Advertisement

ಜನ ಸಾಮಾನ್ಯರ ಬಿಸಿನೆಸ್‌ ಬಂಧು –ಮುದ್ರಾ ಲೋನ್‌

10:04 AM Dec 03, 2019 | sudhir |

ಕಾಸುಕುಡಿಕೆಯಲ್ಲಿ ವೈಯಕ್ತಿಕ ವಿತ್ತ ವಿಚಾರಗಳನ್ನು ಮಾತ್ರ ಬರೆಯಬೇಕು ಎನ್ನುವ ಕಟ್ಟುನಿಟ್ಟಾದ ಕಾನೂನೇನೂ ಇಲ್ಲ. ಆದಷ್ಟು ಮಟ್ಟಿಗೆ ಜನಸಾಮಾನ್ಯರ ಹೂಡಿಕೆ, ಸಾಲ, ತೆರಿಗೆ ಇತ್ಯಾದಿ ವಿತ್ತ ವಿಷಯಗಳ ಮೆಲೆ ಬೆಳಕು ಚೆಲ್ಲುವುದು ಕಳೆದ ಒಂದು ದಶಕದಿಂದಲೂ ನಡೆದುಕೊಂಡು ಬಂದಂತಹ ವಾಡಿಕೆ. ಜನ ಸಾಮಾನ್ಯರಿಗೆ ಸಾಧಕವಾಗುವ ಬಿಸಿನೆಸ್‌ ವಿಚಾರಗಳು ಕೂಡಾ ಆತನ ಕುಡಿಕೆಗೆ ಬಾಧಕವಾಗುವ ವಿಚಾರವೇ. ಹಾಗಾಗಿ ಸಣ್ಣ ಪುಟ್ಟ ವ್ಯವಹಾರ ನಡೆಸುವ ಜನ ಸಂಕುಲಕ್ಕೆ ಸಂಬಂಧಪಟ್ಟ ಬಿಸಿನೆಸ್‌ ಮ್ಯಾಟರುಗಳು ಇಲ್ಲಿ ಸಾಧು. ಹಾಂ! ದೊಡ್ಡ ದೊಡ್ಡ ಕಾರ್ಪೋರೇಟ್‌ ಉದ್ದಿಮೆಗಳ ತಿಜೋರಿಗೆ ಸಂಬಂಧ ಪಟ್ಟ ವಿಷಯಗಳು ಇಲ್ಲಿ ಬರಲಾರದು. ಆದರೆ ಜನ ಸಾಮಾನ್ಯರ ಕುಡಿಕೆಗೆ ಸಂಬಂಧ ಪಟ್ಟ ಎಲ್ಲಾ ವಿಚಾರಗಳೂ ಇಲ್ಲಿ ಬರಬಹುದು.

