ಪ್ಲ್ರಾನ್‌ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಮಾರುತಿ ಬ್ರಿಝಾ ಕಾರಿನ ನಂಬರ್‌ ಬದಲಿಸಿ

ಶಿವಮೊಗ್ಗ ಕಡೆಗೆ ಪರಾರಿಯಾಗಿದ್ದರು. ಸಾಗರದಲ್ಲಿ ತೆಲಂಗಾಣ, ಬೆಂಗಳೂರು ನಂಬರ್‌ ಪ್ಲೇಟ್‌ ಬಳಸಿದ್ದರು. ಶಿವಮೊಗ್ಗದಲ್ಲಿ ವಾಹನದ ನಿಜವಾದ ನಂಬರ್‌ ಪ್ಲೇಟ್‌ ಬಳಸಿದ್ದರು. ವಿವಿಧ ಟೋಲ್‌ಗೇಟ್‌ ಸಂಪರ್ಕಿಸಿ ಫಾಸ್ಟಾಗ್‌ ಮೂಲಕ ವಾಹನ ಸಾಗಿದ ಮಾರ್ಗವನ್ನು  ಕಂಡು ಹಿಡಿದ ಪೊಲೀಸರು ಅದೇ ದಾರಿಯಲ್ಲಿ ಸಾಗುತ್ತಾ ವಾಹನದ ಜಾಡು ಹಿಡಿದಿದ್ದರು. ತೆಲಂಗಾಣ ಗಡಿಭಾಗಕ್ಕೆ ತೆರಳಿ ಬಳಿಕ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ತೆರಳಲಿದ್ದ  ಮಾಹಿತಿ ಪಡೆದ ಪೊಲೀಸರು ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ಅಲ್ಲಿನ  ದುಬೆ ಜಿಲ್ಲೆಯ ಸೋನಗಿರ್‌ ಎನ್ನುವ ಟೋಲ್‌ಗೇಟ್‌ ಬಳಿ ವಾಹನವನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದರು.

ತಪ್ಪಿಸಿಕೊಳ್ಳಲು ಯತ್ನಿಸಿದರೂ ಆದರು ಲಾಕ್‌ :

ಪೊಲೀಸರ ಮೇಲೆ ವಾಹನ ಹಾಯಿಸಿ ಮಾರಕಾಯುಧ ತೋರಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ಕಳ್ಳರ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಸಫಲರಾಗಿದ್ದರು. ಕಾರ್ಯಾಚರಣೆಯ ವೇಳೆ ಓರ್ವ ಪೊಲೀಸ್‌ಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳಾದ ಆಲಿಬಾನ್‌ (31), ಆಮ್ಜಲ್‌ಖಾನ್‌ (35) ಇಕ್ರಾರ್‌ (30) ಹಾಗೂ ಗೋಪಾಲ್‌ ಆಮ್ಲವರ್‌ (35) ನನ್ನು ಮಹಾರಾಷ್ಟ್ರದ ದುಬೆಯಲ್ಲಿ ವಶಕ್ಕೆ ಪಡೆದ ಪೊಲೀಸರು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಕೋರಿಕೆಯಂತೆ ನ್ಯಾಯಾಧೀಶರು ಆರೋಪಿಗಳನ್ನು ಐದು ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ಕಾರಿನಲ್ಲಿಯೇ ಚಿನ್ನಾಭರಣ ಇರಿಸಿ ತಿರುಗುತ್ತಿದ್ದರು! :

ಆರೋಪಿಗಳು ಶಿರೂರಿನಲ್ಲಿ ಬಸ್‌ನಿಂದ ಚಿನ್ನಾಭರಣ ಕದ್ದೊಯ್ದ  ಬಳಿಕ ಅದನ್ನು ಕಾರಿನಲ್ಲಿಯೇ ಇರಿಸಿಕೊಂಡು ಸುತ್ತಾಡುತ್ತಿದ್ದರು. ಪೊಲೀಸರ ದಾರಿ ತಪ್ಪಿಸುವ ಉದ್ದೇಶದಿಂದ ಬೇರೆ ಬೇರೆ ಊರುಗಳಿಗೆ ಹೋದರೂ ಎಲ್ಲಿಯೂ ಚಿನ್ನಾಭರಣ ಮಾರುವ ಪ್ರಯತ್ನವನ್ನು ಮಾಡಿರಲಿಲ್ಲ. ಆದುದರಿಂದ ಪೊಲೀಸರು ಮಧ್ಯಪ್ರದೇಶದ ಗಡಿಯಲ್ಲಿ ಆರೋಪಿಗಳನ್ನು ಬಂಧಿಸುವ ವೇಳೆ ಕಳ್ಳತನವಾಗಿದ್ದ ಎಲ್ಲ ಚಿನ್ನಾಭರಣಗಳು ಪತ್ತೆಯಾಗಿದೆ.  ಆರೋಪಿಗಳು ಜೂ. 16ರಂದು ಬೆಳಗ್ಗೆ  ಶಿರೂರು ಬಳಿ ಬಸ್‌ ನಿಂತಿದ್ದಾಗ ಚಿನ್ನಾಭರಣವಿದ್ದ ಸೂಟ್‌ಕೇಸ್‌ ಅನ್ನು ಬಸ್‌ನಿಂದ ಎತ್ತಿಕೊಂಡು ಬಸ್‌ನ ಹಿಂಬದಿಗೆ ಹೋಗಿ ಅಲ್ಲಿಯೇ ಸೂಟ್‌ಕೇಸ್‌ ಒಡೆದು ಅದರೊಳಗಿದ್ದ ಚಿನ್ನಾಭರಣಗಳನ್ನು ತೆಗೆದು ಬೇರೆ ಚೀಲಕ್ಕೆ ಹಾಕಿ ಕೊಂಡೊಯ್ದಿದ್ದರು. ಸೂಟ್‌ಕೇಸ್‌ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಈ ಸಮಯದಲ್ಲಿ ಬಸ್‌ನಲ್ಲಿ ಇದ್ದ ಎಲ್ಲರೂ ಹೊಟೇಲ್‌ಗೆ ತಿಂಡಿಗೆ ಹೋಗಿದ್ದರಿಂದ ಆರೋಪಿಗಳು ಪರಾರಿಯಾಗುವವರೆಗೆ ಯಾರಿಗೂ ವಿಷಯ ಗೊತ್ತೇ ಆಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next