Advertisement

ಅಂತಹುದೇ ಒಂದು ಜನ ಸಾಮಾನ್ಯರ ಬಿಸಿನೆಸ್‌ ಯೋಜನೆ – ಮುದ್ರಾ ಲೋನ್‌. ಮುದ್ರಾ ಎನ್ನುವುದು ಸಾಲಪತ್ರದ ಮೇಲೆ ಒತ್ತುವ ಸ್ಯಾಂಕ್ಷನ್‌ ಮುದ್ರೆ ಅಲ್ಲ. MUDRA ಎನ್ನುವುದು Micro Units Development and Refinance Agency Ltd.ಎನ್ನುವುದರ ಸಂಕ್ಷಿಪ್ತ ರೂಪ ಅಥವಾ Acronym. ಈ ಸಂಸ್ಥೆಯ ಅಡಿಯಲ್ಲಿ ಭಾರತ ಸರಕಾರವು Prime Minister’s Mudra Yojana (PMMY) ಎಪ್ರಿಲ್‌ 2015 ರಿಂದ ಜಾರಿಯಲ್ಲಿದೆ. ಈ ಸಾಲದ ಯೋಜನೆ ಕೇವಲ ಕಿರು ಮತ್ತು ಸಣ್ಣ ಉದ್ದಿಮೆಗಳಿಗೆ (Micro and Small)ಮಾತ್ರ ಅನ್ವಯವಾಗುತ್ತದೆ. ಸಣ್ಣ ಉತ್ಪಾದಕರು, ಕರಕೌಶಲ ನಿರತರು, ತರಕಾರಿ ವ್ಯಾಪಾರಿಗಳು, ಚಿಕ್ಕ ಅಂಗಡಿ ಮಾಲಕರು, ಟ್ರಕ್‌ ನಡೆಸುವವರು, ರಿಪೇರಿ ನಿರತರು, ಪಶುಸಂಗೋಪನೆ, ಹೈನುಗಾರಿಕೆ, ಮತ್ಸé ಕೃಷಿ, ಪೌಲಿó, ಇತ್ಯಾದಿ ಉದ್ಯಮದಲ್ಲಿ ತೊಡಗಿರುವವರು ಈ ಯೋಜನೆಯ ಅಡಿಯಲ್ಲಿ ಬರುತ್ತಾರೆ. ಆದರೆ ಇದು ಕೃಷಿ ಮತ್ತು ದೊಡ್ಡ ಉದ್ಯಮಗಳಿಗೆ ಸಲ್ಲುವ ಸಾಲದ ಯೋಜನೆ ಅಲ್ಲ. ಇದೊಂದು Non-Corporate, Non-Farm, Small Business ಕ್ಷೇತ್ರದ ಸಾಲ. ಸುಮಾರು 577 ಕೋಟಿ ಅಂತಹ ಕಿರು/ಸಣ್ಣ ಉದ್ಯಮಗಳು ನಮ್ಮ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವುಗಳನ್ನು ಉತ್ತೇಜಿಸಿ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮುದ್ರಾ ಯೋಜನೆಯ ಆಶಯ. 2017ರ ಬಜೆಟ್‌ ಬಳಿಕ ಸರಕಾರವು ಈ ಸಾಲಕ್ಕೆ ಮಹಿಳೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಹಾಗೂ ಟ್ರೈಬಲ್ಸ… ಗಳನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಿ¨ªಾರೆ.

ಕಿರು ಮತ್ತು ಸಣ್ಣ ಉದ್ಯಮಗಳನ್ನು MSMED Act 2006 ಅಡಿಯಲ್ಲಿ ವರ್ಗೀಕರಿಸಲಾಗಿದೆ. ಈ ವರ್ಗೀಕರಣವು ಉತ್ಪಾದನೆ ಮತ್ತು ಸೇವಾ ಉದ್ದಿಮೆಗಳಿಗೆ ಹೂಡಿಕೆಯ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. (ಟೇಬಲ್‌ ನೋಡಿ). ಇದರಲ್ಲಿ ಮೀಡಿಯಂ ತರಗತಿ ಬಿಟ್ಟು ಉಳಿದೆರಡು (ಕಿರು ಮತ್ತು ಸಣ್ಣ) ತರಗತಿಯ ಉದ್ದಿಮೆಗಳಿಗೆ ಮುದ್ರಾ ಅಡಿಯಲ್ಲಿ ಸಾಲ ಲಭ್ಯ.

ಮುದ್ರಾ ಸಾಲವನ್ನು ವಾಣಿಜ್ಯ ಬ್ಯಾಂಕ್‌, ರೀಜನಲ್‌ ರೂರಲ್‌ ಬ್ಯಾಂಕ್‌, ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌, ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಹಾಗೂ ಬ್ಯಾಂಕೇತರ ವಿತ್ತೀಯ ಸಂಸ್ಥೆಗಳಿಂದ ಪಡೆಯಬಹುದು.

ಈ ಮುದ್ರಾ ಸಾಲದಡಿಯಲ್ಲಿ ರೂ. 10 ಲಕ್ಷದವರೆಗೆ ಸಾಲ ಸಿಗುತ್ತದೆ. ಇದರ ಅಡಿಯಲ್ಲಿ ಮೂರು ಸೌಲಭ್ಯಗಳಿವೆ. ಒಂದು ಕಿರು/ಸಣ್ಣ ಉದ್ಯಮವನ್ನು ಆರಂಭಿಸುವ ಮೊದಲು ಅಥವಾ ಆ ಆರಂಭಿಕ ಹಂತದಲ್ಲಿ ಶಿಶು ಯೋಜನೆಯಡಿಯಲ್ಲಿ ರೂ. 50,000 ದವರೆಗೆ ಮುದ್ರಾ ಸಾಲ ಲಭ್ಯ. ಈಗಾಗಲೇ ಅಂತಹ ಉದ್ಯಮವಿದ್ದು ಅದನ್ನು ವಿಸ್ತರಿಸಲಿಚ್ಚಿಸುವವರಿಗೆ ರೂ. 5 ಲಕ್ಷದವರೆಗೆ ಕಿಶೋರ್‌ ಯೋಜನೆಯಡಿಯಲ್ಲಿ ಸಾಲ ಸಿಗುತ್ತದೆ. ಉಳಿದಂತೆ ತರುಣ್‌ ಲೋನ್‌ ರೂ. 10 ಲಕ್ಷದವರೆಗೆ ಕೆಲ ಶರತ್ತುಗಳ ಅನುಸಾರ ಉದ್ಯಮ ಅಭಿವೃದ್ಧಿಗೆ ನೀಡಲಾಗುತ್ತದೆ.

Advertisement

ಮುದ್ರಾ ಸಾಲಕ್ಕೆ ನಿಮ್ಮ ಗುರುತಿನ ಕೆವೈಸಿ ದಾಖಲೆಗಳ ಅಗತ್ಯ ಬೀಳುತ್ತದೆ. ಉದ್ಯಮದ ಹಾಗೂ ಮೆಶಿನರಿಗಳ ಬಗ್ಗೆಯೂ ದಾಖಲೆಗಳು ಅಗತ್ಯ. ಅದಲ್ಲದೆ ನಿಮ್ಮ ಭಾವ ಚಿತ್ರ, ಗುರುತಿನ ಪುರಾವೆ, ವಿಳಾಸದ ಪುರಾವೆ ಅತ್ಯಗತ್ಯ. ಪ್ರಸ್ತುತವಾದಲ್ಲಿ ಜಾತಿ ಪ್ರಮಾಣ ಪತ್ರ, ನಿಮ್ಮ ಪ್ಯಾನ್‌ ಕಾರ್ಡ್‌, ಭದ್ರತೆಗಾಗಿ ಒಂದು ವಿಮೆ ಇತ್ಯಾದಿಗಳನ್ನು ಕೂಡಾ ಬ್ಯಾಂಕುಗಳು ಕೇಳಬಹುದು. ಈ ದಾಖಲೆಗಳು ಬ್ಯಾಂಕಿನಿಂದ ಬ್ಯಾಂಕಿಗೆ ಸಂದರ್ಭಾನುಸಾರ ಬದಲಾಗಬಹುದು. ಆದರೆ ಕಾನೂನು ಪ್ರಕಾರ ಈ ಯೋಜನೆಗೆ ಯಾವುದೇ ನೇರ ಜಾಮೀನಿನ ಅಗತ್ಯವಿರುವುದಿಲ್ಲ. ಇದು ಸುಲಭವಾಗಿ ಸಿಗುವ ಸಣ್ಣ ಮೊತ್ತದ ಬಿಸಿನೆಸ್‌ ಸಾಲ.

ಪಡಕೊಳ್ಳುವುದು ಸುಲಭವಾದರೂ ಇದರ ಮೇಲಿನ ಬಡ್ಡಿ ದರ ಕಡಿಮೆಯೇನಿಲ್ಲ. ಈ ಸಾಲಕ್ಕೆ ಸರಕಾರದ ವತಿಯಿಂದ ಇಂತಿಷ್ಟು ಎನ್ನುವ ನಿಗದಿತ ಬಡ್ಡಿ ದರ ಇರುವುದಿಲ್ಲ. ಪ್ರತಿ ಬ್ಯಾಂಕೂ ಕೂಡಾ ತನ್ನದೇ ಲೆಕ್ಕಾಚಾರದ ಅನುಸಾರ ವಿವಿಧ ಬಡ್ಡಿದರಗಳನ್ನು ವಿಧಿಸುತ್ತದೆ. ಸರಿಸುಮಾರು ಶೇ. 11ರಿಂದ ಶೇ.20 ವರೆಗೂ ವಿವಿಧ ಬ್ಯಾಂಕುಗಳಲ್ಲಿ ಬಡ್ಡಿ ದರಗಳು ಚಾಲ್ತಿಯಲ್ಲಿವೆ. ಸಾಲದ ಮರುಪಾವತಿಯ ಅವಧಿ 1-5 ವರ್ಷಗಳು. ನಿಮ್ಮ ಸಾಲದ ಚರಿತ್ರೆ (ಕ್ರೆಡಿಟ್‌ ಸ್ಕೋರ್‌) ಬಡ್ಡಿ ನಿಗದಿಯಲ್ಲಿ ಮುಖ್ಯ ಪಾತ್ರ ವಹಿಸೀತು.

ಮುದ್ರಾ ಸಾಲ ಒಂದು ಕ್ರೆಡಿಟ್‌ ಕಾರ್ಡ್‌ ಮೂಲಕ ಸಿಗುತ್ತದೆ. ರುಪೇ ಅಡಿಯಲ್ಲಿ ನೊಂದಾಯಿತ ಮುದ್ರಾ ಕಾರ್ಡ್‌ ಅನ್ನು ಬೇಕಾದಂತೆ ಎಟಿಎಂಗಳಲ್ಲಿ, ಪಾವತಿಗಟ್ಟೆಗಳಲ್ಲಿ ಉಪಯೋಗಿ ಸಬಹುದು. ಅಗತ್ಯ ಬಂದಾಗ ಮಾತ್ರ ಈ ದುಡ್ಡು ಸಂದಾಯ ವಾಗುವ ಕಾರಣ ಬಡ್ಡಿಯು ಉಪಯೋಗಕ್ಕೆ ತಕ್ಕಂತೆ ಮಾತ್ರವೇ ಅನ್ವಯವಾಗುವುದು. ಪೂರ್ತಿ ಸಾಲ ಮೊತ್ತಕ್ಕೆ ಅಲ್ಲ.

ಇವಿಷ್ಟು ಮುದ್ರಾ ಸಾಲದ ಬಗ್ಗೆ ಸ್ಥೂಲವಾದ ಪರಿಚಯ. ಯಾವುದೇ ಸರಕಾರಿ ಯೋಜನೆಯೂ ಅನುಷ್ಠಾನ ಹಂತದಲ್ಲಿ ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ. ಬ್ಯಾಂಕಿನಿಂದ ಬ್ಯಾಂಕಿಗೆ ಇದರಲ್ಲಿ ತುಸು ವ್ಯತ್ಯಾಸವನ್ನು ಕಾಣಬಹುದು. ನಿಮಗೆ ನೀಡುವ ಸಾಲದ ಬಗ್ಗೆ ತುಸು ಕಾಳಜಿ ವಹಿಸುವುದು ಬ್ಯಾಂಕುಗಳ ಮೂಲಭೂತ ಕರ್ತವ್ಯವೂ ಆಗಿದೆ. ನೀಡಿದ ಸಾಲಕ್ಕೆ ಅಂತಿಮವಾಗಿ ಅವರೇ ಜವಾಬ್ದಾರರು. (ಮೊನ್ನೆ ತಾನೇ ಆರ್‌.ಬಿ.ಐ. ಇದೇ ಮುದ್ರಾ ಸಾಲವೇ ಮುಂದಿನ ದೊಡ್ಡ ಎನ್‌.ಪಿ.ಎ. ಆಗಬಹುದು ಎನ್ನುವ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು) ಮುದ್ರಾ ಸಾಲದ ಬಗ್ಗೆ ಜನರ ಅನುಭವ/ಅಭಿಪ್ರಾಯಗಳು ವಿಭಿನ್ನವಾಗಿವೆ. ಅದು ಸಹಜ.

ಸಾಲ ಕೊಳ್ಳುವ ಮೊದಲು ನಾಲ್ಕೈದು ಬ್ಯಾಂಕುಗಳಲ್ಲಿ, ಸ್ನೇಹಿತರಲ್ಲಿ ವಿಚಾರಿಸಿ ಸೂಕ್ತ ಅಧ್ಯಯನ ನಡೆಸಿಯೇ ಮುಂದುವರಿಯಬೇಕು.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next